ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ. ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೊಳಗಾಗಿ ಸ್ಪಂದನಾ ಕೊನೆಯುಸಿರೆಳೆದ ಸುದ್ದಿ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರ ಆಘಾತಕ್ಕೆ ಕಾರಣವಾಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ಪಾರ್ಥಿವ ಶರೀರವನ್ನು ಬ್ಯಾಂಕಾಕ್ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಮಲ್ಲೇಶ್ವರಂನ ನಿವಾಸದಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಸ್ಪಂದನಾ ಲೀನರಾಗಿದ್ದಾರೆ.
ಸ್ಪಂದನಾ ಆಡಿ, ಬೆಳೆದ ಮಲ್ಲೇಶ್ವರಂನಲ್ಲಿರುವ ಮನೆಯ ಮುಂಭಾಗದಲ್ಲಿ ಬೆಳಗ್ಗೆ ಪತಿ ವಿಜಯ್ ರಾಘವೇಂದ್ರ ಪಾರ್ಥಿವ ಶರೀರದ ಕೈಗಳಿಗೆ ಬಳೆಗಳನ್ನು ತೊಡಿಸಿ ವಿಧಿ-ವಿಧಾನ ನೆರವೇರಿಸಿದರು. ಈ ಸನ್ನಿವೇಶ ನೆರೆದಿದ್ದವರ ಕಣ್ಣಾಳಿಗಳನ್ನು ತೇವಗೊಳಿಸಿತ್ತು. ಬಳಿಕ ಹಿರಿಯ ನಟ ಶ್ರೀನಾಥ್, ನಟಿ ಸುಧಾರಾಣಿ, ಗಿರಿಜಾ ಲೋಕೇಶ್, ಗಾಯಕ ವಿಜಯ್ ಪ್ರಕಾಶ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಬೆಳಗ್ಗೆ 9 ಗಂಟೆಯ ಸುಮಾರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ, ವಂದಿತಾ ಹಾಗೂ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಮತ್ತು ಅಣ್ಣಾವ್ರ ಮಕ್ಕಳಾದ ಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ಇಡೀ ರಾಜ್ ಕುಟುಂಬ ಅಂತಿಮ ನಮನ ಸಲ್ಲಿಸಿದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.
ಶಿವ ರಾಜ್ಕುಮಾರ್, ಪತ್ನಿ ಗೀತಾ ಶಿವ ರಾಜ್ಕುಮಾರ್, ಯಶ್, ಧೃವ ಸರ್ಜಾ, ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಶರಣ್, ದೊಡ್ಡಣ್ಣ, ತಬಲ ನಾಣಿ, ಹರೀಶ್ ರಾಜ್, ರಕ್ಷಿತ್ ಶೆಟ್ಟಿ, ರವಿಚಂದ್ರನ್ ಕುಟುಂಬ, ಉಮಾಶ್ರೀ, ಅನಿರುದ್ಧ ಜತ್ಕರ್ ಕುಟುಂಬ, ಐಂದ್ರಿತಾ ರೇ, ದಿಗಂತ್, ಪೂಜಾಗಾಂಧಿ, ಶುಭಾ ಪೂಂಜಾ, ನಿರ್ದೇಶಕ ಓಂ ಸಾಯಿ ಪ್ರಕಾಶ್, ವಿನೋದ್ ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯರು ಅಂತಿಮ ದರ್ಶನ ಪಡೆದರು.