ಬೆಂಗಳೂರು: ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಬೃಹತ್ ಮಹಾನಗರ ಪಾಲಿಕೆ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚನೆಯಾದ ಜಂಟಿ ಪರಿಶೀಲನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್, ಉಪಮೇಯರ್ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಳ ಮಾಡುವುದು, ವಲಯ ಆಯಕ್ತರ ಹುದ್ದೆ ಸೃಷ್ಟಿ ಮಾಡುವುದು ಸೇರಿದಂತೆ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಬೃಹತ್ ಮಹಾನಗರ ಪಾಲಿಕೆ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚನೆಯಾದ ಜಂಟಿ ಪರಿಶೀಲನಾ ಸಮಿತಿಗೆ ಈ ಕೆಳಕಂಡ ಸದಸ್ಯರನ್ನು ನೇಮಕ ಮಾಡಲಾಗಿದೆ.
ವಿಧಾನಸಭೆ ಸದಸ್ಯರಾದ ಎಸ್.ರಘು, ರವಿ ಸುಬ್ರಮಣ್ಯ, ಎಂ. ಕೃಷ್ಣಪ್ಪ, ಎಂ. ಸತೀಶ್ ರೆಡ್ಡಿ, ಅರವಿಂದ ಲಿಂಬಾವಳಿ, ಉದಯ ಗರುಡಾಚಾರ್, ಎಸ್.ಆರ್.ವಿಶ್ವನಾಥ್, ರಾಜುಗೌಡ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಆರ್. ಮಂಜುನಾಥ್, ಡಾ.ಕೆ.ಶ್ರೀನಿವಾಸಮೂರ್ತಿ ಮತ್ತು ವಿಧಾನಪರಿಷತ್ ಸದಸ್ಯರಾದ ಕೆ. ಗೋವಿಂದ ರಾಜು, ಎಂ. ನಾರಾಯಣಸ್ವಾಮಿ, ಪಿ.ಆರ್. ರಮೇಶ್, ಕೆ.ಎ ತಿಪ್ಪೇಸ್ವಾಮಿ, ಎನ್. ರವಿಕುಮಾರ್, ಅ. ದೇವೇಗೌಡ, ಡಾ.ತೇಜಸ್ವಿನಿಗೌಡ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಜಂಟಿ ಪರಿಶೀಲನಾ ಸಮಿತಿಗೆ ಸದಸ್ಯರ ನೇಮಕ ವಿಧೇಯಕ ಸಂಬಂಧ ಇಲಾಖೆಯ ಸಚಿವರು ಮತ್ತು ಕಾನೂನು ಸಚಿವರು ಸಹ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ವಿಧಾನಸಭೆ ಸದನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಮಂಡಿಸಲಾಯಿತು. ಸದನದಲ್ಲಿ ಮಂಡನೆಯಾದರೂ ಆಡಳಿತ ಪಕ್ಷದ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಇದರ ಪರಿಣಾಮ ವಿಧೇಯಕ ಕುರಿತು ಚರ್ಚಿಸಿ ಕೆಲವೊಂದು ಬದಲಾವಣೆ ತರುವ ಸಂಬಂಧ ಜವಾಬ್ದಾರಿಯನ್ನು ಜಂಟಿ ಸದನ ಸಲಹಾ ಸಮಿತಿಗೆ ವಹಿಸಲಾಯಿತು.
ಕಾಂಗ್ರೆಸ್ ಸದಸ್ಯರ ಬಹಿಷ್ಕಾರ ಹಾಗೂ ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆಯೇ ಸರ್ಕಾರ ವಿಧೇಯಕವನ್ನು ಮಂಡಿಸಿ ಅನುಮೋದನೆ ನೀಡುವಂತೆ ಕೋರಿತ್ತು. ಆದರೆ, ಏಕಾಏಕಿ ವಿಧೇಯಕ ಮಂಡನೆಯಾಗಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ವಿಧೇಯಕದಲ್ಲಿನ ಅಂಶಗಳ ಕುರಿತು ಚರ್ಚಿಸದೆ ಅಂಗೀಕರಿಸುವುದು ಸೂಕ್ತವಲ್ಲ. ಅಲ್ಲದೇ, ಪ್ರತಿಪಕ್ಷ ಸದಸ್ಯರು ಗೈರು ಹಾಜರಿದ್ದು, ಅವರ ಅಭಿಪ್ರಾಯಗಳನ್ನು ಪಡೆಯದೆ ಒಪ್ಪಿಗೆ ಪಡೆದುಕೊಳ್ಳುವುದು ಸೂಕ್ತವಲ್ಲ. ಚರ್ಚೆಗೆ ಅವಕಾಶ ನೀಡಿದ ಬಳಿಕ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಲಾಗಿತ್ತು.
ಆಡಳಿತ ಪಕ್ಷದ ಸದಸ್ಯರಿಂದಲೇ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ವಿಧೇಯಕ ಕುರಿತು ಚರ್ಚಿಸುವ ಸಂಬಂಧ ಜಂಟಿ ಸದನ ಸಲಹಾ ಸಮಿತಿಗೆ ಒಪ್ಪಿಸಲಾಗಿತ್ತು. ಇದೀಗ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.