ಕರ್ನಾಟಕ

karnataka

By

Published : Jun 1, 2023, 5:15 PM IST

ETV Bharat / state

'ತೇಲುವ ಚಿನ್ನ'ವೆಂಬ ಅಂಬರ್ ಗ್ರಿಸ್​ ತಂದು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ..!

ತಮಿಳುನಾಡಿನಿಂದ ಬೆಂಗಳೂರಿಗೆ ಅಂಬರ್ ಗ್ರಿಸ್ ತಂದಿದ್ದ ಆರೋಪಿಗಳು, ವಿ.ವಿ ಪುರಂ ಬಳಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Arrest of two people
'ತೇಲುವ ಚಿನ್ನ'ವೆಂಬ ಆ್ಯಂಬರ್ ಗ್ರಿಸ್ ತಂದು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

ಬೆಂಗಳೂರು:ತಮಿಳುನಾಡಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅಂಬರ್ ಗ್ರಿಸ್ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ತಿರುಚಿ ಮೂಲದ ಸೆಲ್ವರಾಜ್ (34) ಹಾಗೂ ಹರಿಹರನ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 6.5 ಕೆಜಿ ತೂಕದ ಅಂಬರ್ ಗ್ರಿಸ್​ ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನಿಂದ ಬೆಂಗಳೂರಿಗೆ ಅಂಬರ್ ಗ್ರಿಸ್ ತಂದಿದ್ದ ಆರೋಪಿಗಳು, ವಿ.ವಿ ಪುರಂ ಬಳಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಏನಿದು ಅಂಬರ್ ಗ್ರಿಸ್ ? ಇದರ ಬಳಕೆ ಎಲ್ಲಿ:ಅಂಬರ್ ಗ್ರಿಸ್ ಅಥವಾ ತೇಲುವ ಚಿನ್ನ ಎಂದು ಕರೆಯಲ್ಪಡುವ ಇದನ್ನು ತಿಮಿಂಗಿಲಗಳು ಉತ್ಪತಿ ಮಾಡುತ್ತವೆ. ವಾಸ್ತವದಲ್ಲಿ ಇದು ತಿಮಿಂಗಿಲಗಳ ವೀರ್ಯವಾಗಿದೆ. ಆದರೆ, ತಿಮಿಂಗಿಲಗಳು ಇದನ್ನ ಬಾಯಿ ಮುಖಾಂತರ ಬಿಡುಗಡೆ ಮಾಡುವುದರಿಂದ ಇದನ್ನು ವೇಲ್ ವಾಮಿಟಿಂಗ್ ಎಂದು ಸಹ ಕರೆಯುತ್ತಾರೆ. ಅಂಬರ್ ಗ್ರಿಸ್​ಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಕೆ ಮಾಡುವುದರಿಂದ ಸುವಾಸನೆ ಹೆಚ್ಚು ಮತ್ತು ದೀರ್ಘವಾಗಿರುತ್ತದೆ ಎನ್ನಲಾಗುತ್ತದೆ.

ಅದೇ ಕಾರಣದಿಂದಾಗಿಯೇ ಪ್ರಾಚೀನ ಈಜಿಪ್ಟ್ ಕಾಲದಿಂದ ಇಂದಿನ ಖ್ಯಾತನಾಮ ಸುಗಂಧ ದ್ರವ್ಯ ಕಂಪನಿಗಳು ಅಂಬರ್ ಗ್ರಿಸ್​ಗಾಗಿ ಕೋಟಿ ಕೋಟಿ ಕೊಟ್ಟು ಖರೀದಿಸುತ್ತವೆ. ಆದರೆ, ಅಂಬರ್ ಗ್ರಿಸ್​ ಅನ್ನ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅಳಿವಿನಂಚಿನಲ್ಲಿರುವ ನೈಸರ್ಗಿಕ ಸಂಪನ್ಮೂಲ ಎಂದು ಘೋಷಿಸಿರುವ ಕಾರಣ ಇದರ ಮಾರಾಟ ಹಾಗೂ ಸರಬರಾಜು ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ.

ಮಾದಕ ವಸ್ತುಗಳ ದಂಧೆಯ ವಿರುದ್ಧ ಕಾರ್ಯಾಚರಣೆ- ಪೊಲೀಸ್​ ಇಲಾಖೆ ಅಲರ್ಟ್:ಶಾಲೆ ಹಾಗೂ ಕಾಲೇಜು, ಪಾರ್ಕ್ ಸೇರಿದಂತೆ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹೌದು, ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಮಧ್ಯರಾತ್ರಿ 21 ಆರೋಪಿಗಳನ್ನು ಅರೆಸ್ಟ್​ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದ 18 ಆರೋಪಿಗಳು ಮತ್ತ ಮಾರಾಟದಲ್ಲಿ ತೊಡಗಿದ್ದ ಮೂವರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 11 ಗ್ರಾಂ ಎಂಡಿಎಂಎ ಹಾಗೂ 7 ಗ್ರಾಂ ಹೈಡ್ರಾ ಮಾಂಗೋ ಮತ್ತು 2.5 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕವಾದ ಅಲೋಕ್ ಮೋಹನ್ ಅವರು ನಗರದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತ ನಗರವಾಗಿ ಮಾಡಲು ಸೂಚನೆ ನೀಡಿದ್ದಾರೆ. ಡಿಜಿ ಮತ್ತು ಐಜಿಪಿ ಅವರ ಖಡಕ್ ಸೂಚನೆ ಹಿನ್ನೆಲೆ ನಗರದ ಎಲ್ಲಾ ವಿಭಾಗಗಳ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಶಾಲೆ ಹಾಗೂ ಕಾಲೇಜುಗಳ ಪುನರಾರಂಭಕ್ಕೂ ಮುನ್ನ ಮಾದಕ ವಸ್ತುಗಳ ದಂಧೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಬಸ್: ಪವಾಡದಂತೆ ಬದುಕುಳಿದ 47 ಪ್ರಯಾಣಿಕರು!

ABOUT THE AUTHOR

...view details