ಕರ್ನಾಟಕ

karnataka

ರಸ್ತೆ ಅಪಘಾತ : ಬೆಂಗಳೂರಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು

By

Published : Mar 15, 2023, 4:27 PM IST

ಬೆಂಗಳೂರಿನ ಜಾವ ಸಿಲ್ಕ್ ಬೋರ್ಡ್ ಸಮೀಪದ ಹೊಸೂರು ರಸ್ತೆಯ ಎಕ್ಸ್‌ಪ್ರೆಸ್ ವೇನಲ್ಲಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಚಾಲಕ ಸೇರಿ ಇಬ್ಬರು ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಕಾರ್ತಿಕ್ ಹಾಗೂ ಭಗೀರಥ ರೆಡ್ಡಿ
ಕಾರ್ತಿಕ್ ಹಾಗೂ ಭಗೀರಥ ರೆಡ್ಡಿ

ಬೆಂಗಳೂರು : ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಚಾಲಕ ಸೇರಿ ಇಬ್ಬರು‌ ಅಪಘಾತದಲ್ಲಿ ದುರಂತ ಅಂತ್ಯ‌ ಕಂಡಿರುವ ಘಟನೆ ನಿನ್ನೆ ಬೆಳಗ್ಗಿನ ಜಾವ ಸಿಲ್ಕ್ ಬೋರ್ಡ್ ಸಮೀಪದ ಹೊಸೂರು ರಸ್ತೆಯ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಮೂಲದ ಕಾರ್ತಿಕ್ (23) ಹಾಗೂ ಭಗೀರಥ ರೆಡ್ಡಿ (17) ಮೃತ ದುದೈರ್ವಿಗಳು ಎಂದು ತಿಳಿದುಬಂದಿದೆ.

ಅತಿ ವೇಗದಿಂದ ಸಾಗುತ್ತಿದ್ದ ಪರಿಣಾಮ ಕಾರ್ತಿಕ್ ರೆಡ್ಡಿ ಚಲಾಯಿಸುತ್ತಿದ್ದ ಕಾರು ಚತುಷ್ಪಥ ರಸ್ತೆಯ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಕಾರು ಹಾಗೂ ಬಸ್ಸಿಗೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರೂ ಸಹ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದವರಾದ ಇಬ್ಬರೂ ಸಹ ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಮಡಿವಾಳ‌ ಸಂಚಾರಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ದಾವಣಗೆರೆ ಬಸ್‌ ಪಲ್ಟಿಯಾಗಿ 20 ಜನರಿಗೆ ಗಾಯ:ಇನ್ನೊಂದೆಡೆ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿಯಾಗಿ ಭಾರಿ ದುರಂತವೊಂದು ತಪ್ಪಿರುವ ಘಟನೆ ನಗರದ ಬೇತೂರು ರಸ್ತೆ ಬಳಿ ಸೋಮವಾರ ನಡೆದಿತ್ತು. ಬಸ್ ಸೇತುವೆ ಮೇಲೆ ಹತ್ತಿದ್ದು ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು. ಅದೃಷ್ಟವಶಾತ್​ ಬಸ್ ಸೇತುವೆ ಮೇಲಿಂದ ಕೆಳಗೆ ಬಿದ್ದಿರಲಿಲ್ಲ.

ಇದನ್ನೂ ಓದಿ :ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ಸಾವು: ಕೊಲೆ ಆರೋಪ

ಪಲ್ಟಿಯಾಗಿದ್ದ ಬಸ್​​ನಲ್ಲಿದ್ದ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಗಾಜು ಒಡೆದು ಕಿಟಕಿಯಿಂದ ಹೊರ ಬಂದಿದ್ದರು. ಈ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್​​ ಆಗಿದ್ದವು. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳುಗಳು ರಸ್ತೆಯಲ್ಲೇ ಕುಳಿತು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ಕಂಡು ಬಂದಿದ್ದವು. ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟಿದ್ದರು. ಬಸ್ ದಾವಣಗೆರೆ ಜಿಲ್ಲೆಯ ಜಗಳೂರಿನ ಮೂಲಕ ಪ್ರಯಾಣಿಕರನ್ನು ಹೊತ್ತು ದಾವಣಗೆರೆ ನಗರಕ್ಕೆ ಆಗಮಿಸುತ್ತಿತ್ತು. ಈ ವೇಳೆ ಅವಘಡ ಸಂಭವಿಸಿತ್ತು.

ಇದನ್ನೂ ಓದಿ :ತಂದೆ ಸಾವು, ಮನನೊಂದ ಮಗ ಆತ್ಮಹತ್ಯೆಗೆ ಶರಣು.. ಕೌಟುಂಬಿಕ ಕಲಹಕ್ಕೆ ಒಂದೇ ದಿನ ಇಬ್ಬರು ಬಲಿ

ಸಣ್ಣ ಹಳ್ಳಕ್ಕೆ ಕಟ್ಟಲಾದ ಸೇತುವೆಗೆ ಡಿಕ್ಕಿ:ಇನ್ನೊಂದೆಡೆ ದಾವಣಗೆರೆ ನಗರದ ಬೇತೂರು ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು ಬಸ್​ ಉರುಳಿರುವ ಘಟನೆ ನಡೆದಿತ್ತು. ಮಹಿಳೆಯರು ಹಾಗೂ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್​ ಅಪಘಾತದಲ್ಲಿ ಪ್ರಾಣಹಾನಿಯಾಗಿಲ್ಲ. ಅವಘಡಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ. ದಾವಣಗೆರೆ ಅಜಾದ್ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ದಾವಣಗೆರೆ: ಬಸ್‌ ಪಲ್ಟಿಯಾಗಿ 20 ಜನರಿಗೆ ಗಾಯ, ಕಿಟಕಿ ಒಡೆದು ಹೊರಬಂದ ಪ್ರಯಾಣಿಕರು

ABOUT THE AUTHOR

...view details