ಕರ್ನಾಟಕ

karnataka

ಗುಡ್ಡ ಕುಸಿತದಲ್ಲಿ ಮೃತರಾದವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

By

Published : Jul 5, 2020, 10:52 PM IST

ಸದ್ಯ 19 ಮನೆಗಳನ್ನು ತೆರವುಗೊಳಿಸಿ ಸುಮಾರು 118 ಜನರನ್ನು ಸಮೀಪದ ಸರಕಾರಿ ಶಾಲೆ/ಗ್ರಾಮ ಪಂಚಾಯತ್ ಹಾಲ್/ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದ 60 ಮನೆಗಳ ಸದಸ್ಯರನ್ನು ಸಹ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ..

ಬೆಂಗಳೂರು :ಮೂಳೂರು ಗ್ರಾಮದಲ್ಲಿ ಗುಡ್ಡಕುಸಿತದಿಂದ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಗಳಂತೆ ಪರಿಹಾರವನ್ನು ನೀಡಲು ಮತ್ತು ಆ ಗುಡ್ಡದ ಪ್ರದೇಶದಲ್ಲಿರುವ ಜನರಿಗೆ ಜಿಲ್ಲಾಡಳಿತ ವತಿಯಿಂದ ಬೋಂಡಂತಿಲ್ಲ ಗ್ರಾಮದ ಸರ್ವೆ ನಂ 102ರಲ್ಲಿ ಗುರುತಿಸಲಾದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಸ್ಥಳಾಂತರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕು, ಗುರುಪರ ಹೋಬಳಿಯ ಮೂಳೂರು ಗ್ರಾಮದ ಬಂಗ್ಲೆ ಗುಡ್ಡ್ಡ ಪ್ರದೇಶದಲ್ಲಿ ಸತತ ಮಳೆಯಿಂದ, ಗುಡ್ಡ ಕುಸಿತವಾಗಿ ಎರಡು ಮನೆಗಳು ಸಂಪೂರ್ಣ ನಾಶವಾಗಿದ್ದು ಮತ್ತು ಕೆಲವೊಂದು ಮನೆಗಳು ಭಾಗಶ: ಹಾನಿಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರು ಹಾಗೂ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್‍ರವರು ಮತ್ತು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೋಲೀಸರ ಕಾರ್ಯಾಚರಣೆಯಿಂದ ಅವಶೇಷಗಳಡಿ ಸಿಲುಕಿದ್ದ 16 ವರ್ಷದ ಬಾಲಕ ಸಫ್ವಾನ್ ಮತ್ತು 10 ವರ್ಷದ ಬಾಲಕಿ ಸಹ ಅವರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

ಆ ಗುಡ್ಡದ ಪ್ರದೇಶದಲ್ಲಿದ್ದ ಸದ್ಯ 19 ಮನೆಗಳನ್ನು ತೆರವುಗೊಳಿಸಿ ಸುಮಾರು 118 ಜನರನ್ನು ಸಮೀಪದ ಸರಕಾರಿ ಶಾಲೆ/ಗ್ರಾಮ ಪಂಚಾಯತ್ ಹಾಲ್/ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದ 60 ಮನೆಗಳ ಸದಸ್ಯರನ್ನು ಸಹ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತದ ಪರಿಶ್ರಮದ ಫಲವಾಗಿಯೂ ಬಾಲಕ ಮತ್ತು ಬಾಲಕಿಯ ಜೀವವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಆದ್ದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ಆದ ದುಖ: ಭರಿಸಲು ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈಗಾಗಲೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಗಳಂತೆ ಪರಿಹಾರವನ್ನು ನೀಡಲು ಮತ್ತು ಆ ಗುಡ್ಡದ ಪ್ರದೇಶದಲ್ಲಿರುವ ಜನರಿಗೆ ಜಿಲ್ಲಾಡಳಿತ ವತಿಯಿಂದ ಬೋಂಡಂತಿಲ್ಲ ಗ್ರಾಮದ ಸರ್ವೆ ನಂ 102ರಲ್ಲಿ ಗುರುತಿಸಲಾದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ABOUT THE AUTHOR

...view details