ಕರ್ನಾಟಕ

karnataka

ಬೆಂಗಳೂರು ಸುತ್ತ-ಮುತ್ತ 2,095 ಕೋಟಿ ರೂ. ವೆಚ್ಚದ 155 ಕಿ.ಮೀ. ರಸ್ತೆ ನಿರ್ಮಾಣ: ಗೋವಿಂದ ಕಾರಜೋಳ

By

Published : Jul 4, 2020, 12:51 AM IST

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ 132ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ವಹಿಸಿದರು. ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಿ, ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದರು.

Meeting
Meeting

ಬೆಂಗಳೂರು:ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಹಾನಗರದ ಸುತ್ತ-ಮುತ್ತ 2,095 ಕೋಟಿ ರೂ. ವೆಚ್ಚದಲ್ಲಿ 155 ಕಿ.ಮೀ. ಉದ್ದದ 4 ರಸ್ತೆಗಳನ್ನು 10 ಪ್ಯಾಕೇಜ್‍ಗಳಲ್ಲಿ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ 132ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಎಂ, ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಿ, ಪ್ರಗತಿ ಪರಿಶೀಲನೆ ನಡೆಸಿದರು. ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಹೊರವರ್ತುಲದಲ್ಲಿ ನಿರ್ಮಿಸುತ್ತಿರುವ ರಸ್ತೆಗಳ ಮೂಲಕ ವಾಹನಗಳು ಸಂಚರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೆಆರ್ ಡಿಸಿಎಲ್ ಮೂಲಕ ರಾಜ್ಯದಲ್ಲಿ 639 ಕೋಟಿ ರೂ. ವೆಚ್ಚದಲ್ಲಿ 42 ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. 869 ಕೋಟಿ ರೂ. ವೆಚ್ಚದಲ್ಲಿ 175 ಕಿರುಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ 94 ಕಿರುಸೇತುವೆಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ. 137 ಕೋಟಿ ರೂ. ವೆಚ್ಚದಲ್ಲಿ 20.11 ಕಿ.ಮೀ ಉದ್ದದ ಹೊಸಕೋಟೆ- ಬೂದಿಗೆರೆ ಕ್ರಾಸ್ ರಸ್ತೆ ಕಾಮಗಾರಿ ಆಗುತ್ತಿದೆ. ಬೂದಿಗೆರೆ ರಸ್ತೆಯನ್ನು ಸಿಂಗಹಳ್ಳಿ, ಮೈಲಹಳ್ಳಿ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ 3.5 ಕಿ.ಮೀ. ರಸ್ತೆ ಕಾಮಗಾರಿ ಮತ್ತು 12 ಬಾಕ್ಸ್ ಕಲ್ವರ್ಪ್ ಕಾಮಗಾರಿಯು ಪೂರ್ಣಗೊಂಡಿದೆ.

155.69 ಕೋಟಿ ರೂ. ವೆಚ್ಚದಲ್ಲಿ 15.25 ಕಿ.ಮೀ. ಉದ್ದದ ನೆಲಮಂಗಲ- ಮಧುರೆ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದೆ. 169.81 ಕೋಟಿ ರೂ. ವೆಚ್ಚದಲ್ಲಿ 23.99 ಕಿ.ಮೀ ಉದ್ದದ ಮುಧುರೆ-ದೇವನಹಳ್ಳಿ ರಸ್ತೆ, 135 ಕೋಟಿ. ರೂ. ವೆಚ್ಚದ 33 ಕಿ.ಮೀ ಉದ್ದದ ಬಿಡದಿ-ಜಿಗಣಿ ರಸ್ತೆ, 129 ಕೋಟಿ ರೂ. ವೆಚ್ಚದ 22 ಕಿ.ಮೀ ಉದ್ದದ ಬನ್ನೇರುಘಟ್ಟ- ಆನೇಕಲ್ ರಸ್ತೆ, 1 ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, 1 ಗ್ರೇಡ್ ಸೆಪರೇಟರ್ ಕಾಮಾಗಾರಿ, 182.23 ಕೋಟಿ ರೂ. ವೆಚ್ಚದ 39 ಕಿ.ಮೀ ಉದ್ದದ ಆನೇಕಲ್- ಹೊಸಕೋಟೆ ರಸ್ತೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಾಜನಕುಂಟೆ, ನಾರಾಯಣಪುರ, ಗೊಲ್ಲಹಳ್ಳಿ ರೈಲ್ವೆ ಕ್ರಾಸಿಂಗ್‍ನಲ್ಲಿ ರೈಲ್ವೆ ಮೇಲ್ಸೇತುವೆ, ಬಸವನಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಕೆಳಸೇತುವೆ (ಆರ್ ಯು ಬಿ) ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆಯ ಸಹಮತಿ ಬಂದ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ವರ್ತೂರು ಗ್ರಾಮದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಟ್ಯಾಲಿ ಜಂಕ್ಷನ್, ದೊಮ್ಮಸಂದ್ರ ಜಂಕ್ಷನ್ ಮತ್ತು ವರ್ತೂರು ಕೋಡಿ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ಹಾಗೂ ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ರೈಲ್ವೆ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ತ್ವರಿತವಾಗಿ ಸಹಮತಿ ಪತ್ರ ಪಡೆಯಬೇಕು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಡಿಸಿಎಂ ಸೂಚಿಸಿದರು.

ABOUT THE AUTHOR

...view details