ಕರ್ನಾಟಕ

karnataka

ETV Bharat / state

ನಿಗಮ ಮಂಡಳಿ ಪರೀಕ್ಷಾ ಅಕ್ರಮದ ನೈತಿಕ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಅಶ್ವತ್ಥನಾರಾಯಣ್ ಆಗ್ರಹ

ಪರೀಕ್ಷಾ ಅಕ್ರಮ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಆರೋಪಿಸಿದರು.

By ETV Bharat Karnataka Team

Published : Oct 30, 2023, 5:51 PM IST

ಮಾಜಿ ಡಿಸಿಎಂ ಅಶ್ವತ್ಥನಾರಾಯಣ್
ಮಾಜಿ ಡಿಸಿಎಂ ಅಶ್ವತ್ಥನಾರಾಯಣ್

ಬೆಂಗಳೂರು: ನಿಗಮ ಮಂಡಳಿ ಪರೀಕ್ಷಾ ಅಕ್ರಮದ ಹೊಣೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೊತ್ತುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ. ಮಲ್ಲೇಶ್ವರದಲ್ಲಿ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗ ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಅವ್ಯವಸ್ಥೆ ಆಗುತ್ತದೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಮೆರಿಟ್ ಆಧಾರದ ಮೇಲೆ ಹುದ್ದೆಗಳು ಸಿಗಲ್ಲ. ನಿಗಮ ಮಂಡಳಿ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷಾ ಅಕ್ರಮವನ್ನು ಪತ್ತೆ ಹಚ್ಚಿದ್ದೇವೆ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಆರ್.ಡಿ,ಪಾಟೀಲ್ ಈಗಾಗಲೇ ಗರಿ ಬಿಚ್ಚಿ, ವ್ಯವಹಾರ ಶುರು ಮಾಡಿದ್ದಾರೆ. ಸರ್ಕಾರ ಇದನ್ನು ತಡೆಯುವಲ್ಲಿ ವಿಫಲವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಆರ್.ಡಿ.ಪಾಟೀಲ್‌ನನ್ನು ಮತ್ತೆ ಬಂಧಿಸುವಲ್ಲಿ ವಿಫಲವಾಗಿದ್ದೀರಿ. ಪ್ರಿಯಾಂಕ್ ಖರ್ಗೆ ಅವರೇ ಸೋಲಿನಲ್ಲೂ, ಗೆಲುವು ಅಂತ ಹೊರಟಿದ್ದೀರಿ.

ನೀವೇನು ಪರೀಕ್ಷಾ ಅಕ್ರಮ ಪತ್ತೆ ಹಚ್ಚಿಲ್ಲ. ನೀವು ಕೂಡ ಇದರಲ್ಲಿ ಶಾಮೀಲಾಗಿದ್ದೀರಿ. ನಿಮ್ಮ ತಂದೆ ಕಾಲದಲ್ಲಿ ನಡೆದಿರುವ ಪಿಎಸ್ಐ ನೇಮಕಾತಿ ನೋಡಿಕೊಂಡು ಬರಬೇಕು. ನಮ್ಮ ಕಾಲದಲ್ಲಿ ಸಚಿವ ಆರಗ ಜ್ಞಾನೇಂದ್ರ ಅಕ್ರಮ ಹೊರಗೆ ತಂದಿದ್ದಾರೆ. ಆರ್.ಡಿ.ಪಾಟೀಲ್ ಜೊತೆ ಸೇರಿ ನೀವು ಅಕ್ರಮದಲ್ಲಿ ಭಾಗಿಯಾಗಿದ್ದೀರಿ. ಯಾವ್ಯಾವ ಕಾಲದಲ್ಲಿ ಏನೇನು ನಡೆದಿದೆ. ಈಗ ಗೊತ್ತಿಲ್ಲ ಅಂತಿದ್ದೀರಾ.? ಕ್ರಮ ವಹಿಸಿರೋದು ಆರಗ ಜ್ಞಾನೆಂದ್ರ ಅವರು. ನೀವು ಕ್ರೆಡಿಟ್ ತಗೊಳೋಕೆ ಹೊರಟಿದ್ದೀರಿ. ಇದರಿಂದ ಮೆರಿಟ್ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಿ‌. ಸಿಎಂ ಸಿದ್ದರಾಮಯ್ಯ, ನೀವು ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ ಎಂದು ಆರೋಪಿಸಿದ್ದಾರೆ.

ಆರ್.ಡಿ.ಪಾಟೀಲ್ ಜೈಲಿಂದ ಬೇಲ್ ಪಡೆದು ಬಂದು ಪರಿಕ್ಷಾ ಅಕ್ರಮ ಎಸಗಿದ್ದಾನೆ. ಈತ ಪರೀಕ್ಷೆಗಳನ್ನು ಅಕ್ರಮ ನಡೆಸೋದನ್ನು ಹವ್ಯಾಸ‌ ಮಾಡಿಕೊಂಡಿದ್ದಾನೆ. ಈ ಅಕ್ರಮಕ್ಕೆ ಸರ್ಕಾರದ ಪ್ರೇರಣೆ, ಸಹಕಾರ ಇದೆ. ಇವರ ಸರ್ಕಾರದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೋಸ ಆಗುತ್ತಿದೆ. ಸರ್ಕಾರದಿಂದಲೇ ಅನ್ಯಾಯ ಆಗುತ್ತಿದೆ ಎಂದು ಮಾಜಿ ಡಿಸಿಎಂ ಕಿಡಿಕಾರಿದರು.

ಆಪರೇಷನ್ ಆರೋಪ:ಪ್ರಿಯಾಂಕ್ ಖರ್ಗೆ ಮಾಡಿರುವ ಆಪರೇಷನ್ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, ಇವರು ಪ್ರತಿಪಕ್ಷದಲ್ಲಿ ಇದ್ದಾಗ ಕೆಲಸ ಇಲ್ಲದವರಾ? ಅಥವಾ ವಿಪಕ್ಷ ಅಂದರೆ ಕೆಲಸ ಇಲ್ಲದವರಾ? ಆಯ್ತು ನೀವು ಆಡಳಿತ ಪಕ್ಷದಲ್ಲಿದ್ದೀರಿ. ನೀವು ನಿಮ್ಮ ಪಕ್ಷದ ಶಾಸಕರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ. ನಿಮ್ಮ ಶಾಸಕರನ್ನು ಕೊಂಡುಕೊಳ್ಳಲು ಬಿಡುತ್ತಿದ್ದೀರಾ.? ಇಷ್ಟು ಹಣ ಕೊಟ್ಟರೆ ನಮ್ಮ ಶಾಸಕರನ್ನು ಕೊಂಡುಕೊಳ್ಳಬಹುದು ಅಂತ ಹೇಳುತ್ತಿದ್ದಾರೆ.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಆಡಳಿತದಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಜನರ ಸಿಂಪತಿ ಪಡೆಯಲು ಹೀಗೆ ಹೇಳುತ್ತಿದ್ದಾರೆ. ಯಾವ ರೀತಿ ಸರ್ಕಾರ ಬೀಳಿಸಲು ಸಾಧ್ಯ? ನಾವು 65 ಜನ ಇದ್ದೇವೆ. ನಾವು ಸರ್ಕಾರ ಮಾಡಬೇಕು ಅಂದ್ರೆ ಅವರೆಲ್ಲಾ ರಾಜೀನಾಮೆ ಕೊಡಬೇಕು. ಅದು ಸಾಧ್ಯವಾ.? ನಿಮ್ಮ ಶಾಸಕರನ್ನು ಅಸಹಾಯಕರನ್ನಾಗಿ ಮಾಡುತ್ತಿದ್ದೀರಿ. ಅವರ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಬೀಳೋದಕ್ಕೆ ನಮ್ಮ ಪಕ್ಷದಿಂದ ಯಾವುದೇ ಪ್ರಯತ್ನ ಇಲ್ಲ. ನೀವೇನಾದ್ರೂ ಮಾಡುತ್ತಿದ್ದೀರಾ ಸಿದ್ದರಾಮಯ್ಯ ಅವರೇ.? ಎಂದು ವ್ಯಂಗ್ಯವಾಡಿದರು.

ಈ ಮೊದಲು ಕಾಂಗ್ರೆಸ್​ನಲ್ಲಿ ಪರಮೇಶ್ವರ್ ಅವರು ಸಿಎಂ ಸ್ಥಾನ ಕೇಳಿರಲಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ನನ್ನ ಉಪ ಮುಖ್ಯಮಂತ್ರಿ ಮಾಡಿ ಅಂತ ಗೋಗರೆದಿದ್ದರು. ಅವರನ್ನು ಡಿಸಿಎಂ ಮಾಡಲೇ ಇಲ್ಲ. ಈಗ ಪರಮೇಶ್ವರ್ ಅವರ ಮೂಗಿಗೆ ತುಪ್ಪ ಸವರೋದು ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ, ಆ ಗುಂಪು, ಈ ಗುಂಪು ಅಂತ ಅನೇಕ ಸಭೆ ಮಾಡುತ್ತಿದ್ದಾರೆ. ದುಬೈಗೆ ಹೋಗೋದು, ಹೊಸ ಕಾರ್ ಖರೀದಿ ಮಾಡೋದು, ಕಚೇರಿ ನವೀಕರಣ ಮಾಡೋದು ಇದೇ ಆಗಿದೆ. ನಯಾಪೈಸೆ ಅಭಿವೃದ್ಧಿ ಮಾಡಿಲ್ಲ‌. ಯಾಕೆ ಶಾಸಕ ರವಿ ಗಣಿಗ ಆಪರೇಷನ್ ಅಂತಿದ್ದಾರೆ ಅಂದರೆ ಅವರಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ. ಅದಕ್ಕೆ ನಮಗೆ ಆಫರ್ ಇದೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ನಮ್ಮಿಂದಲೂ ಸರ್ಕಾರ ಬಂದಿದೆ ಅಂತ ನೇರವಾಗಿ ಹೇಳುತ್ತಿದ್ದಾರೆ. ನೀವು ಮಾತ್ರ ಲೂಟಿ ಹೊಡೆದರೆ ಸಾಕಾ ಎಂದು ಅಶ್ವತ್ಥನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೆಲಮಂಗಲ ನಾಗರಾಜ್ ಅವರ ಸಿಡಿ ಇಟ್ಟುಕೊಂಡು ಬೆದರಿಸುತ್ತಿದ್ದಾರೆ ಅನ್ನೊ ವಿಚಾರ ಪ್ರಸ್ತಾಪವಾಗಿದೆ. ಸಿಡಿ ಎಲ್ಲಾ ಒಂದು ಸಂಸ್ಕೃತಿ ಆಗಿದೆ. ಒಬ್ಬರಿಗೊಬ್ಬರು ದ್ವೇಷ ಬೆಳೆಸಿಕೊಂಡಿದ್ದಾರೆ. ಅಧಿಕಾರದಾಹದಲ್ಲಿ ತೊಡಗಿದ್ದಾರೆ. ಅವರೇ ಮಾಡಿಕೊಂಡ ತಪ್ಪನ್ನು ಬಿಜೆಪಿ ಮೇಲೆ ಬಿಂಬಿಸೋ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಬಹಳ ದೊಡ್ಡ ಬಹುಮತ ಬಂದಿದೆ. ಅವರು ಕೈಚೆಲ್ಲಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅವರಿಂದಲೇ ಸರ್ಕಾರ ಪತನ ಆಗಲಿದೆ ಎಂದು ಅಶ್ವತ್ಥನಾರಾಯಣ್ ಭವಿಷ್ಯ ನುಡಿದರು.

50 ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ಗೆ ಪತ್ರ ಬರೆಯಲು ಮುಂದಾಗಿರುವ ವಿಚಾರ ನಡೆದಿದೆ. ಮುಖ್ಯಮಂತ್ರಿ ಬದಲಾಗಬೇಕು. ಉಪ ಮುಖ್ಯಮಂತ್ರಿಯಾಗಿರಬೇಕು. ಮಂತ್ರಿಗಳು ಹೆಚ್ಚಾಗಬೇಕು. ಅಧಿಕಾರ ಬದಲಾಗಬೇಕು ಎಂದು ಎಲ್ಲರೂ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಅರಾಜಕತೆ ಯಾವ ಪರಿಸ್ಥಿತಿಗೆ ಬಂದಿದೆ ಎಂದು ಇದರಿಂದಲೇ ನೋಡಬಹುದು. ಅವರ ಪಕ್ಷದ ವರಿಷ್ಠರೇ ಅವರಿಗೆ ಉತ್ತರ ಕೊಡಬೇಕು. ಅವರ ಪಕ್ಷದಲ್ಲಿ ಸಂಪೂರ್ಣ ಅಸಮಾಧಾನ ಇದೆ. ನಿಮ್ಮಲ್ಲಿ ಲೀಡರ್​ ಶಿಪ್ ಕ್ವಾಲಿಟಿ ಇಲ್ಲ. ನಮ್ಮಲ್ಲಿ ಇದೆ ನಮಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಆ ಪಕ್ಷದವರೇ ಅವರಿಗೆ ಉತ್ತರ ಕೊಡಬೇಕು ಎಂದು ಕಾಂಗ್ರೆಸ್​ಗೆ ಅಶ್ವತ್ಥನಾರಾಯಣ ತಿರುಗೇಟು ನೀಡಿದರು.

ಇದನ್ನೂ ಓದಿ:ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಹೆಚ್​ಡಿಕೆ ನಡೆಸುವ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ: ಅಶ್ವತ್ಥ ನಾರಾಯಣ್

ABOUT THE AUTHOR

...view details