ಕರ್ನಾಟಕ

karnataka

By

Published : Nov 17, 2020, 1:40 AM IST

ETV Bharat / state

ಹಲವು ದೂರು ದಾಖಲಾಗಿವೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗದು : ಹೈಕೋರ್ಟ್

ಬಲವಾದ ಸಾಕ್ಷ್ಯವಿಲ್ಲದ ಸಂದರ್ಭದಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ಸಂವಿಧಾನದ 21ನೇ ವಿಧಿ ನೀಡಿರುವ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕನ್ನು ನಿರ್ಬಂಧಿಸಲಾಗದು ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ಧ ಪೀಠ ಅಭಿಪ್ರಾಯಪಟ್ಟಿದೆ.

bail-cannot-denied-due-to-fact-that-many-complaints-filed-hc
ಹೈಕೋರ್ಟ್

ಬೆಂಗಳೂರು : ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತೆಯು ಆರೋಪಿಯ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಬಲವಾದ ಸಾಕ್ಷ್ಯವಿಲ್ಲದ ಸಂದರ್ಭದಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ಸಂವಿಧಾನದ 21ನೇ ವಿಧಿ ನೀಡಿರುವ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕನ್ನು ನಿರ್ಬಂಧಿಸಲಾಗದು ಎಂದು ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ಧ ಪೀಠ ಅಭಿಪ್ರಾಯಪಟ್ಟಿದೆ.

ಸಿಆರ್​ಪಿಸಿ ಸೆಕ್ಷನ್ 439 (2) ಪ್ರಕಾರ ವಿರಳ ಪ್ರಕರಣಗಳಲ್ಲಿ ಮಾತ್ರ ಜಾಮೀನು ರದ್ದುಗೊಳಿಸುವಂತೆ ಕೋರಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ, ಆರೋಪಿ ವಿರುದ್ಧ 11ಕ್ಕೂ ಅಧಿಕ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮೂರು ಪ್ರಕರಣಗಳು ಆತನ ವಿರುದ್ಧ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಪಟ್ಟದ್ದಾಗಿವೆ. ಹಾಗೆಯೇ ಆತ ಮದುವೆಯಾಗುವುದಾಗಿ ನಂಬಿಸಿ ಕೆಲ ಮಹಿಳೆಯರಿಗೆ ವಂಚಿಸಿದ್ದಾನೆ. ಆದ್ದರಿಂದ ಆರೋಪಿತನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಆರೋಪಿತ ವ್ಯಕ್ತಿಯ ಪರ ವಾದಿಸಿದ್ದ ವಕೀಲರು, ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಹಾಗೂ ಅವು ಬಾಕಿ ಇವೆ ಎಂಬ ಆಧಾರದಲ್ಲಿ ಆತನನ್ನು ನಿರಂತರ ಅಪರಾಧಗಳನ್ನು ಎಸಗುವ ವ್ಯಕ್ತಿ (ಹೆಬಿಚುಯಲ್ ಅಫೆಂಡರ್) ಎಂದು ನಿರ್ಣಯಿಸಲಾಗದು. ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಪಟ್ಟಿದ್ದಲ್ಲಿ ಮಾತ್ರ ಆತನನ್ನು ಅಪರಾಧ ಅಭ್ಯಾಸವುಳ್ಳ ವ್ಯಕ್ತಿ ಎಂದು ಪರಿಗಣಿಸಬಹುದು. ಅರ್ಜಿದಾರರು ಆರೋಪಿತ ವಿರುದ್ಧ ದಾಖಲಾಗಿರುವ ಸಿವಿಲ್ ಪ್ರಕರಣಗಳನ್ನು ಸೇರಿಸಿ ಆತನನ್ನು ಹೆಬಿಚುಯಲ್ ಅಫೆಂಡರ್ ಎಂದು ಆರೋಪಿಸಿರುವ ಕ್ರಮ ಸರಿಯಲ್ಲ. ಇನ್ನು ಹಲವು ದೂರುಗಳು ದಾಖಲಾಗಿವೆ ಎಂಬ ಕಾರಣಕ್ಕೆ ಜಾಮೀನು ರದ್ದುಗೊಳಿಸಿದರೆ, ಅದು ವಿಧಿ 21ರ ಉಲ್ಲಂಘನೆಯಾಗಲಿದೆ ಎಂದು ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ:

ನಗರದ ಕೋರಮಂಗಲದ 37 ವರ್ಷದ ವ್ಯಕ್ತಿ ಹಾಗೂ ಸಂತ್ರಸ್ತೆ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್ ಮೂಲಕ ಪರಸ್ಪರ ಪರಿಚಯವಾಗಿ, ಫೋನ್​ ನಂಬರ್ ಬದಲಾಯಿಸಿಕೊಂಡಿದ್ದರು. ಈ ವೇಳೆ ಆರೋಪಿ ವ್ಯಕ್ತಿ ತಾನು ಓರ್ವ ಯಶಸ್ವಿ ಬ್ಯುಸಿನೆಸ್​ಮನ್, ತನ್ನ ಉದ್ದಿಮೆ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಇದೆ ಎಂದು ಹೇಳಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ, ಮದುವೆ ಮಾತುಕತೆಯೂ ನಡೆದು ದೈಹಿಕ ಸಂಪರ್ಕವೂ ಆಗಿತ್ತು.

ಆದರೆ, ಕೆಲ ದಿನಗಳ ಬಳಿಕ ಆತ ದೈಹಿಕ ಸಂಪರ್ಕಕ್ಕಷ್ಟೇ ಯುವತಿಯನ್ನು ಒತ್ತಾಯಿಸುತ್ತಿದ್ದ. ಅಲ್ಲದೇ ತಾವಿಬ್ಬರೂ ಮದುವೆಯಾಗಿದ್ದೇವೆ ಎಂದು ಎಲ್ಲರೆದುರು ಹೇಳಿಕೊಳ್ಳುವಂತೆ ತಿಳಿಸಿದ್ದ. ಆದರೆ ಹಿನ್ನೆಲೆ ಪರೀಕ್ಷಿಸಿದಾಗ ಆತನಿಗೆ ಮದುವೆಯಾಗಿ ಮಗು ಇರುವುದು ಬೆಳಕಿಗೆ ಬಂದಿತ್ತು. ಇದರ ನಡುವೆ ಆರೋಪಿ ಸಂತ್ರಸ್ತೆಗೆ 31.88 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದರು.

ABOUT THE AUTHOR

...view details