ಕರ್ನಾಟಕ

karnataka

ETV Bharat / state

ಗಾಂಧಿನಗರ ಕ್ಷೇತ್ರದಲ್ಲಿ 640 ಕೋಟಿ ರೂ. ಅಕ್ರಮ: ತನಿಖೆಗೆ ಎನ್‌.ಆರ್‌.ರಮೇಶ್ ಆಗ್ರಹ

5 ವರ್ಷಗಳಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿಯ ಅನುದಾನಗಳ ಒಟ್ಟು ಮೊತ್ತ ಬರೋಬ್ಬರಿ 640,23,31,364 ರೂ. ಇಲ್ಲಿನ 7 ವಾರ್ಡ್​ಗಳ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿದೆ. ಆದರೆ ಇಷ್ಟು ಮೊತ್ತದ ಕಾಮಗಾರಿ ನಡೆದಿರುವ ಕುರುಹೂ ಸಹ ಇಲ್ಲ- ಎನ್.ಆರ್‌.ರಮೇಶ್‌.

By

Published : Jul 7, 2021, 11:03 PM IST

Bangalore
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್‌.ರಮೇಶ್‌

ಬೆಂಗಳೂರು:ಗಾಂಧಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ (ವಾ.ನಂ- 77, 94, 95, 96, 109, 120 ಮತ್ತು 121) ಗಳ ವ್ಯಾಪ್ತಿಯ ಅಭಿವೃದ್ಧಿ ಹೆಸರಲ್ಲಿ ಕನಿಷ್ಟ 400 ರಿಂದ 450 ಕೋಟಿ ರೂ. ಸಾರ್ವಜನಿಕರ ಹಣ ಲೂಟಿಯಾಗಿದೆ. ಈ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ನಡೆದಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಆರ್ ರಮೇಶ್ ಮುಖ್ಯಂಮತ್ರಿ ಯಡಿಯೂರಪ್ಪ, ಎಸಿಬಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಇಂದು ದೂರು ಸಲ್ಲಿಸಿದ್ದಾರೆ.

2015-16 ರಿಂದ 2020ರ ನವೆಂಬರ್ ತಿಂಗಳವರೆಗಿನ 5 ವರ್ಷಗಳಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿಯ ಅನುದಾನಗಳ ಒಟ್ಟು ಮೊತ್ತ ಬರೋಬ್ಬರಿ 640,23,31,364 ರೂ. 07 ವಾರ್ಡ್​ಗಳ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿದೆ. ಆದರೆ ಇಷ್ಟು ಮೊತ್ತದ ಕಾಮಗಾರಿ ನಡೆದಿರುವ ಕುರುಹೂ ಸಹ ಇಲ್ಲ.

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್‌.ರಮೇಶ್‌

ಈ ಅವಧಿಯ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿ, ದಾಖಲೆಗಳನ್ನು ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯ ಕಂಪ್ಯೂಟರ್‌ಗಳಲ್ಲಿ ಅಳಿಸಿ ಹಾಕಲಾಗಿದೆ ಎಂದು ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದ್ದಾರೆ. ಒಟ್ಟು 640,23,31,364 ರೂ. ಮೊತ್ತದ ಕಾಮಗಾರಿಗಳ ಪೈಕಿ ಶೇ.75 ರಷ್ಟು ಕಾಮಗಾರಿಗಳನ್ನು ಕೆಆರ್​ಐಡಿಎಲ್​​ ಮೂಲಕವೇ ನಿರ್ವಹಿಸಲು ವಹಿಸಿಕೊಡಲಾಗಿದೆ ಎಂದರು.

ಪಾಲಾಕ್ಷಪ್ಪ, ವೆಂಕಟೇಶ್ ಮತ್ತು ರಾಜು ಎಂಬ ಮೂವರು ಭ್ರಷ್ಟಾಚಾರ ಎಸಗಿದ್ದಾರೆ. ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಅವಧಿಯಲ್ಲಿಯೇ ಇಷ್ಟೊಂದು ಬೃಹತ್ ಮಟ್ಟದ ಅವ್ಯವಹಾರಗಳು ನಡೆದಿವೆ. ಹಾಗೆಯೇ ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ ರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕ ಹೊನ್ನಯ್ಯ ಅವರು ಸಹ ಈ ಅವ್ಯವಹಾರದ ಪಾಲುದಾರರಾಗಿದ್ದಾರೆಂದು ಆರೋಪ ಮಾಡಿದ್ದಾರೆ. ಚಿಕ್ಕ ಹೊನ್ನಯ್ಯ ಪೆಟ್ಟಿಕೋಟ್ ಚಂದ್ರಪ್ಪನ ಪರಮ ಶಿಷ್ಯನಾಗಿದ್ದು, ಪೆಟ್ಟಿಕೋಟ್ ಚಂದ್ರಪ್ಪ ಸ್ವತಃ ದಿನೇಶ್ ಗುಂಡೂರಾವ್ ಅವರ ಅಕ್ರಮ ಪಾಲುದಾರ ಎಂದು ದೂರಿದ್ದಾರೆ.

ಹೀಗಾಗಿ ಈ 640 ಕೋಟಿ ರೂ ಅನುದಾನದಲ್ಲಿ ಆದ ಈ ಬೃಹತ್ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಿಗೆ ಎನ್ ಆರ್ ರಮೇಶ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಅಧಿವೇಶನಕ್ಕಾಗಿ ಸಿದ್ಧತೆ ನಡೆಸಲು ಅಧಿಕಾರಿ, ಸಿಬ್ಬಂದಿಗೆ ಸ್ಪೀಕರ್ ಕಾಗೇರಿ ಸೂಚನೆ

ABOUT THE AUTHOR

...view details