ಕರ್ನಾಟಕ

karnataka

By

Published : Mar 15, 2023, 5:28 PM IST

ETV Bharat / state

ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ನಿಷೇಧಿಸುವಂತೆ ಆಟೋ ಸಂಘಟನೆಗಳ ಕರೆ

ಸರ್ಕಾರ ಚುನಾವಣೆ ಮುನ್ನ ವೈಟ್​ ಬೋರ್ಡ್​ ಬೈಕ್‌ ಟ್ಯಾಕ್ಸಿಯನ್ನು ನಿಷೇಧಿಸದಿದ್ದಲ್ಲಿ ಚಾಲಕರು ಚುನಾವಣೆಯನ್ನು ಬಹಿಷ್ಕರಿಸುವಂತೆ ಸಂಘಟನೆಗಳು ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಆಟೋ ಅಂಡ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು.

auto-organizations-call-for-ban-on-illegal-white-board-bike-taxis
ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ನಿಷೇಧಿಸುವಂತೆ ಆಟೋ ಸಂಘಟನೆಗಳ ಕರೆ

ಬೆಂಗಳೂರು:ಆಟೋ ಚಾಲಕರಿಗೆ ಮಾರಕವಾಗಿರುವ ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಕಳೆದ 3 ವರ್ಷಗಳಿಂದ ಒತ್ತಾಯಿಸುತ್ತಾ ಬಂದಿರುವ ಆಟೋ ಚಾಲಕರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟವನ್ನು ಆಟೋಗಳಲ್ಲಿ ಕಟ್ಟಿಕೊಂಡು ಇತರ ರಾಜ್ಯಗಳಲ್ಲಿ ನಿಷೇಧಿಸಿರುವಂತೆ ನಮ್ಮ ರಾಜ್ಯದಲ್ಲಿ ನಿಷೇಧಿಸುವವರೆಗೆ ಆಟೋ ಚಾಲಕರಿಂದ ನಿರಂತರ ಹೋರಾಟ ಮಾಡಲಾಗುವುದು ಎಂದು ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಇಂದು ತಿಳಿಸಿದೆ.

ಆದರ್ಶ ಆಟೋ ಅಂಡ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ರಾಜ್ಯಾಧ್ಯಕ್ಷ ಎಂ ಮಂಜುನಾಥ್ ಮಾತನಾಡಿ, ನಗರದಲ್ಲಿ ಆಟೋರಿಕ್ಷಾ ಸೇವೆಯು ಸುಮಾರು 60 ವರ್ಷಗಳಿಂದ ಇದೆ. ಬಿಎಂಟಿಸಿಯ ನಂತರ ಬೆಂಗಳೂರು ನಗರದಲ್ಲಿ ನಿತ್ಯ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುತ್ತಿದೆ. ಬೆಂಗಳೂರಿನಲ್ಲಿ ಆಟೋರಿಕ್ಷಾ ಬಹುದೊಡ್ಡ ಉದ್ಯಮವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶ ಕೊಟ್ಟಿದೆ.

ಜೊತೆಗೆ ಸರ್ಕಾರಕ್ಕೆ ಚಾಲನಾ ಪತ್ರ ನವೀಕರಣ, ಜೀವಿತಾವಧಿ ತೆರಿಗೆ, ಫಿಟ್‌ನೆಸ್ ಸರ್ಟಿಫಿಕೇಟ್, ಇನ್ಸೂರೆನ್ಸ್, ರಹದಾರಿ ನವೀಕರಣ ಇದಲ್ಲದೇ ದಂಡದ ರೂಪದಲ್ಲಿ ನೇರವಾಗಿ ತೆರಿಗೆ ಪಾವತಿಸುತ್ತಿದ್ದು, ಪರೋಕ್ಷ ತೆರಿಗೆಯಾಗಿ ಹೊಸ ವಾಹನಗಳ ಖರೀದಿ, ಆಟೋರಿಕ್ಷಾಗಳಿಗೆ ಬಳಸುವ ಇಂಧನ, ಬಿಡಿಭಾಗಗಳ ಖರೀದಿ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಇತರ ರೂಪದಲ್ಲಿ ಸರ್ಕಾರದ ಆರ್ಥಿಕತೆಗೆ ತೆರಿಗೆ ಪಾವತಿಸುವ ದೊಡ್ಡ ಉದಿಮೆಯಾಗಿದೆ. ಪ್ರಸ್ತುತ ಜಾಗತೀಕರಣ, ಡಿಜಿಟಲೀಕರಣ, ವಿದೇಶಿ ನೇರ ಬಂಡವಾಳ ಆಕರ್ಷಣೆ ಮತ್ತು ಹೊಸ ತಾಂತ್ರಿಕ ಬದಲಾವಣೆಯಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಬಂದಿವೆ ಎಂದು ಹೇಳಿದರು.

ಚಾಲಕರ ಬದುಕು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದೆ: ಮುಖ್ಯವಾಗಿ ಆಪ್ ಆಧಾರಿತ ಸಾರಿಗೆ ವ್ಯವಸ್ಥೆ ನೀಡುವ ಅಗ್ರಿಗೇಟರ್ ಕಂಪನಿಗಳು ಹೊಸದಾಗಿ ಸಾರಿಗೆ ಕ್ಷೇತ್ರಕ್ಕೆ ಬಂದು ಬೇಕಾ ಬಿಟ್ಟಿಯಾಗಿ ಪ್ರಯಾಣಿಕರಿಗೆ ಆಫರ್​​​ಗಳನ್ನು ಹಾಗೂ ಚಾಲಕರಿಗೆ ಇನ್‌ಸೆಂಟಿವ್‌ ಹೆಸರಿನಲ್ಲಿ ಆಮಿಷಗಳನ್ನು ಒಡ್ಡಿ ದುರಾಸೆ ತೋರಿಸಿ ಬೈಕ್‌ ಟ್ಯಾಕ್ಸಿ ಚಾಲನೆಗೆ ಅವರನ್ನು ಸೆಳೆದು ಸಣ್ಣ ವ್ಯಾಪಾರಸ್ಥರು ಹಾಗೂ ಕೈಗಾರಿಕೆಗಳನ್ನು ಒಕ್ಕಲೆಬ್ಬಿಸಿ ರಾಜ್ಯದ ಆರ್ಥಿಕ ವ್ಯವಸ್ಥೆ ಹಾಗೂ ಸರಬರಾಜು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಲು ವೈಟ್​ ಬೋರ್ಡ್​ ಬೈಕ್‌ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಕಾರ್ಯೊನ್ಮುಖರಾಗುತ್ತಿವೆ. ಇದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದೆ ಎಂದು ಹೇಳಿದರು.

ಆಟೋ ಚಾಲಕರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟವನ್ನು ಆಟೋಗಳಲ್ಲಿ ಕಟ್ಟಿಕೊಂಡು ಇತರ ರಾಜ್ಯಗಳಲ್ಲಿ ನಿಷೇಧಿಸಿರುವಂತೆ ನಮ್ಮ ರಾಜ್ಯದಲ್ಲಿ ನಿಷೇಧಿಸುವವರೆಗೆ ಆಟೋ ಚಾಲಕರಿಂದ ನಿರಂತರ ಹೋರಾಟಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಸರ್ಕಾರ ಚುನಾವಣೆ ಮುನ್ನ ಬೈಕ್‌ ಟ್ಯಾಕ್ಸಿಯನ್ನು ನಿಷೇಧಿಸದಿದ್ದಲ್ಲಿ ಚಾಲಕರು ಚುನಾವಣೆಯನ್ನು ಬಹಿಷ್ಕರಿಸುವಂತೆ ಸಂಘಟನೆಗಳು ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಂಜುನಾಥ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ: ಸಾರ್ವಜನಿಕರ ಆಕ್ರೋಶ

ABOUT THE AUTHOR

...view details