ಕರ್ನಾಟಕ

karnataka

ETV Bharat / state

ನಟ ದರ್ಶನ್, ಸಂಸದ ತೇಜಸ್ವಿಗೆ ತಲಾ ₹250 ದಂಡ : ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ - ಕೋವಿಡ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ದರ್ಶನ್​ಗೆ ದಂಡ

ಆರ್​.ಆರ್​,ನಗರ ಉಪಚುನಾವಣೆ ವೇಳೆ ನಟ ದರ್ಶನ್​​ ಕೋವಿಡ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಾಗೂ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಂಗಳೂರಿನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಬ್ಬರಿಗೂ ಸಹ ದಂಡ ವಿಧಿಸಿದ್ದೇವೆ..

File Photo
ಸಂಗ್ರಹ ಚಿತ್ರ

By

Published : Nov 9, 2020, 7:36 PM IST

Updated : Nov 9, 2020, 8:19 PM IST

ಬೆಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಪರಾಧಕ್ಕೆ ನಟ ದರ್ಶನ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಲಾ 250 ರೂ. ದಂಡ ವಿಧಿಸಿದ್ದೇವೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಸ್ವತಃ ವಕೀಲರೂ ಆಗಿರುವ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಪದೇಪದೆ ಪ್ರಶ್ನಿಸಿದ ಬಳಿಕ ಸರ್ಕಾರ ಅಂತಿಮವಾಗಿ ದಂಡ ವಿಧಿಸುವ ಕೆಲಸ ಮಾಡಿದೆ. ನಿಯಮ ಉಲ್ಲಂಘಿಸಿದ 38 ದಿನಗಳ ಬಳಿಕ ಹೈಕೋರ್ಟ್ ಒತ್ತಾಯಕ್ಕೆ ಮಣಿದು ನವೆಂಬರ್ 7ರಂದು 250 ರೂ. ದಂಡ ವಿಧಿಸಿದೆ.

ಸರ್ಕಾರ ತನ್ನ ವರದಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಗರಕ್ಕೆ ಸೆಪ್ಟೆಂಬರ್ 30ರಂದು ವಾಪಸ್ಸಾಗಿದ್ದರು. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ಏರ್​​ಪೋರ್ಟ್‌ನಿಂದ ಆಗಮಿಸಿದ ಅವರನ್ನು ಟೋಲ್ ಪ್ಲಾಜಾ ಬಳಿಯಿಂದ ತೆರೆದ ವಾಹನದಲ್ಲಿ ಕರೆ ತರಲು ಸುಮಾರು 200 ಮಂದಿ ಸೇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅವರಿಗೆ ನಿಯಮ ಉಲ್ಲಂಘಿಸದಂತೆ ಮನ್ನೆಚ್ಚರಿಕೆ ನೀಡಲಾಗಿತ್ತು. ಹಾಗಿದ್ದೂ ಕಾರ್ಯಕರ್ತರು ನಿಯಮ ಉಲ್ಲಂಘಿಸಿದ್ದಾರೆ. ಕಾರ್ಯಕರ್ತರು ನಿಯಮ ಉಲ್ಲಂಘಿಸಿದ ಸಂಬಂಧ ವೈಯ್ಯಾಲಿ ಕಾವಲ್ ಠಾಣೆ ಪೊಲೀಸರು ಹಾಗೂ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಲು ಅನುಮತಿ ಕೋರಿ ದೇವನಹಳ್ಳಿ ಜೆಎಂಎಫ್‌ಸಿ ಹಾಗೂ ನಗರದ 8ನೇ ಎಸಿಎಂಎಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

ಆರ್.ಆರ್.ನಗರ ಉಪಚುನಾವಣೆ ಸಂದರ್ಭದಲ್ಲಿ ಮುನಿರತ್ನ ಪರ ನವೆಂಬರ್ 6ರಂದು ಪ್ರಚಾರ ನಡೆಸುವಾಗ ನಟ ದರ್ಶನ್ ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಎನ್‌ಡಿಎಂಎ ಆ್ಯಕ್ಟ್ ಅಡಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಎನ್ ಸಿ ಆರ್) ದಾಖಲಿಸಿದ್ದೇವೆ.

ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಮಂಜುನಾಥ್, ಯುವ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಸೂರ್ಯ ಮುಕುಂದರಾಜ್, ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೂ ನವೆಂಬರ್ 7ರಂದು ತಲಾ 250 ರೂಪಾಯಿ ದಂಡ ವಿಧಿಸಲಾಗಿದೆ.

ಅಲ್ಲದೇ, 250 ರೂಪಾಯಿ ದಂಡ ವಿಧಿಸಿದ್ದೇವೆ ಎಂದು ಸರ್ಕಾರ ವರದಿ ನೀಡಿದೆ. ಅಲ್ಲದೇ, ಆರ್.ಆರ್.ನಗರ ಚುನಾವಣೆ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಒಟ್ಟು 18 ಎನ್ ಸಿ ಆರ್ ದಾಖಲಿಸಿದ್ದು, 684 ಮಂದಿಗೆ ದಂಡ ವಿಧಿಸಿದ್ದೇವೆ ಎಂದು ಮಾಹಿತಿ ನೀಡಿದೆ.

ಮಾರ್ಷಲ್​​ಗಳಿಗಿಲ್ಲ ವೇತನ : ಕೋವಿಡ್ ಮಾರ್ಗಸೂಚಿಗಳನ್ನು ಜಾರಿ ಮಾಡಲು ಜನರೊಂದಿಗೆ ನಿತ್ಯವೂ ವಾಗ್ವಾದ ಮಾಡುತ್ತಾ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್‌ಗಳಿಗೆ ವೇತನ ಪಾವತಿಸಿಲ್ಲ ಎಂಬ ವಿಚಾರ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಪಾಲಿಕೆ ಪರ ವಕೀಲರು ವೇತನ ಪಾವತಿಸಲಾಗಿದೆ.

ಸಮಸ್ಯೆ ಇದ್ದಲ್ಲಿ ಆ ಕುರಿತು ಗಮನ ಹರಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಾರ್ಷಲ್​​ಗಳಿಗೆ ಸಂಬಳ ನೀಡದಿರುವ ಕುರಿತು ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

Last Updated : Nov 9, 2020, 8:19 PM IST

ABOUT THE AUTHOR

...view details