ಕರ್ನಾಟಕ

karnataka

ETV Bharat / state

ಇನ್ಮುಂದೆ‌ ರೈತನ ಬಳಿ ಇರಲಿದೆ 'ಸ್ವಾಭಿಮಾನಿ ರೈತ' ಗುರುತಿನ ಚೀಟಿ - Distribution of Swabhimani Farmer identity card

ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಮಾಹಿತಿಯನ್ವಯ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲು ಪ್ರಸ್ತಾಪಿಸಲಾಗಿದೆ..

-swabhimani-farmer
"ಸ್ವಾಭಿಮಾನಿ ರೈತ" ಗುರುತಿನ ಚೀಟಿ

By

Published : Jan 8, 2021, 3:57 PM IST

Updated : Jun 21, 2022, 12:01 PM IST

ಬೆಂಗಳೂರು : ತಾನೊಬ್ಬ ಸ್ವಾಭಿಮಾನಿ ರೈತ ಎಂದು ಎದೆಯುಬ್ಬಿಸಿ ಹೇಳುವಂತಹ 'ಸ್ವಾಭಿಮಾನಿ ರೈತ' ಹೆಸರಿನ ಗುರುತಿನ‌ ಚೀಟಿಯನ್ನು ರೈತರಿಗೆ ನೀಡಲು ಕೃಷಿ ಇಲಾಖೆ‌ ಸಜ್ಜಾಗಿದೆ.

ಕೃಷಿ ಸಚಿವ ಬಿ ಸಿ ಪಾಟೀಲ್ ತಮ್ಮ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ನಾಳೆ ರೈತರಿಗೆ 'ಸ್ವಾಭಿಮಾನಿ ರೈತ' ಎನ್ನುವ ಗುರುತಿನ‌ ಚೀಟಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ತಂತ್ರಾಂಶದಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ.

ಏನಿದು 'ಸ್ವಾಭಿಮಾನಿ ರೈತ'ಗುರುತಿ‌ನ? :ರಾಜ್ಯದ ಇ-ಆಡಳಿತ ಇಲಾಖೆಯು ಎನ್‌ಐಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು FRUITS ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ನೀಡುವುದು ನೋಂದಣಿಯ ಉದ್ದೇಶ. ಈ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು 'ಫ್ರೂಟ್ಸ್​' ತಂತ್ರಾಂಶ ಬಳಸುವ ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ.

ರೈತರು ಪಡೆಯುವ ಎಲ್ಲ ಇಲಾಖೆಗಳ ಸೌಲಭ್ಯಗಳು ಅವರ ಗುರುತಿನ ಸಂಖ್ಯೆ ಮೂಲಕ ದಾಖಲಾಗುತ್ತದೆ. ಈ ತಂತ್ರಾಂಶದಲ್ಲಿ ರೈತರ ನೋಂದಣಿಯು ಜೂನ್ 2018ರಿಂದ ಪ್ರಾರಂಭವಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು ಫ್ರೂಟ್ಸ್​ ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ.

ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಮಾಹಿತಿಯನ್ವಯ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲು ಪ್ರಸ್ತಾಪಿಸಲಾಗಿದೆ.

ಈ ತಂತ್ರಾಂಶವನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದು ಬಾರಿ ಮಾತ್ರ ರೈತರ ನೋಂದಣಿ ಮಾಡಲು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಆಧಾರ್ ಕಾರ್ಡ್, ಪಹಣಿ (RTC), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಫೋಟೋ ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ ರೈತರ ನೋಂದಣಿ ಮಾಡಲಾಗುತ್ತದೆ. ರೈತರ ಹಿಡುವಳಿ ವಿವರವನ್ನು ಕಂದಾಯ ಇಲಾಖೆಯ 'ಭೂಮಿ' ತಂತ್ರಾಂಶದಿಂದ ಪಡೆಯಲಾಗುತ್ತದೆ.

ಪ್ರತಿ ನೋಂದಾಯಿತ ರೈತರಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ ಹಾಗೂ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಈವರೆಗೆ ರೈತರಿಗೆ ನೋಂದಣಿಯಾದ ನಂತರ ನೀಡಲು ಯಾವುದೇ ನಿರ್ದಿಷ್ಟ ಸ್ವೀಕೃತಿ/ದಾಖಲೆ ಪತ್ರ ನಿಗದಿಪಡಿಸಿರುವುದಿಲ್ಲ.

ಯಾವುದೇ ದಾಖಲಾತಿಗಳು ಇಲ್ಲದೆ ನಂತರದ ದಿನಗಳಲ್ಲಿ ಇಲಾಖೆಗಳನ್ನು ಸೌಲಭ್ಯಗಳಿಗಾಗಿ ಸಂಪರ್ಕಿಸಿದಾಗ ನೋಂದಣಿ ಸಂಖ್ಯೆಯನ್ನು ರೈತರು ಬರೆದಿಟ್ಟುಕೊಂಡು, ನೆನಪಿನಲ್ಲಿಟ್ಟುಕೊಂಡು ಸರಿಯಾದ ಸಂಖ್ಯೆ ನೀಡುವುದು ಕಷ್ಟಸಾಧ್ಯವಾಗುತ್ತದೆ.

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ.. ಕೃಷಿ ಸಂಜೀವಿನಿ..

ಈ ಅನಾನುಕೂಲತೆಯನ್ನು ಪರಿಹರಿಸಲು ವಿವಿಧ ದಾಖಲಾತಿಗಳನ್ನು ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ನೋಂದಾಯಿಸಿದ ರೈತರಿಗೆ ಫ್ರೂಟ್ಸ್​ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲು ಪ್ರಸ್ತಾಪಿಸಲಾಗಿದೆ.

ಗುರುತಿನ ಚೀಟಿಯಿಂದ ಲಾಭವೇನು? :ಗುರುತಿನ ಚೀಟಿಯಿಂದ ರೈತರು ಬೆಳೆ ಸಾಲ, ಪಿಎಂ ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯವಹಾರಿಕ ಗುರುತಿನ ಚೀಟಿಯಾಗುತ್ತದೆ.

ಯೋಜನೆಯ ಉದ್ದೇಶಗಳೇನು?: ವಿವಿಧ ದಾಖಲಾತಿಗಳನ್ನು ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ರೈತರಿಗೆ ಫ್ರೂಟ್ಸ್​​ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡುವುದರಿಂದ ರೈತರು, ಬೆಳೆಸಾಲ ಪಿಎಂ ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯ ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯಾವಹಾರಿಕ ಗುರುತಿನ ಚೀಟಿಯಾಗುತ್ತದೆ ಎನ್ನುತ್ತಾರೆ ಕೃಷಿ ಸಚಿವ ಬಿ ಸಿ ಪಾಟೀಲ್.

ಈಗಾಗಲೇ 'ಕೃಷಿ ಸಂಜೀವಿನಿ' ಸಸ್ಯ ಚಿಕಿತ್ಸಾ ಸಂಚಾರಿ ವಾಹನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದ್ದಾರೆ. ನಾಳೆ ಸಹ ಕೊಪ್ಪಳದಲ್ಲಿ ವಿಶೇಷವಾಗಿ 20 ಕೃಷಿ ಸಂಜೀವಿನಿ ವಾಹನಗಳನ್ನು ಪ್ರತ್ಯೇಕವಾಗಿ ಲೋಕಾರ್ಪಣೆಗೊಳಿಸುತ್ತಿದ್ದಾರೆ. ಇದೇ ವೇಳೆ ಸ್ವಾಭಿಮಾನಿ ರೈತ ಗುರುತಿನ‌ ಚೀಟಿಯನ್ನೂ ಸಹ ಸಚಿವರು ಲೋಕಾರ್ಪಣೆಗೊಳಿಸುತ್ತಿದ್ದಾರೆ.

Last Updated : Jun 21, 2022, 12:01 PM IST

ABOUT THE AUTHOR

...view details