ಕರ್ನಾಟಕ

karnataka

ETV Bharat / state

ಮಾದಕ ವಸ್ತುಗಳ ವಿರುದ್ಧ ಸರ್ಕಾರವು ಶೂನ್ಯ ಸಹಿಷ್ಣುತೆಯ ನೀತಿ ಅಳವಡಿಸಿಕೊಂಡಿದೆ: ಅಮಿತ್ ಶಾ

ಡ್ರಗ್ಸ್ ವಿರುದ್ಧದ ಹೋರಾಟ ಕೇವಲ ಸರ್ಕಾರ ಮಾತ್ರ ಮಾಡುವುದಲ್ಲ, ಜನತೆಯೂ ಕೈಜೋಡಿಸಬೇಕು ಆಗ ಮಾತ್ರ ಈ ಸಮಸ್ಯೆ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

By

Published : Mar 24, 2023, 7:49 PM IST

Updated : Mar 24, 2023, 7:55 PM IST

amit-shah-in-regional-conference-of-drug-trafficking
ಸರ್ಕಾರ ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ:ಅಮಿತ್ ಶಾ

ಬೆಂಗಳೂರು:ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾದಕ ದ್ರವ್ಯ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ. ಆದರೂ ಡ್ರಗ್ಸ್ ವಿರುದ್ಧದ ಹೋರಾಟ ಕೇವಲ ಸರ್ಕಾರ ಮಾತ್ರ ಮಾಡುವುದಲ್ಲ ಜನತೆಯೂ ಕೈಜೋಡಿಸಬೇಕು. ಅದೇ ರೀತಿ ಕರಾವಳಿಯಲ್ಲಿಯೂ ಆಯಾ ರಾಜ್ಯಗಳು ಅಗತ್ಯ ಕಣ್ಗಾವಲು ಇಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ತಾರಾ ಹೋಟೆಲ್​​ನಲ್ಲಿ ನಡೆದ ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ದಕ್ಷಿಣದ 5 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ 1,235 ಕೋಟಿ ಮೌಲ್ಯದ 9,298 ಕೆಜಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಇದಲ್ಲದೆ, ಶಿವಮೊಗ್ಗದಲ್ಲಿ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ತೆರೆಯಲು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ನಡುವೆ ತಿಳುವಳಿಕೆ ಪತ್ರಕ್ಕೂ ಸಹಿ ಹಾಕಲಾಯಿತು.

ಒಟ್ಟು 5,94,620 ಕೆ.ಜಿ. ಮಾದಕ ದ್ರವ್ಯ ನಾಶಪಡಿಸಲಾಗಿದೆ: ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಜೂನ್ 01, 2022 ರಿಂದ ಪ್ರಾರಂಭವಾದ 75 ದಿನಗಳ ಅಭಿಯಾನದಲ್ಲಿ 75,000 ಕೆಜಿ ಮಾದಕ ದ್ರವ್ಯವನ್ನು ನಾಶಪಡಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಇದುವರೆಗೆ ಒಟ್ಟು 5,94,620 ಕೆ.ಜಿ. ಮೌಲ್ಯದ 8,409 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಇದುವರೆಗೆ ನಾಶಪಡಿಸಲಾದ ಒಟ್ಟು ಮಾದಕವಸ್ತುಗಳ ಪೈಕಿ 3,138 ಕೋಟಿ ಮೌಲ್ಯದ 1,29,363 ಕೆಜಿಯನ್ನು ಎನ್‌ಸಿಬಿಯಿಂದಲೇ ನಾಶಪಡಿಸಲಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಮಾದಕ ದ್ರವ್ಯಗಳ ನಿಗ್ರಹಕ್ಕೆ ಮೂರು ಅಂಶಗಳ ವಿಧಾನವನ್ನು ಅಳವಡಿಸಿಕೊಂಡಿದೆ. ಸಾಂಸ್ಥಿಕ ರಚನೆಗಳನ್ನು ಬಲಪಡಿಸುವುದು, ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ಏಜೆನ್ಸಿಗಳ ಸಬಲೀಕರಣ ಮತ್ತು ಅವುಗಳ ನಡುವೆ ಸಮನ್ವಯ ಬಲಪಡಿಸುವುದು ಮತ್ತು ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವುದು ಈ ತ್ರಿಕೋನ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಸಮಸ್ಯೆ ಕೇವಲ ರಾಜ್ಯ ಅಥವಾ ಕೇಂದ್ರಕ್ಕೆ ಸಂಬಂಧಿಸಿದ್ದಲ್ಲ, ಇದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀಯ ಮತ್ತು ಏಕತೆಯಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು.

ಇಡೀ ಜಾಲವನ್ನು ಭೇದಿಸಲು ಮಾದಕ ದ್ರವ್ಯ ಪ್ರಕರಣಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು, ಯಾವುದೇ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸಬಾರದು. 2006-2013ರ ನಡುವೆ ಒಟ್ಟು 1257 ಪ್ರಕರಣಗಳು ದಾಖಲಾಗಿದ್ದು, ಇದು 2014-2022ರ ನಡುವೆ 3172ಕ್ಕೆ ತಲುಪಿದೆ, ಈ ಅವಧಿಯಲ್ಲಿ ಶೇ.152ರಷ್ಟು ಏರಿಕೆಯಾಗಿದೆ, ಅದೇ ಅವಧಿಯಲ್ಲಿ ಬಂಧಿತರ ಪ್ರಮಾಣ 1362 ರಿಂದ 4888ಕ್ಕೆ ತಲುಪಿದ್ದು ಶೇ.260ರಷ್ಟು ಹೆಚ್ಚಳವಾಗಿದೆ. 2006-2013ರ ಅವಧಿಯಲ್ಲಿ 1.52 ಲಕ್ಷ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, 2014-2022ರ ನಡುವೆ 3.30 ಲಕ್ಷ ಕೆಜಿಗೆ ದ್ವಿಗುಣಗೊಂಡಿದ್ದು, 2006-2013ರಲ್ಲಿ 768 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, 2014-2022ರ ನಡುವೆ ಇದು 25 ಪಟ್ಟು ಹೆಚ್ಚಳವಾಗಿ 20,000 ಕೋಟಿ ರೂ.ಗೆ ತಲುಪಿದೆ ಎಂದು ವಿವರ ನೀಡಿದರು.

ದೇಶದಿಂದ ಡ್ರಗ್ಸ್ ಹಾವಳಿಯನ್ನು ತೊಡೆದು ಹಾಕಲು ಮೋದಿ ಸರ್ಕಾರದ ಅಭಿಯಾನದ ನಾಲ್ಕು ಆಧಾರ ಸ್ತಂಭಗಳಿವೆ. ಡ್ರಗ್ಸ್ ಪತ್ತೆ, ನೆಟ್‌ವರ್ಕ್ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ. ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಪರಿಣಾಮಕಾರಿ ಕ್ರಮಕ್ಕಾಗಿ NCORD ಪೋರ್ಟಲ್ ಮತ್ತು NIDAAN ವೇದಿಕೆಯ ಬಳಕೆ ಮಾಡುವುದು, ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಲು ವಿವಿಧ ರಾಜ್ಯಗಳಲ್ಲಿ ರಚನೆಯಾಗಿರುವ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯನ್ನು ಬಲಪಡಿಸುವುದು ಈ ಸಮಯದ ಅಗತ್ಯವಾಗಿದೆ ಎಂದರು.

ಎನ್‌ಡಿಪಿಎಸ್ ಕಾಯ್ದೆಯ ವಿವಿಧ ನಿಬಂಧನೆಗಳನ್ನು ಸಹ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಡ್ರಗ್ಸ್ ವಿರುದ್ಧ ಸಂಪೂರ್ಣ ಸರ್ಕಾರ ವಿಧಾನವನ್ನು ಅಳವಡಿಸಿಕೊಂಡಿದೆ. ಸಹಕಾರ, ಸಮನ್ವಯ ಮತ್ತು ಸಹಯೋಗವನ್ನು ಹೆಚ್ಚಿಸುವ ಮೂಲಕ ಮಾದಕ ದ್ರವ್ಯ ಮುಕ್ತ ಭಾರತ ಮಾಡಲು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳು ಮುಂದಾಗಬೇಕು. ಕರಾವಳಿ ಭದ್ರತೆ ಮತ್ತು ಸಮುದ್ರ ಮಾರ್ಗಗಳ ಮೇಲೆ ಗಮನ ಹೆಚ್ಚಿಸುವ ಅವಶ್ಯಕತೆಯಿದೆ ಮತ್ತು ದಕ್ಷಿಣ ಸಮುದ್ರ ಮಾರ್ಗದಲ್ಲಿ ಬಿಗಿಯಾದ ನಿಗಾ ಇಡಬೇಕು ಎಂದು ಅಮಿತ್ ಶಾ ಹೇಳಿದರು.

ರಾಜ್ಯದಲ್ಲಿ ಡ್ರಗ್ ನಿಯಂತ್ರಣಕ್ಕೆ ಗಂಭೀರ ಕ್ರಮ.. ಸಿಎಂ ಬೊಮ್ಮಾಯಿ:ರಾಜ್ಯದಲ್ಲಿ ಮಾದಕವಸ್ತು ನಿಯಂತ್ರಣಕ್ಕೆ ಗಂಭೀರ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾದಕವಸ್ತು ನಿಯಂತ್ರಣದಲ್ಲಿ ಜೀರೊ ಟಾಲರನ್ಸ್ ಜಾರಿಗೊಳಿಸಲಾಗಿದ್ದು, ಮಾದಕವಸ್ತುಗಳ ನಿಯಂತ್ರಣಕ್ಕೆ ಸಮಾಜದ ಸಹಕಾರ ಮುಖ್ಯ. ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕಾನೂನು ಅಪರಾಧವನ್ನು ನಿಯಂತ್ರಿಸುವ ಕೆಲಸವಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ ಕೇವಲ 60 ಕಿಮಿ ಅಂತರದಲ್ಲಿ ತಮಿಳುನಾಡು ಗಡಿ ಇದೆ.‌ ಹಾಗಾಗಿ ಮಾದಕ ವಸ್ತು ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸಹಕಾರ ಅತ್ಯಂತ ಮುಖ್ಯ ಎಂದರು.

ಮಾದಕವಸ್ತು ನಿಯಂತ್ರಣ ಸಾಧ್ಯ:ಎನ್‌ಡಿಪಿಎಸ್ ಕಾಯ್ದೆಯನ್ನು ಸರಳೀಕರಣಗೊಳಿಸಿ ಹೆಚ್ಚಿನ ಪ್ರಕರಣ‌ ದಾಖಲಿಸಲು ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಮಾದಕವಸ್ತು ನಿಯಂತ್ರಣ ಮಾಡಲು ಸಾಧ್ಯವಿದೆ. ಹೊರ ದೇಶಗಳ ಪ್ರಜೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದ್ದು, ಕೇಂದ್ರ ಸರ್ಕಾರದ ಅಮಿತ್ ಶಾ ಅವರ ನೇತೃತ್ವದಲ್ಲಿ ಸಾಕಷ್ಟು ಸಹಕಾರ ಸಿಗುತ್ತಿದೆ. ಅವರ ಮಾರ್ಗದರ್ಶನ ನಮಗೆ ಅಗತ್ಯ. ದಕ್ಷಿಣ ಭಾರತ ಮಾದಕವಸ್ತು ಸಮ್ಮೇಳನ ಆಯೋಜಿಸಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ:ನಾಳೆ ಕರ್ನಾಟಕಕ್ಕೆ ಪ್ರಧಾನಿ ಮೋದಿ: ಈ ವರ್ಷ ಏಳನೇ ಭೇಟಿ

Last Updated : Mar 24, 2023, 7:55 PM IST

ABOUT THE AUTHOR

...view details