ಕರ್ನಾಟಕ

karnataka

By

Published : Dec 7, 2022, 10:13 PM IST

Updated : Dec 7, 2022, 10:22 PM IST

ETV Bharat / state

ಬಿಬಿಎಂಪಿ ಚುನಾವಣೆಯಲ್ಲೂ ದೆಹಲಿ ಫಲಿತಾಂಶ ಬರಲಿದೆ: ಮೋಹನ್‌ ದಾಸರಿ ಭವಿಷ್ಯ

ದೆಹಲಿ ಮಹಾನಗರ ಚುನಾವಣೆಯ ಗೆಲುವನ್ನು ಬೆಂಗಳೂರಿನಲ್ಲಿ ಬೃಹತ್​ ಬೈಕ್​ ರ್ಯಾಲಿ ನಡೆಸುವ ಮೂಲಕ ಆಪ್​ ಕಾರ್ಯಕರ್ತರು ಸಂಭ್ರಮಿಸಿದರು.

bengaluru aap activist celebrated mcd election win
ಎಂಸಿಡಿ ಫಲಿತಾಂಶವೇ ಬಿಬಿಎಂಪಿ ಚುನಾವಣೆಯಲ್ಲಿ ಪುನರಾವರ್ತನೆ: ಮೋಹನ್‌ ದಾಸರಿ

ಬೆಂಗಳೂರು: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಗೆಲುವನ್ನು ನಗರದಲ್ಲಿ ಎಎಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಕುಮಾರ ಪಾರ್ಕ್‌ ಪಶ್ಚಿಮದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಸಿಹಿ ಹಂಚಿ, ನಂತರ ಅಲ್ಲಿಂದ ಬಿಬಿಎಂಪಿ ಕಚೇರಿಗೆ ಬೈಕ್‌ ರ‍್ಯಾಲಿ ನಡೆಸಿ ವಿಜಯೋತ್ಸವ ಮಾಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ, ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರದ ಸಾಧನೆಗಳನ್ನು ಕಣ್ಣಾರೆ ಕಂಡಿದ್ದರಿಂದ ದೆಹಲಿಯ ಜನತೆ ಎಂಸಿಡಿ ಚುನಾವಣೆಯಲ್ಲಿ ಎಎಪಿಯನ್ನು ಗೆಲ್ಲಿಸಿದ್ದಾರೆ. ನಗರ ಪ್ರದೇಶದ ಜನರು ಆಮ್‌ ಆದ್ಮಿ ಪಾರ್ಟಿಯತ್ತ ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ಎಂಸಿಡಿ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದ್ದು, ಬಿಬಿಎಂಪಿ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 15 ವರ್ಷಗಳಿಂದ ಎಂಸಿಡಿಯಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಯು ಕಳಪೆ ಕಾಮಗಾರಿಗಳ ಮೂಲಕ ದೆಹಲಿಗೆ ಕೆಟ್ಟ ಹೆಸರು ತಂದಿತ್ತು. ಅಧಿಕಾರದ ಮದದಲ್ಲಿದ್ದ ಬಿಜೆಪಿ ಜನರ ಭಾವನೆಗೆ ಸ್ಪಂದಿಸುವುದನ್ನೇ ಮರೆತಿತ್ತು. ಬೆಂಗಳೂರಿನಲ್ಲಿ ಕೂಡ ಬಿಜೆಪಿ ಅದೇ ತಪ್ಪುಗಳನ್ನು ಅಲ್ಲಿಗಿಂತ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಪ್ರಜ್ಞಾವಂತ ಜನರು ಪಣತೊಟ್ಟಿದ್ದು, ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ದೆಹಲಿ ಪಾಲಿಕೆ ಗುದ್ದಾಟದಲ್ಲಿ ಗೆದ್ದು ಬೀಗಿದ ಆಪ್‌ನ ತೃತೀಯಲಿಂಗಿ ಅಭ್ಯರ್ಥಿ ಬಾಬಿ ಕಿನ್ನರ್

Last Updated : Dec 7, 2022, 10:22 PM IST

ABOUT THE AUTHOR

...view details