ಕರ್ನಾಟಕ

karnataka

ಬೊಮ್ಮಾಯಿ ಸಂಪುಟ ಸೇರಲು ಲಾಬಿ : ಬಿಎಸ್​ವೈ ನಿವಾಸಕ್ಕೆ ಶಾಸಕರು, ಸ್ವಾಮೀಜಿಗಳ ದಂಡು

By

Published : Aug 2, 2021, 11:54 AM IST

ಸಿಎಂ ಸ್ಥಾನ ಅಲಂಕರಿಸಿರುವ ಬಸವರಾಜ ಬೊಮ್ಮಾಯಿಯವರಿಗೆ ಸಂಪುಟ ರಚನೆಯ ಸವಾಲು ಎದುರಾಗಿದ್ದು, ವರಿಷ್ಠರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಬಿಎಸ್​ವೈ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬೊಮ್ಮಾಯಿ ಸಂಪುಟ ಸೇರಲು ಶಾಸಕರು ಬಿಎಸ್​ವೈ ಜೊತೆ ಲಾಬಿ ನಡೆಸುತ್ತಿದ್ದಾರೆ.

Aspirants lobbying with BSY for ministerial Post
ಸಚಿವ ಸ್ಥಾನಕ್ಕಾಗಿ ಲಾಭಿ

ಬೆಂಗಳೂರು:ಸಚಿವ ಸಂಪುಟ ರಚನೆ ಕುರಿತು ದೆಹಲಿಯಲ್ಲಿ ವರಿಷ್ಠರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸುತ್ತಿದ್ದರೆ, ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಆಕಾಂಕ್ಷಿಗಳಿಂದ ಲಾಬಿ ಮುಂದುವರೆದಿದೆ. ಹಲವರು ಸಚಿವ ಸ್ಥಾನಕ್ಕಾಗಿ ಬಿಎಸ್​ವೈ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಇಂದು, ತೀರ್ಥಹಳ್ಳಿ ಶಾಸಕ ಅರಗ ಜ್ಞಾ‌ನೇಂದ್ರ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗರ ಜೊತೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಂಪುಟದಲ್ಲಿ ಅವಕಾಶಕ್ಕೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಯಡಿಯೂರಪ್ಪನವರ ಭೇಟಿಯಲ್ಲಿ ವಿಶೇಷವೇನಿಲ್ಲ. ಬೆಂಗಳೂರಿಗೆ ಬಂದಾಗಲೆಲ್ಲಾ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ. ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸದಿರಲು ಯಾವುದೇ ಕಾರಣಗಳು ಇಲ್ಲ. ಯಡಿಯೂರಪ್ಪನವರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಅವರ ಜೊತೆ ಜೊತೆಯಲ್ಲಿ ಬೆಳೆದವನು. ನನ್ನನ್ನು ಬಿಎಸ್​ವೈ ಗುರುತಿಸುತ್ತಾರೆ, ಸಂಘ ಸಹ ಗುರುತಿಸುತ್ತದೆ. ಈ ಬಾರಿ ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ : ಜೆ.ಪಿ ನಡ್ಡಾ ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ: ಹಿರಿಯರಿಗೆ ಕೊಕ್, ಹೊಸಬರಿಗೆ ಮಣೆ?

ವಿಧಾನಪರಿಷತ್ ಸದಸ್ಯ​ ಎನ್. ರವಿಕುಮಾರ್​ಗೆ ಕೂಡ ಸಚಿವ ಸ್ಥಾನ ನೀಡುವಂತೆ ಒತ್ತಡ ತರಲಾಗುತ್ತಿದೆ. ಬಿಎಸ್​ವೈ ಭೇಟಿ ಮಾಡಿದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ರವಿಕುಮಾರ್​ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ.

ಬಿಎಸ್​ವೈ ಭೇಟಿ ಬಳಿಕ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಗಂಗಾಮತಸ್ಥ ಸಮುದಾಯದಲ್ಲಿ ಮೂವರು ಎಂಎಲ್​ಸಿಗಳಿದ್ದಾರೆ. ಎನ್. ರವಿಕುಮಾರ್, ಸಾಬಣ್ಣ ತಳವಾರ್, ಲಾಲಾಜಿ ಮೆಂಡನ್ ಈ‌ ಮೂವರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಕೇಳಿದ್ದೇವೆ. ಯಡಿಯೂರಪ್ಪ ಅವರು ಸಚಿವ ಸ್ಥಾನ ಕೊಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.

ABOUT THE AUTHOR

...view details