ಕರ್ನಾಟಕ

karnataka

ETV Bharat / state

ಅರಣ್ಯ ಭೂಮಿ ಒತ್ತುವರಿ ಆರೋಪ: ಮಾವಿನ ತೋಪು ತೆರವಿಗೆ ಹೈಕೋರ್ಟ್ ತಡೆ

High Court stay on clearance of mango farm: ಅರಣ್ಯ ಒತ್ತುವರಿ ಆರೋಪದ ಮೇಲೆ ಸಾಗುವಳಿ ಚೀಟಿ ಹೊಂದಿರುವ ರೈತರ ಮಾವಿನ ತೋಪು ತೆರವು ಕಾರ್ಯಕ್ಕೆ ಹೈಕೋರ್ಟ್ ತಡೆ ನೀಡಿದೆ.

By ETV Bharat Karnataka Team

Published : Aug 30, 2023, 8:19 AM IST

Updated : Aug 30, 2023, 8:54 AM IST

allegation-of-forest-land-encroachment-high-court-stays-clearance-of-mango-grove
ಅರಣ್ಯ ಭೂಮಿ ಒತ್ತುವರಿ ಆರೋಪ : ಮಾವಿನ ತೋಪು ತೆರವಿಗೆ ಹೈಕೋರ್ಟ್ ತಡೆ

ಬೆಂಗಳೂರು:ಶ್ರೀನಿವಾಸಪುರ ತಾಲೂಕು ನೆಲವಂಕಿ ಹೋಬಳಿಯ ಉಪ್ಪಾರಪಲ್ಲಿ ಹಾಗೂ ಮಲಪಲ್ಲಿಯಲ್ಲಿನ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ಅರಣ್ಯ ಒತ್ತುವರಿ ಆರೋಪದಡಿ ತೆರವುಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅರಣ್ಯ ಇಲಾಖೆ ಮುಂದಾಗಿದ್ದ ತೆರವು ಕಾರ್ಯಾಚರಣೆ ಪ್ರಶ್ನಿಸಿ ಉಪ್ಪಾರಪಲ್ಲಿಯ ಗುಲ್ಜಾರ್ ಪಾಷ ಮತ್ತು ನಜರ್ ಹುಸೇನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ಅರ್ಜಿದಾರರು 1995 - 96ರಿಂದಲೂ ಮಲ್ಲಪಲ್ಲಿಯಲ್ಲಿಯ ಸರ್ವೇ ನಂಬರ್ 34ರ ಜಮೀನಿಗೆ ಕಾನೂನು ರೀತ್ಯಾ ಪಹಣಿ ಹಾಗೂ ಮಾಲೀಕತ್ವದ ಕಂದಾಯ ದಾಖಲೆಗಳನ್ನು ಹೊಂದಿ ಉಳುಮೆ ಮಾಡುತ್ತಾ ಬಂದಿದ್ದಾರೆ. ಮಾವಿನ ತೋಪು ಅಭಿವೃದ್ಧಿಪಡಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿದಾರರ ಜಮೀನು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ ಎಂದು ಆರೋಪಿಸಿ ಕಾನೂನು ಬಾಹಿರವಾಗಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ರಾಜಕೀಯ ದುಷ್ಪ್ರೇರಣೆಯಿಂದ ಅರ್ಜಿದಾರರ ಜಮೀನು ತೆರವಿಗೆ ಮುಂದಾಗಿದ್ದಾರೆ. ಶ್ರೀನಿವಾಸಪುರ ವಿಶ್ವಪ್ರಸಿದ್ಧಿ ಮಾವಿನ ತೋಪಿಗೆ ಹೆಸರಾಗಿದ್ದು, ಅರ್ಜಿದಾರರ ಜಮೀನಿನ ಸ್ವಾಧೀನಾನುಭವದ ಕಾನೂನು ಬದ್ಧತೆಯನ್ನು ನಿರ್ಲಕ್ಷಿಸಿ ನೆಲಸಮಕ್ಕೆ ಮುಂದಾಗಿದ್ದಾರೆ. ಇದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ತಡೆ ನೀಡಿ ತೋಪಿನ ರಕ್ಷಣೆಗೆ ನಿರ್ದೇಶಿಸಬೇಕು ಎಂದು ವಕೀಲರು ಕೋರಿದರು.

ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕಿರಣ್ ವಿ.ರೋಣ ಅವರಿಗೆ ಸೂಚನೆ ನೀಡಿತು. ಜೊತೆಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೋಲಾರ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ತಾಲೂಕು ತಹಶೀಲ್ದಾರ್ ಸೇರಿದಂತೆ ಒಟ್ಟು ಏಳು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ:ನೀಟ್​ ಪಿಜಿ ಪ್ರವೇಶ ಪರೀಕ್ಷೆಯ ಅರ್ಜಿಯಲ್ಲಿ ತಪ್ಪೆಸಗಿದ್ದ ವಿದ್ಯಾರ್ಥಿನಿಗೆ ಸೀಟು ನೀಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರಲ್ಲಿ ಒತ್ತುವರಿ ಬಗ್ಗೆ ಕ್ರಮಕ್ಕೆ ಹೈಕೋರ್ಟ್​ ಸೂಚನೆ :ಬೆಂಗಳೂರು ನಗರದಲ್ಲಿ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಅಧಿಸೂಚನೆಯಂತೆ ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ನಿಗದಿ ಪಡಿಸುವಂತೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಈ ಅಧಿಕಾರಿಗಳು ಒತ್ತುವರಿಯಾದ ಜಮೀನುಗಳನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವ ಜೊತೆಗೆ ಭೂ ಕಬಳಿಕೆಯ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಕೋರ್ಟ್​ ನಿರ್ದೇಶನ ನೀಡಿತ್ತು.

Last Updated : Aug 30, 2023, 8:54 AM IST

ABOUT THE AUTHOR

...view details