ಬೆಂಗಳೂರು:ಒಡಿಶಾದ ಬಾಲಸೋರ್ ರೈಲು ದುರಂತದ ಸ್ಥಳದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಮಂದಿ ಕನ್ನಡಿಗರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಿ, ಸುರಕ್ಷಿತವಾಗಿ ವಾಪಸ್ ಕರೆ ತರಲಾಗುವುದೆಂದು ಧೈರ್ಯ ತುಂಬಿದ್ದಾರೆ.
ಕ್ರೀಡಾಪಟುಗಳಿಗೆ ವಿಮಾನ ಟಿಕೆಟ್ ವ್ಯವಸ್ಥೆ ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ಅಪಘಾತ ಹಿನ್ನೆಲೆಯಲ್ಲಿ ಕರ್ನಾಟಕದಿಂದ ವಾಲಿಬಾಲ್ ಪಂದ್ಯಾವಳಿಗೆಂದು ತೆರಳಿದ್ದ ಕ್ರೀಡಾಪಟುಗಳು ಕೋಲ್ಕತ್ತಾದಲ್ಲೇ ಸಿಲುಕಿದ್ದಾರೆ. ತವರಿಗೆ ಮರಳಲು ಅವರಿಗೆ ಲಾಡ್ ನೇತೃತ್ವದ ವಿಪತ್ತು ನಿರ್ವಹಣಾ ತಂಡ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದೆ.
ಇಂಡಿಗೋ ಏರ್ಲೈನ್ಸ್ ಮೂಲಕ ಕೋಲ್ಕತ್ತಾದಿಂದ ಬೆಂಗಳೂರಿಗೆ ವಾಪಸ್ ಮರಳಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಆಟಗಾರರು, ಆಟಗಾರ್ತಿಯರು ಮತ್ತು ತರಬೇತುದಾರರು ಕೋಲ್ಕತ್ತಾದಲ್ಲೇ ಉಳಿದುಕೊಂಡಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಸಿಲುಕಿಕೊಂಡಿರುವವರ ನೆರವಿಗೆಂದು ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಿರ್ದೇಶನದ ಮೇರೆಗೆ ಎಲ್ಲರಿಗೂ ವಿಮಾನ ಟಿಕೆಟ್ಗಳನ್ನು ವ್ಯವಸ್ಥೆ ಮಾಡಲಾಗಿದೆ.
ರೈಲು ಅಪಘಾತದ ಕಾರಣ ಕೋಲ್ಕತ್ತಾದಿಂದ ಬೆಂಗಳೂರಿಗೆ ಯಾವುದೇ ರೈಲುಗಳಿಲ್ಲ. ಈ ಕಾರಣಕ್ಕಾಗಿ ಮತ್ತು ಕೋಚ್ಗಳ ಕೋರಿಕೆ ಮೇರೆಗೆ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ. ವಾಲಿಬಾಲ್ ತಂಡ ಇಂಡಿಗೋ ಏರ್ಲೈನ್ಸ್ ವಿಮಾನದ ಮೂಲಕ ಕೋಲ್ಕತ್ತಾದಿಂದ ನಾಳೆ ಬೆಳಗಿನ ಜಾವ 4.15 ಕ್ಕೆ ವಿಮಾನ ಹೊರಟು 6.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ.
ರಾಜ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ, ಸಾವನ್ನಪ್ಪಿದವರಲ್ಲಿ ಕರ್ನಾಟಕಕ್ಕೆ ಸೇರಿದ ಯಾವುದೇ ಪ್ರಯಾಣಿಕರಿಲ್ಲ. ರೈಲಿನ ಬೋಗಿ ಸಂಖ್ಯೆ 12864 (SMVB - ಹೌರಾ ಎಕ್ಸ್ಪ್ರೆಸ್) ನಲ್ಲಿ 33 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 12864 (SMVB - ಹೌರಾ) ನಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ.
ಒಡಿಶಾದಲ್ಲಿ ನಡೆದಿರುವ ರೈಲು ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭೀಕರ ರೈಲು ಅಪಘಾತದ ಸುದ್ದಿ ಹೃದಯ ವಿದ್ರಾವಕವಾಗಿದೆ. ಇಂತಹ ಭೀಕರ ಅಪಘಾತ ಹಿಂದೆಂದೂ ಸಂಭವಿಸಿರಲಿಲ್ಲ. ಯಾವುದೇ ಕನ್ನಡಿಗನ ಸಾವಿನ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಈ ತಪ್ಪು ಮಾಡಿದವರು ಯಾರು ಎಂದು ರೈಲ್ವೆ ಸಚಿವಾಲಯ ಹೇಳಬೇಕು. ನಮ್ಮ ಸಚಿವ ಸಂತೋಷ್ ಲಾಡ್ ಅವರನ್ನು ಅಪಘಾತ ಸ್ಥಳಕ್ಕೆ ಕಳುಹಿಸಿದ್ದೇವೆ. ಅವರು ಮಾಹಿತಿ ಪಡೆದು ಹೆಚ್ಚಿನ ವಿವರ ನೀಡಲಿದ್ದಾರೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ರೈಲ್ವೆ ಅಪಘಾತವು ಅತ್ಯಂತ ದುರದೃಷ್ಟಕರವಾಗಿದೆ. ಸುಮಾರು 3 ವರ್ಷಗಳಿಂದ, ರೈಲ್ವೆ ಇಲಾಖೆ ಅಪಘಾತ ಮುಕ್ತವಾಗಿತ್ತು. ಈ ಸುದ್ದಿಯಿಂದ ನಮ್ಮ ಸರ್ಕಾರ ಮತ್ತು ನನಗೆ ತೀವ್ರ ನೋವಾಗಿದೆ. ಸ್ವತಃ ರೈಲ್ವೆ ಸಚಿವರು ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಮಾರ್ಗದರ್ಶನ. ನಾವು ಅಪಘಾತದ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ಅಂತಹ ಯಾವುದೇ ಅವಘಡಗಳು ನಡೆಯದಂತೆ ನಾವು ನೋಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ರೈಲು ಅಪಘಾತ, ಸಾವಿನ ಸಂಖ್ಯೆ 288ಕ್ಕೆ ಏರಿಕೆ: ದುರಂತಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ