ಬೆಂಗಳೂರು: ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿಯೂ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಸ್ವತಃ ಯಡಿಯೂರಪ್ಪ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಕೆ ಮಾಡುವ ಮೂಲಕ ಚೌತಿಯನ್ನು ಆಚರಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿ ಕುಟುಂಬ ಸದಸ್ಯರ ಜೊತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಗೌರಿ ಗಣೇಶ ಹಬ್ಬವನ್ನು ಆಚರಿಸಿದರು. ನಿವಾಸದಲ್ಲಿ ವಿಶೇಷ ಅಲಂಕಾರ ಮಾಡಿ, ತಳಿರು ತೋರಣವನ್ನು ಸಿಂಗರಿಸಿ ಮಣ್ಣಿನ ಗಣಪನನ್ನು ತಂದು ಪೂಜೆ ಸಲ್ಲಿಕೆ ಮಾಡಲಾಯಿತು. ಪುತ್ರ, ಶಾಸಕ ಬಿ ವೈ ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರ ಜೊತೆ ವಿಶೇಷ ಪೂಜೆ ಸಲ್ಲಿಸಿ ಗಣೇಶ ಹಬ್ಬವನ್ನು ಆಚರಿಸಿದರು. ಈ ವೇಳೆ ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ ಯಡಿಯೂರಪ್ಪ, ಗೌರಿ ಗಣೇಶ ಎಲ್ಲ ವಿಘ್ನಗಳನ್ನು ಪರಿಹರಿಸಿ ಎಲ್ಲರಿಗೂ ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ವಿನಾಯಕ ಚೌತಿಯ ಆಚರಣೆಯ ಫೋಟೋವನ್ನು ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಂಚಿಕೊಂಡಿದ್ದಾರೆ.
ಬಿ ವೈ ವಿಜಯೇಂದ್ರ ತಮ್ಮ ಎಕ್ಸ್ ಆ್ಯಪ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಚೌತಿಯ ಶುಭಾಶಯವನ್ನು ಕೋರಿದ್ದಾರೆ. "ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನನಿವಾರಕ ಶ್ರೀ ಗಣಪ ಹಾಗೂ ತಾಯಿ ಗೌರಿಯು ನಾಡಿಗೆ ಎದುರಾಗಿರುವ ಬರದ ಸಂಕಷ್ಟವನ್ನು ದೂರಗೊಳಿಸಿ, ಕಾಲಕಾಲಕ್ಕೆ ಮಳೆ ಬೆಳೆ ಆಗುವ ಮೂಲಕ ಎಲ್ಲೆಡೆ ಸುಖ, ಶಾಂತಿ,ಸಮೃದ್ಧಿ ಹಾಗೂ ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸೋಣ" ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ: ದೊಡ್ಡಗಣಪತಿ ದೇವಸ್ಥಾನ ಸೇರಿದಂತೆ ನಗರದ ಗಣಪತಿ ದೇವಾಲಯಗಳಲ್ಲಿ ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಭಕ್ತರು ಮುಂಜಾನೆಯಿಂದಲೇ ಗಣಪತಿ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು. ಇನ್ನು ವಿನಾಯಕನನ್ನು ಕೂರಿಸಿ ಸಂಭ್ರಮದಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಒಳ್ಳೆಯ ಸಮಯ ಇದೆ ಎನ್ನುವ ಕಾರಣಕ್ಕಾಗಿ ಮುಂಜಾನೆಯೇ ಗಣಪತಿ ವಿಗ್ರಹಗಳನ್ನು ಕೊಂಡೊಯ್ದರೂ ಮಧ್ಯಾಹ್ನದ ವೇಳೆಗೆ ಬೀದಿಗಳು, ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಗಣಪತಿ ಕೂರಿಸಿ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ:₹2.5 ಕೋಟಿ ಮೌಲ್ಯದ ನೋಟು, ₹56 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ದೇಗುಲ ಅಲಂಕಾರ!- ನೋಡಿ