ಬೆಂಗಳೂರು:ಮರಳು ಗಣಿಗಾರಿಕೆ ಸಂಬಂಧ ನಿಯಮಗಳನ್ನು ಸರಳಗೊಳಿಸಿದ್ದೇವೆ. ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ನೂತನ ಗಣಿ ನೀತಿ ತರಲು ಚಿಂತನೆ ನಡೆಸಲಾಗಿದೆ. ಹಳ್ಳ, ಕೊಳ್ಳಗಳಲ್ಲಿ ಸಿಗುವ ಉಸುಕು ಬಳಕೆಗೆ ಅವಕಾಶ ಕಲ್ಪಿಸುವುದು, ಎತ್ತಿನಗಾಡಿ, ಟ್ರ್ಯಾಕ್ಟರ್ಗಳಲ್ಲಿ ತರಲು ಅವಕಾಶ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಕ್ಕಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಈಗ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಎಲ್ಲದಕ್ಕೂ ಎಫ್ಐಆರ್ ಹಾಕ್ತಿದ್ರು. ಗಾಡಿ, ಬೈಕ್, ಕತ್ತೆಗಳಲ್ಲಿ ಸಾಗಿಸಿದ್ರೂ ಎಫ್ಐಆರ್ ಹಾಕುತ್ತಿದ್ದಾರೆ. ಆದರೆ ಇಲ್ಲಿ ಅವುಗಳಿಗೆ ಅವಕಾಶ ನೀಡಬಾರದೆಂದು ಚಿಂತನೆ ಮಾಡಿದ್ದೇವೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ. ಗಣಿ ನೀತಿಗಳನ್ನು ಸರಳೀಕರಣಗೊಳಿಸುತ್ತೇವೆ ಎಂದರು.
ಮೈನಿಂಗ್ನಿಂದ 3700 ಕೋಟಿ ರೂ. ರಾಯಲ್ಟಿ ಬರುತ್ತಿದೆ. ರೆವಿನ್ಯೂ ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದೇವೆ. ಪ್ರಸ್ತುತ 3 ಕಮಿಟಿ ರಚಿಸಿದ್ದೇವೆ. ಆಂಧ್ರಕ್ಕೆ ಇಂದು ಒಂದು ಕಮಿಟಿ ಹೋಗಿದೆ. ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಿ, ವರದಿ ನೀಡಲಿದೆ. ವಿಭಾಗವಾರು ಕಮಿಟಿ ರಚನೆಯಾಗಿದೆ. ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು. ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ತಾಂತ್ರಿಕವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮ ತರುತ್ತೇವೆ ಎಂದರು.