ಕರ್ನಾಟಕ

karnataka

ನಾಳೆಯಿಂದ ಪ್ರಶ್ನೋತ್ತರ ಕಲಾಪ ಇಲ್ಲ;  ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ

By

Published : Sep 22, 2020, 4:41 PM IST

ನಿತ್ಯ ಬೆಳಗಿನ ಕಲಾಪದ ಬಹುತೇಕ ಭಾಗವನ್ನು ಪ್ರಶ್ನೋತ್ತರ ಕಲಾಪ ತೆಗೆದುಕೊಳ್ಳುತ್ತಿದೆ ಹಾಗಾಗಿ ಉಳಿದ ಕಲಾಪಕ್ಕೆ ಸಮಯಾವಕಾಶದ ಕೊರತೆ ಎದುರಾಗಿರುವ ಕುರಿತು ಚರ್ಚೆ ನಡೆಸಿ, ಅಂತಿಮವಾಗಿ ಪ್ರಶ್ನೋತ್ತರ ಕಲಾಪ ಬಿಟ್ಟು ಇತರ ಕಲಾಪಗಳನ್ನು ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.

assembly
ವಿಧಾನ ಮಂಡಲ ಅಧಿವೇಶನ

ಬೆಂಗಳೂರು: ನಾಳೆಯಿಂದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪವನ್ನು ಬಿಟ್ಟು ಉಳಿದ ಕಲಾಪ ಕೈಗೆತ್ತಿಕೊಳ್ಳುವ ಕುರಿತು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೋವಿಡ್-19 ಕಾರಣದಿಂದ ಅಧಿವೇಶನವನ್ನು ಶನಿವಾರದವರೆಗೆ ಸೀಮಿತಗೊಳಿಸಲಾಗಿದೆ. ಆದರೆ, ಪ್ರತಿ ದಿನ ಬೆಳಗಿನ ಕಲಾಪದ ಬಹುತೇಕ ಭಾಗವನ್ನು ಪ್ರಶ್ನೋತ್ತರ ಕಲಾಪ ನುಂಗಿ ಹಾಕುತ್ತಿದೆ. ಹಾಗಾಗಿ ಉಳಿದ ಕಲಾಪಕ್ಕೆ ಸಮಯಾವಕಾಶದ ಕೊರತೆ ಎದುರಾಗಿರುವ ಕುರಿತು ಚರ್ಚೆ ನಡೆಸಲಾಯಿತು. ಅಂತಿಮವಾಗಿ ಪ್ರಶ್ನೋತ್ತರ ಕಲಾಪ ಬಿಟ್ಟು ಇತರ ಕಲಾಪಗಳನ್ನು ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಬಸವರಾಜ ಹೊರಟ್ಟಿ

ಕಲಾಪ ಸಲಹಾ ಸಮಿತಿ ಸಭೆ ನಂತರ ಈ ಕುರಿತು ಮಾಹಿತಿ ನೀಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಇನ್ನುಳಿದ ನಾಲ್ಕು ದಿನಗಳ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪ ಇರುವುದಿಲ್ಲ, ಶೂನ್ಯ ವೇಳೆ, ಕಾಗದ ಪತ್ರಗಳ ಮಂಡನೆ, ಗಮನ ಸೆಳೆಯುವ ಸೂಚನೆ, ವಿಧೇಯಕಗಳ ಮಂಡನೆ, ವಿವಿಧ ನಿಯಮಗಳ ಅಡಿ ಚರ್ಚೆಯ ಕಲಾಪಗಳು ನಡೆಯಲಿವೆ ಎಂದರು.

ಮೈಸೂರು ಲ್ಯಾಂಪ್ಸ್ 1,200 ಕೋಟಿ ಆಸ್ತಿಯನ್ನು ಹೊಂದಿದೆ. ಅಹಮದಾಬಾದ್, ಮುಂಬೈ, ದೆಹಲಿಯಲ್ಲಿ ಮೈಸೂರು ಲ್ಯಾಂಪ್ಸ್ ಆಸ್ತಿ ಇದೆ. ಬೆಂಗಳೂರಿನ ಯಶವಂತಪುರದಲ್ಲಿ 22 ಎಕರೆ ಭೂಮಿ ಇದ್ದು, ಅದನ್ನು ಎಂಎಂಎಲ್‌ಗೆ ಕೊಡುವ ಮೂಲಕ ಮಾರಾಟಕ್ಕೆ ಹೊರಟಿದ್ದರು. ಇದನ್ನು ಸದನದಲ್ಲಿ ಪ್ರಸ್ತಾಪಿಸಿದ್ದು, ನಿರ್ಧಾರ ಮರು ಪರಿಶೀಲನೆ ಮಾಡುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಒಪ್ಪಿಕೊಂಡಿದ್ದಾರೆ. ನಮ್ಮ ಮಾತಿಗೆ ಗೌರವ ಕೊಟ್ಟಿದ್ದಾರೆ ಎಂದರು.

ABOUT THE AUTHOR

...view details