ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ ಧರಣಿ ಮಧ್ಯೆಯೇ ಅಂಗೀಕಾರಗೊಂಡ ಐದು ವಿಧೇಯಕಗಳು..!

ಜೆಡಿಎಸ್, ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಚರ್ಚೆಗೆ ಅವಕಾಶ ನೀಡದೇ ಐದು ವಿಧೇಯಕಗಳನ್ನು ಧ್ವನಿ ಮತದ ಮೂಲಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

By

Published : Jul 19, 2023, 5:37 PM IST

five bills were passed in the assembly
ಧರಣಿ, ಘೋಷಣೆ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಐದು ವಿಧೇಯಕಗಳು

ಬೆಂಗಳೂರು:ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಸೇರಿದಂತೆ ಐದು ವಿಧೇಯಕಗಳು ಪ್ರತಿಪಕ್ಷ ಸದಸ್ಯರ ಧರಣಿ, ಘೋಷಣೆಗಳ ನಡುವೆ ವಿಧಾನಸಭೆಯಲ್ಲಿ ಇಂದು ಬುಧವಾರ ಅಂಗೀಕಾರಗೊಂಡವು.

ಧರಣಿ ನಡುವೆಯೇ ವಿಧೇಯಕಗಳು ಧ್ವನಿಮತದಿಂದ ಅಂಗೀಕಾರ:2023ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ನೇ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ, 2023ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕಗಳಿಗೆ ಸಚಿವರು ಪರ್ಯಾಲೋಚಿಸಬೇಕೆಂದು ಸೂಚಿಸಿದರು. ನಂತರ ಸ್ಪೀಕರ್ ಯು.ಟಿ. ಖಾದರ್ ಅವರು ಮತಕ್ಕೆ ಹಾಕಿದರು. ಧ್ವನಿ ಮತದ ಮೂಲಕ ಐದು ವಿಧೇಯಕಗಳಿಗೆ ಒಪ್ಪಿಗೆ ಪಡೆಯಲಾಯಿತು. ಬಡವರ ಹಾಗೂ ಸಣ್ಣ ರೈತರ ಪ್ರಕರಣವನ್ನು 6 ತಿಂಗಳೊಳಗಾಗಿ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಸಿವಿಲ್ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆಯ ಸಂಹಿತೆ ತಿದ್ದುಪಡಿಗೆ ವಿಧಾನಸಭೆ ಅಂಗೀಕಾರ ನೀಡಿತು.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹತ್ತಾರು ವರ್ಷಗಳಿಂದ ಬಾಕಿ ಉಳಿದಿದೆ. ಅವುಗಳು ಇತ್ಯರ್ಥಗೊಳ್ಳದೇ ಬಡವರಿಗೆ ನ್ಯಾಯ ದೊರೆಯುತ್ತಿಲ್ಲ. ನ್ಯಾಯಾಲಯದ ವೆಚ್ಚ ಭರಿಸುವ ಆರ್ಥಿಕ ಶಕ್ತಿಯೂ ಬಡವರಲ್ಲಿ ಕುಗ್ಗುತ್ತಿದೆ ಎಂದು ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಸಿಪಿಸಿಗೆ ತಿದ್ದುಪಡಿ ತರುತ್ತಿದೆ. ಇದರ ಪ್ರಕಾರ ಬಡವರ ಪ್ರಕರಣಗಳು ತ್ವರಿತವಾಗಿ ವಿಚಾರಣೆಯಾಗಿ 6 ತಿಂಗಳಲ್ಲಿ ವಿಲೇವಾರಿ ಆಗಬೇಕಿದೆ. ಮಹತ್ವದ ಹಾಗೂ ಕ್ರಾಂತಿಕಾರಿಯಾದ ಈ ಕಾನೂನು ಬಡವರಿಗೆ ಹಾಗೂ ರೈತರಿಗೆ ವರದಾನವಾಗಲಿದೆ ಎಂದರು.
ಜೆಡಿಎಸ್, ಬಿಜೆಪಿ ಸದಸ್ಯರ ಧರಣಿ ಗದ್ದಲದ ನಡುವೆ ಚರ್ಚೆ ಇಲ್ಲದೇ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರಗೊಂಡಿತ್ತು. ''ರೈತರು, ಬಡವರಿಗೆ ತ್ವರಿತ ನ್ಯಾಯದಾನ ಕಲ್ಪಿಸಿಕೊಡುವ ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಪರಾಜಯ ತಪ್ಪಿಸಲು ಪೂರಕವಾಗಲಿರುವ ಎರಡು ಹೊಸ ಕಾನೂನುಗಳು ಜಾರಿಗೆ ಬರಲಿವೆ'' ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದೇನು?:ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಸಣ್ಣ- ಅತೀ ಸಣ್ಣ ರೈತರು ಹಾಗೂ ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳ ವ್ಯಾಜ್ಯಗಳು ಕಾಲಮಿತಿಯಲ್ಲಿ ಇತ್ಯರ್ಥ ಆಗಲು ಅನುಕೂಲವಾಗಲಿದೆ. ಸಣ್ಣ, ಅತೀ ಸಣ್ಣ ರೈತರು ಹಾಗೂ ಬಡವರಿಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ದೀರ್ಘ ಕಾಲ ಎದುರಿಸಲು ಆರ್ಥಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಇವುಗಳ ಶೀಘ್ರ ವಿಲೇವಾರಿಯಾಗಬೇಕಿದೆ. ಇಂತಹ ಪ್ರಕರಣಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುವುದಕ್ಕೆ ಹೊಸ ಕಾಯ್ದೆ ಸೂಕ್ತ ಕಾರ್ಯವಿಧಾನ ರೂಪಿಸಲಿದೆ ಎಂದು ಹೇಳಿದರು.

ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಆದೇಶಗಳು, ಸುತ್ತೋಲೆಗಳಿದ್ದವು. ಆದರೆ, ವ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಕಾರ್ಯಯೋಜನೆ ಇರಲಿಲ್ಲ. ಆದ್ದರಿಂದ ಈ ಕಾನೂನಿನ ಮೂಲಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿ ನಿರ್ವಹಣೆಯನ್ನು ಈ ಕಾಯ್ದೆ ತರಲಾಗುತ್ತಿದೆ ಎಂದರು. ಅಲ್ಲದೇ, ಸುಳ್ಳು ಮಾಹಿತಿ ದಸ್ತಾವೇಜು ನೋಂದಣಿ ನಿರಾಕರಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ರದ್ದು ಮಾಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ಹಾಲು ಉತ್ಪಾದಕರಿಗೆ, ನೌಕರರಿಗೆ ಸೇವಾ ಭದ್ರತೆ ಒದಗಿಸುವ ವಿಧೇಯಕ:ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, 2023ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದು, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿ ಬ್ಯಾಂಕುಗಳ ನಿರೀಕ್ಷಣೆಯಲ್ಲಿರುವ ಸಹಕಾರಿ ಸಂಘಗಳ ನೌಕರರಿಗೆ ಸ್ಥಳನಿಯುಕ್ತಿಗೊಳಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಹಾಲು ಉತ್ಪಾದಕರಿಗೆ, ನೌಕರರಿಗೆ ಸೇವಾ ಭದ್ರತೆ ಒದಗಿಸುವ ವಿಧೇಯಕ ಇದಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:ಸದನದ ಪೀಠಕ್ಕೆ ಅಗೌರವ: 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರಗೆ ಅಮಾನತು ಮಾಡಿ ಸ್ಪೀಕರ್ ಆದೇಶ

ABOUT THE AUTHOR

...view details