ಕರ್ನಾಟಕ

karnataka

By ETV Bharat Karnataka Team

Published : Sep 21, 2023, 4:05 PM IST

ETV Bharat / state

ನಾಡು, ನುಡಿ, ಭಾಷೆಗೆ ಪ್ರಾಣ ಕೊಡಲು ಸಿದ್ಧ, ಹೋರಾಟಕ್ಕೆ ರೆಡಿ: ಕಾವೇರಿ ಪರ ದನಿ ಎತ್ತಿದ ರಾಘವೇಂದ್ರ ರಾಜ್​​ಕುಮಾರ್

Actor Raghavendra Rajkumar:ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಟ ರಾಘವೇಂದ್ರ ರಾಜ್​​ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Actor Raghavendra Rajkumar
ರಾಘವೇಂದ್ರ ರಾಜ್​​ಕುಮಾರ್

ಕಾವೇರಿ ಪರ ದನಿ ಎತ್ತಿದ ರಾಘವೇಂದ್ರ ರಾಜ್​​ಕುಮಾರ್

ಬೆಂಗಳೂರು: ಕಾವೇರಿ ವಿಚಾರವಾಗಿ ಕನ್ನಡ ಚಿತ್ರರಂಗ ದನಿ ಎತ್ತಿದೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಟ ರಾಘವೇಂದ್ರ ರಾಜ್​​ಕುಮಾರ್, ನನ್ನ ತಂದೆ ಕೆಲ ವಿಚಾರ ಕಲಿಸಿಕೊಟ್ಟು ಹೋಗಿದ್ದಾರೆ. ನಾಡು, ನುಡಿ, ಭಾಷೆ ವಿಚಾರ ಬಂದಾಗ ಜೊತೆಗಿರಬೇಕೆಂದು ಹೇಳಿದ್ದಾರೆ. ಅದಕ್ಕಾಗಿ ಪ್ರಾಣ ಮುಡಿಪಾಗಿಡುತ್ತೇವೆ ಎಂದು ತಿಳಿಸಿದರು.

ಹೋರಾಟಕ್ಕೆ ಬರುತ್ತೇವೆ: ಸದ್ಯ ಈ ವಿಚಾರ ನ್ಯಾಯಾಲಯದಲ್ಲಿದೆ. ನಮ್ಮ ನಮ್ಮ ಪಾತ್ರ ಬಂದಾಗ ಜನರೇ ನಮ್ಮನ್ನು ಕರೆಸಿಕೊಳ್ಳುತ್ತಾರೆ, ಆಗ ಬರುತ್ತೇವೆ. ಕೊನೆವರೆಗೂ ನಾವು ಜನರ ಜೊತೆ ಇರುತ್ತೇವೆ. ಎಲ್ಲರೂ ಸೇರಿ ಹೋರಾಟ ಮಾಡಬೇಕು. ನಮ್ಮನ್ನು ಯಾವಾಗ ಕರೆದರೂ, ಎಲ್ಲಿಗೆ ಕರೆದರೂ ನಾವು ಬರುತ್ತೇವೆ. ಇದು ನಮ್ಮ ಜವಬ್ದಾರಿ ಎನ್ನುವ ಮೂಲಕ ರಾಘವೇಂದ್ರ ರಾಜ್​ಕುಮಾರ್​ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ಗೌರವ ಕಾಪಾಡಬೇಕು:ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನ್ಯಾಯಾಲಯದ ಗೌರವ ಕಾಪಾಡುವುದು ನಮ್ಮ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮರ್ಥರಿದ್ದಾರೆ. ನಾಡು, ನುಡಿ, ಜನರ ವಿಚಾರ ಬಂದಾಗ ಸಮರ್ಥವಾಗಿ ಎದುರಿಸುತ್ತಾರೆ. ಸದ್ಯ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ. ನ್ಯಾಯಾಲಯಕ್ಕೆ ಗೌರವ ಕೊಟ್ಟು ನೀರು ಬಿಡುವುದು ಒಂದು ಹಂತವಾದರೆ, ನಮ್ಮ ಜನರ ಹಿತ ಕಾಪಾಡುವುದು ಒಂದು ಸವಾಲು. ಅದರಲ್ಲಿ ನಮ್ಮ ನಾಯಕರು ಸಮರ್ಥರಿದ್ದಾರೆ ಎಂದು ತಿಳಿಸಿದರು.

ಸಿಎಂ, ಡಿಸಿಎಂ ಸರಣಿ ಸಭೆ: ನಮ್ಮ ನೀರನ್ನು ಯಾವ ರೀತಿ ಉಳಿಸಿಕೊಳ್ಳಬೇಕೆಂದು ದೆಹಲಿಯಲ್ಲಿ ಸಿಎಂ, ಡಿಸಿಎಂ ಸರಣಿ ಸಭೆ ನಡೆಸುತ್ತಿದ್ದಾರೆ. ಕೆಆರ್​ಎಸ್​​​ನಲ್ಲಿ ನೀರು ಖಾಲಿ ಆಗುತ್ತಿದೆ. ಎಲ್ಲಿಂದ ತಮಿಳುನಾಡಿಗೆ ನೀರು ಹರಿಸುವುದು ಗೊತ್ತಿಲ್ಲ. ಅದಕ್ಕೆ ಸಿಎಂ, ಡಿಸಿಎಂ ಇಬ್ಬರೂ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನೀರು ಬಿಡಬೇಡಿ ಎಂಬ ವಿರೋಧ ಪಕ್ಷದ ನಾಯಕರ ಒತ್ತಾಯ ಕುರಿತು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಖಂಡಿತವಾಗಿಯೂ ಅವರ ಸಲಹೆ ತೆಗೆದುಕೊಳ್ಳೋಣ. ವಿರೋಧ ಪಕ್ಷದಲ್ಲಿದ್ದು ಹೀಗೆ ಹೇಳುತ್ತಿದ್ದಾರೆ. ಅವರು ಆಡಳಿತದಲ್ಲಿದ್ದಾಗ ನ್ಯಾಯಾಲಯಕ್ಕೆ ಗೌರವ ಕೊಡುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಧಾನಿ ಮಧ್ಯಪ್ರವೇಶಿಸಬೇಕು: ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಎರಡು ರಾಜ್ಯದ ರೈತರ ಹಿತ ಮುಖ್ಯ. ನಮ್ಮಲ್ಲೂ ರೈತರಿದ್ದಾರೆ, ಅಲ್ಲೂ ರೈತರಿದ್ದಾರೆ. ರೈತರ ಜೊತೆಗೆ ನಮ್ಮಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಲೇಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಸ್ಯಾಂಡಲ್​ವುಡ್​ ಬೆಂಬಲ: ಸುದೀಪ್, ದರ್ಶನ್, ಶಿವಣ್ಣ ಹೇಳಿದ್ದೇನು?

ಇಂಡಿಯಾ ಮೈತ್ರಿ ಕೂಟಕ್ಕೂ ಇದಕ್ಕೂ ಸಂಬಂಧ ಇಲ್ಲ. ಇದರಿಂದ ಇಂಡಿಯಾ ಮೈತ್ರಿ ಕೂಡ ಹೊರಗಿದೆ. ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿಯ ನರೇಂದ್ರ ಮೋದಿ ಅವರು. ಪಿಎಂ ಅವರೇ ಮಧ್ಯಪ್ರವೇಶ ಮಾಡಬೇಕು, ಇಂಡಿಯಾ ಮೈತ್ರಿ ಕೂಟ ಅಧಿಕಾರದಲ್ಲಿ ಇದ್ದಿದ್ದರೆ ಖಂಡಿತ ಮಧ್ಯಪ್ರವೇಶ ಮಾಡುತಿತ್ತು ಎಂದು ತಿಳಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಅಣ್ಣ ತಮ್ಮಂದಿರಂತೆ ಇದ್ದೇವೆ. ರೈತರನ್ನೂ ಹಾಗೇ ಭಾವಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಹಿತ ಕಾಪಾಡಲು ಸನ್ನದ್ಧ: ಪ್ರಾಧಿಕಾರಕ್ಕೆ ತನ್ನದೇ ಆದ ಇತಿ ಮಿತಿ ಇದೆ. ಅದಕ್ಕೂ ನಾವು ಗೌರವ ಕೊಡಬೇಕು. ಮೇಲ್ಮನವಿ ಸಲ್ಲಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮಳೆ ಅಭಾವ ಆಗಿದೆ, ಬರ ಇದೆ, ಹೀಗಾಗಿ ಸಮಸ್ಯೆ ಎದುರಾಗಿದೆ. ಕೋರ್ಟ್ ಆದೇಶಕ್ಕೆ ನಾವು ತಲೆ ಭಾಗಬೇಕು. ನೀರಾವರಿ ವಿಚಾರದಲ್ಲಿ ನನಗೆ ಜ್ಞಾನ ಕಡಿಮೆ, ಹಾಗಾಗಿ ಹೆಚ್ಚು ಹೇಳಲು ಆಗಲ್ಲ. ರೈತರ ಹಿತ ಕಾಪಾಡಲು ಸರ್ಕಾರ ದೃಢವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:'ಕಾವೇರಿಗಾಗಿ ಹೋರಾಟ ಮಾತ್ರವಲ್ಲ, ಯಾವುದೇ ತ್ಯಾಗಕ್ಕೂ ಸಿದ್ಧ': ಚಿತ್ರ ನಿರ್ಮಾಪಕ ಎನ್.ಎಂ.ಸುರೇಶ್

ಮೂವರು ಡಿಸಿಎಂ ವಿಚಾರ: ಮೂರು ಜನ ಡಿಸಿಎಂ ಆಗಬೇಕೆಂದು ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಣ್ಣ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕವಾರು ಅಲ್ಲ, ಜಾತಿವಾರು ಕೇಳಿದ್ದಾರೆ, ತಪ್ಪೇನಿಲ್ಲ. ಅವರ ಅನಿಸಿಕೆ ಹೇಳಿದ್ದಾರೆ. ದೊಡ್ಡ ವಿಚಾರ ಏನಿಲ್ಲ. ಇದು ನಮ್ಮ ಆಂತರಿಕ ವಿಚಾರ, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅಂತ ಅನಿವಾರ್ಯತೆ ಇದ್ದರೆ ಜಾತಿವಾರು ಡಿಸಿಎಂ ಮಾಡಬಹುದು. ಚೆನ್ನಾಗಿ ಆಡಳಿತ ಆಗ್ತಿದೆ ಅಂದ್ರೆ ಅದರ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು. ಇನ್ನೂ ಐದು ಜನ ಡಿಸಿಎಂ ಇದ್ದ ರಾಜ್ಯಗಳು ಕಳೆದುಹೋಗಿವೆ. ಅಂತಹ ಸನ್ನಿವೇಶ ಇಲ್ಲಿ ಇಲ್ಲ. ನಮ್ಮ ಮೂಲ ಉದ್ದೇಶ ಉತ್ತಮ ಆಡಳಿತ ಕೊಡೋದು, ರೈತರ ಹಿತ ಕಾಯೋದು ಎಂದು ಸಚಿವ ನಾಗೇಂದ್ರ ಹೇಳಿದ್ರು.

ABOUT THE AUTHOR

...view details