ದೊಡ್ಡಬಳ್ಳಾಪುರ : ಕ್ಯಾಂಟರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ - ಗೌರಿಬಿದನೂರು ರಸ್ತೆಯ ನೆಲ್ಲುಕುಂಟೆ ಗ್ರಾಮದ ಸಮೀಪ ಸಂಭವಿಸಿದೆ.
ಅಫಘಾತದ ರಭಸಕ್ಕೆ ಹೊತ್ತಿ ಉರಿದ ಬೈಕ್...ಸ್ನೇಹಿತರನ್ನ ಕಾಣಲು ಹೋದವರು ಮಸಣಕ್ಕೆ ಸೇರಿದ್ರು! ದುರ್ಘಟನೆಯಲ್ಲಿ ನೆಲ್ಲುಕುಂಟೆ ಪಾಳ್ಯದ ರಂಜಿತ್ (26), ಶಾಂತ್ಕುಮಾರ್ (27) ಯುವಕರಿಬ್ಬರು ಮೃತಪಟ್ಟಿದ್ದಾರೆ. ಮೃತರಿಬ್ಬರು ಡ್ರೈವರ್ಗಳಾಗಿದ್ದು, ತಮ್ಮ ಕೆಲಸವನ್ನ ಮುಗಿಸಿದ ನಂತರ ದೊಡ್ಡಬಳ್ಳಾಪುರ ನಗರಕ್ಕೆ ಸ್ನೇಹಿತರನ್ನ ನೋಡಲು ತೆರಳಿದ್ದರು. ಇನ್ನು ಈ ವೇಳೆ ಸ್ನೇಹಿತರನ್ನ ಕಂಡ ಇಬ್ಬರು ಪಾರ್ಟಿಯನ್ನ ಮಾಡಿದ್ದಾರೆ. ನಂತರ ತಮ್ಮ ಗ್ರಾಮಕ್ಕೆ ಹಿಂದಿರುಗುವ ವೇಳೆಯಲ್ಲಿ ಯಮಸ್ವರೂಪಿಯಾಗಿ ಬಂದ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ಬೈಕ್ಗೆ ಕ್ಯಾಂಟರ್ ಡಿಕ್ಕಿ ಹೊಡೆದಿರುವ ರಭಸಕ್ಕೆ ಪಲ್ಸರ್ ಬೈಕ್ ಹೊತ್ತಿ ಹುರಿದು ಸಂಪೂರ್ಣ ಭಸ್ಮವಾಗಿದೆ. ಅಲ್ಲದೇ ಕ್ಯಾಂಟರ್ ಒಂದು ಕಡೆಯಿಂದ ಮತ್ತೊಂದು ಕಡೆಯ ಜಮೀನಿಗೆ ಅಪ್ಪಳಿಸಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿಯನ್ನ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಎಣ್ಣೆಯ ನಶೆಯಲ್ಲಿ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾಗ ಕ್ಯಾಂಟರ್ ಚಾಲಕನ ಅತಿವೇಗವು ಅಪಘಾತಕ್ಕೆ ಕಾರಣವಾಗಿದೆ. ಇನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಬೇಕಿದೆ.