ಕರ್ನಾಟಕ

karnataka

ETV Bharat / state

ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - ಸಿ ಆರ್​ ಪಿ ಸಿ ಸೆಕ್ಷನ್ 98ರ ಅಡಿ ವಿಚಾರಣೆ

ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧು ಮಾಡಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

high court
ಹೈಕೋರ್ಟ್​

By

Published : Feb 18, 2023, 7:11 AM IST

ಬೆಂಗಳೂರು:ಚುನಾವಣಾ ಅಕ್ರಮ ಆರೋಪದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆಯು ಅಸಿಂಧುಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿ ತೀರ್ಪು ಕಾಯ್ದಿರಿಸಿತು.

ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಪ್ರಕರಣವನ್ನು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ. ಎಷ್ಟು ದಿನ ವಾದ, ಸಾಕ್ಷ್ಯ ಪರಿಶೀಲನೆ, ಸಿ ಆರ್​ ಪಿ ಸಿ ಸೆಕ್ಷನ್ 98ರ ಅಡಿ ವಿಚಾರಣೆ ನಡೆಸಲಾಗಿದೆ. ವಿಭಿನ್ನವಾದ ಲಿಖಿತ ವಾದವನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಹೊರೆ ಹೆಚ್ಚಿಸಿದ್ದಾರೆ. ಹೀಗಾಗಿ, ಅರ್ಜಿಯನ್ನು ತುರ್ತಾಗಿ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ಗೌರಿ ಶಂಕರ್ ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿಕೊಂಡು ಒಟ್ಟಾಗಿ ಚುನಾವಣಾ ಅಕ್ರಮ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ಪರಿಶೀಲಿಸಿದ ಪೀಠವು ಪ್ರತಿ ಬಾರಿಯೂ ವಿಚಾರಣೆ ಮುಂದೂಡಿಕೆ ಕೋರಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಲಾಗದು. ಇಂದೇ ವಾದ ಮಂಡಿಸುವಂತೆ ನ್ಯಾಯಾಲಯವು ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿತು.

ಪ್ರತಿವಾದಿಗಳ ಪರವಾದ ಮಂಡಿಸಿದ ವಕೀಲರು, ಹಾಲಿ ಪ್ರಕರಣದಲ್ಲಿ ಶಾಸಕ ಗೌರಿಶಂಕರ್ ಅವರ ಕುಟುಂಬ ಸದಸ್ಯರು ಭಾಗಿಯಾಗಿಲ್ಲ. ಅರ್ಜಿದಾರರು ಹೇಳುತ್ತಿರುವಂತೆ ಇತರ ಪ್ರತಿವಾದಿಗಳು ನಮ್ಮ ಪಕ್ಷದ ಕಾರ್ಯಕರ್ತರು ಆಗಿಲ್ಲ. ನಮ್ಮ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ನಂತರ ಹೈಕೋರ್ಟ್​ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಕಾಯ್ದಿರಿಸಿತು.

ಪ್ರಕರಣದ ಹಿನ್ನೆಲೆ ಏನು?: ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರ ಸುರೇಶ್‌ಗೌಡ ಕೋರಿದ್ದಾರೆ.

ಚುನಾವಣಾ ಅಕ್ರಮ ಆರೋಪ ಎದುರಿಸುತ್ತಿರುವ ಸಚಿವ ಮುನಿರತ್ನ:2018ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಮುನಿರತ್ನರವರು ಸ್ಪರ್ಧಿಸಿದ್ದರು. ಇವರಿಗೆ ಎದುರಾಳಿಯಾಗಿ ಬಿಜೆಪಿ ಪಕ್ಷದಿಂದ ತುಳಸಿ ಮುನಿರಾಜು ಗೌಡ ಚುನಾವಣಾಕ್ಕೆ ನಿಂತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಇಬ್ಬರ ಚುನಾವಣಾ ಪ್ರಚಾರ ಬಹಳ ಬಿರುಸಾಗಿಯೆ ನಡಿಯುತ್ತಿತ್ತು. ಈ ವೇಳೆ, ಕಾಂಗ್ರೆಸ್​ ಅಭ್ಯರ್ಥಿ ಮುನಿರತ್ನ ಜನರಿಗೆ ನಕಲಿ ವೋಟರ್​ ಐಡಿಗಳು ಹಾಗೂ ವಿವಿಧ ಬೇರೆ ಬೇರೆ ಅಕ್ರಮಗಳ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದ್ದಾರೆಂದು ಮುನಿರಾಜುಗೌಡ ಮುನಿರತ್ನನ ವಿರುದ್ಧ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದ್ದರು.

ಹೀಗಾಗಿ ಚುನಾವಣಾ ಆಯೋಗ ಮುನಿರತ್ನರವರ ಬೆಂಬಲಿಗರ ಮೇಲೆ ದಾಳಿ ನಡೆಸಿತ್ತು, ಅಲ್ಲದೆ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಕೆಲ ಸಮಯ ಮುಂದೂಡಿತ್ತು. ತದನಂತರ ಚುನಾವಣೆ ನಡೆದು ಮುನಿರತ್ನ ಮುನಿರಾಜುಗೌಡರ ವಿರುದ್ಧ 25 ಸಾವಿರ ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಇದನ್ನು ವಾಪಾಸು ಪ್ರಶ್ನಿಸಿದ್ದ ಮುನಿರಾಜುಗೌಡ ಇದರಲ್ಲಿ ಅಕ್ರಮವಿದೆ ಎಂದು ಹೈಕೋರ್ಟ್​ ಮೊರೆ ಹೋಗಿ ಮುನಿರತ್ನರವರನ್ನು ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದಾವೆ ಹೂಡಿದ್ದರು.

ಅದರ ಅಡಿಯಲ್ಲಿ ಕೋರ್ಟ್​ನಲ್ಲಿ ನಿರಂತರ ವಿಚಾರಣೆ ನಡೆಯುತ್ತಿದೆ. ಸದ್ಯದ ವರದಿ ಪ್ರಕಾರ ಮುನಿರಾಜುಗೌಡ ಅವರು ಸಚಿವ ಮುನಿರತ್ನ ನನ್ನ ಪರ ಮತ ಹಾಕದಂತೆ ಮತದಾರರಿಗೆ ಬೆದರಿಕೆ ಹಾಕಿದ್ದಾರೆ, ಹೀಗಾಗಿ ನಾನು ಚುನಾವಣೆಯಲ್ಲಿ ಸೋತೆ ಎಂದು ಹೈಕೋರ್ಟ್​ನಲ್ಲಿ ವಿವರಿಸಿದ್ದಾರೆ. ಈ ಕುರಿತು ಅರ್ಜಿದಾರರು ನೀಡುವ ಎಲ್ಲಾ ವಿಷಯಗಳನ್ನು ದಾಖಲಿಸಿ, ವಾದ ಮಾಡುವಾಗ ಅದನ್ನು ಪರಿಶೀಲಿಸೋಣ ಎಂದು ತಿಳಿಸಿ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದ್ದಾರೆ.

ಇದನ್ನೂ ಓದಿ:17 ಸಾವಿರ ಮಕ್ಕಳು ಮರಳಿ ಶಾಲೆಗೆ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

ABOUT THE AUTHOR

...view details