ಬೆಂಗಳೂರು: ರ್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಬೇಕು, ಬೌನ್ಸ್ ಕಂಪೆನಿಯ ಎಲೆಕ್ಟ್ರಿಕ್ ಬೈಕ್ಗಳಿಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ಸಾರಿಗೆ ಇಲಾಖೆಯ ವಿರುದ್ಧ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಮುಷ್ಕರ ನಡೆಸಿದ್ದಾರೆ.
ಚಾಲಕರು ಬೃಹತ್ ಆಟೋ ರ್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಆಟೋ ಮುಷ್ಕರಕ್ಕೆ 21 ಆಟೋ ಚಾಲಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ವಿವಿಧ ಯೂನಿಯನ್ಗಳಿಂದ ಸುಮಾರು 10 ಸಾವಿರ ಜನರು ಭಾಗವಹಿಸಿದ್ದರು.
ಪೋಸ್ಟರ್ ಮೂಲಕ ಪ್ರಧಾನಿಗೆ ಮನವಿ:ಪ್ರತಿಭಟನೆಯ ವೇಳೆ ಮಾತನಾಡಿದ ಬೆಂಗಳೂರು ಆಟೋ ಚಾಲಕರ ಮಾಲೀಕರ ಸಂಘದ ಸಂಚಾಲಕ ಮಂಜುನಾಥ್, ಎರಡು ಸಾವಿರ ಆಟೋ ಡ್ರೈವರ್ಗಳು ಪೋಸ್ಟರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಕಳುಹಿಸಲಿದ್ದಾರೆ. ಈ ಕೂಡಲೇ ಇ- ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು ಎಂದರು.
ಉಪವಾಸ ಸತ್ಯಾಗ್ರಹದ ಬೆದರಿಕೆ:ತಮ್ಮ ಮನವಿಯನ್ನು ಪರಿಗಣಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. ಇ-ಟ್ಯಾಕ್ಸಿ, ಬೈಕ್, ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸದಿದ್ದರೆ ಬೆಂಗಳೂರಲ್ಲಿ ಒಂದು ಆಟೋ ಕೂಡ ರಸ್ತೆಗಿಳಿಯುವುದಿಲ್ಲ. ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.