ಬೆಂಗಳೂರು: ಇಂದು ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಿದ್ದು, ಅಗತ್ಯ ಸೇವೆ, ತುರ್ತು ಸೇವೆ ಹೊರತುಪಡಿಸಿ ಇತರೆಲ್ಲಾ ಸೇವೆ ಬಹುತೇಕ ಬಂದ್ ಆಗಲಿದೆ. ಕಳೆದ ಬಾರಿಯ ಲಾಕ್ಡೌನ್ನಂತೆ ಜನರು ಮನೆಯಲ್ಲೇ ವನವಾಸ ಅನುಭವಿಸಬೇಕಿದೆ.
ಕೊರೊನಾ 2ನೇ ಅಲೆ ಚೈನ್ ಲಿಂಕ್ ತಡೆಯಲು ರಾಜ್ಯ ಸರ್ಕಾರ ಲಾಕ್ಡೌನ್ ಮಾದರಿಯ ಕಠಿಣ ಕ್ರಮದ ಮೊರೆ ಹೋಗಿದೆ. ನೈಟ್ಕರ್ಫ್ಯೂ ನಂತರ ವೀಕೆಂಡ್ ಕರ್ಫ್ಯೂ ಮೂಲಕ ಜನರಿಗೆ ಪರೋಕ್ಷ ಸಂದೇಶ ನೀಡಿದ್ದ ಸರ್ಕಾರ ಅಂತಿಮವಾಗಿ ವೀಕೆಂಡ್ ಕರ್ಫ್ಯೂವನ್ನು ವೀಕ್ ಡೇಸ್ಗೂ ವಿಸ್ತರಿಸಿ ಮುಂದಿನ 14 ದಿನಕ್ಕೆ ಅನ್ವಯವಾಗುವಂತೆ ಇಂದು ರಾತ್ರಿ 9 ಗಂಟೆಯಿಂದ 24/7 ಕರ್ಫ್ಯೂ ಜಾರಿಗೊಳಿಸಿದೆ.
ಕಠಿಣ ಕರ್ಫ್ಯೂ ಸಮಯದಲ್ಲಿ ಅಗತ್ಯ ಸೇವೆ, ತುರ್ತು ಸೇವೆಗೆ ಅನುಮತಿ ನೀಡಲಾಗಿದೆ. ತುರ್ತು ಸೇವೆಗೆ ಯಾವುದೇ ಸಮಯದ ಮಿತಿ ನಿಗದಿಪಡಿಸಿಲ್ಲ ಆದರೆ ಅಗತ್ಯ ಸೇವೆಗೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಹಾಲು, ತರಕಾರಿ, ದಿನಸಿ ಖರೀದಿಗೆ ಮಾಡಬಹುದಾಗಿದೆ. ಮೀನು, ಮಾಂಸದ ಅಂಗಡಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಇವುಗಳನ್ನು ಹೊರತುಪಡಿಸಿದರೆ ಇತರ ಯಾವ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿರ್ಬಂಧವಿರಲಿದೆ.
ಇನ್ನು ಸಾಕಷ್ಟು ಜನರು ಹೋಟೆಲ್ಗಳನ್ನೇ ಅವಲಂಭಿಸಿದ್ದಾರೆ.ಅವರಿಗೆ ಕಠಿಣ ಕರ್ಫ್ಯೂದಿಂದ ಊಟ, ತಿಂಡಿ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪಾರ್ಸೆಲ್ ಸೇವೆಗೆ ಅನುಮತಿಸಲಾಗಿದೆ. ಅದೇ ರೀತಿ ಆನ್ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಫುಡ್ ಡೆಲಿವರಿ ಅಗ್ರಿಗೇಟರ್ಸ್ಗೆ ಅನುಮತಿಸಲಾಗಿದೆ. ಹೋಟೆಲ್ಗಳಿಗೆ ಹೋಗಲು ಸಾಧ್ಯವಾಗದವರು ಆನ್ಲೈನ್ ಮೂಲಕ ತರಿಸಿಕೊಳ್ಳಬಹುದಾಗಿದೆ.
ಸಾರ್ವಜನಿಕ ಸಾರಿಗೆ ಬಂದ್:ಇನ್ನು ರಾಜ್ಯಾದ್ಯಂತ ಸಾರಿಗೆ ಸೇವ್ ಬಂದ್ ಆಗಲಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್, ಖಾಸಗಿ ಬಸ್ಗಳು, ಮೆಟ್ರೋ ಸೇವೆ ಸ್ಥಗಿತವಾಗಲಿದೆ. ವಿಮಾನ ಮತ್ತು ರೈಲು ಸೇವೆ ಮಾತ್ರ ಲಭ್ಯವಿದ್ದು, ಪ್ರಯಾಣಕ್ಕೆ ಕಾಯ್ದಿರಿಸಿದ ಟಿಕೆಟ್ ತೋರಿಸಿ ಟ್ಯಾಕ್ಸಿ ಮತ್ತು ಆಟೋ ಸೇವೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಅದನ್ನು ಹೊರತುಪಡಿಸಿ ಇತರರ ಸಂಚಾರಕ್ಕೆ ನಿರ್ಬಂಧವಿರಲಿದೆ.
ಮದ್ಯ ಪ್ರಿಯರಿಗೆ ಲಿಮಿಟೆಡ್ ಟೈಮ್:ಕಳೆದ ಬಾರಿ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಮದ್ಯದ ಅಂಗಡಿಗಳಿಗೆ ಅವಕಾಶ ನೀಡಿರಲಿಲ್ಲ, ಇದರಿಂದಾಗಿ ಎಣ್ಣೆ ಪ್ರಿಯರು ಪರದಾಡುವಂತಾಗಿತ್ತು,ಆದರೆ ಈಗ ಅಂತಹ ಸನ್ನಿವೇಶ ಎದುರಾಗದಿರುವಂತೆ ಕಠಿಣ ಕರ್ಫ್ಯೂ ದಿನಗಳಲ್ಲಿಯೂ ಪ್ರತಿ ದಿನ ಬೆಳಗ್ಗೆ 6 ರಿಂದ 10 ರವರೆಗೆ ಅವಕಾಶ ನೀಡಿದ್ದು ಎಣ್ಣೆ ಮತ್ತಿಗೆ ಅವಕಾಶ ನೀಡಿದೆ.
ಗಾರ್ಮೆಂಟ್ಸ್ ಕ್ಲೋಸ್, ನಿರ್ಮಾಣ ವಲಯಕ್ಕಿಲ್ಲ ಬ್ರೇಕ್:ರಾಜ್ಯದ ಎಲ್ಲಾ ಗಾರ್ಮೆಂಟ್ಸ್ಗಳಿಗೂ ನಿರ್ಬಂಧ ವಿಧಿಸಿದ್ದು, ಕೇವಲ ನಿರ್ಮಾಣ ಚಟುವಟಿಕೆ ಹಾಗೂ ಕೈಗಾರಿಕಾ ವಲಯಕ್ಕೆ ಅವಕಾಶ ಕಲ್ಪಿಸಿದೆ, ಅನುಮತಿಸಿದ ಸೇವಾ ವಲಯದ ವ್ಯಾಪ್ತಿಗೆ ಬರುವ ಕಟ್ಟಡ ಕಾರ್ಮಿಕರು ಮತ್ತು ಕೈಗಾರಿಕೆಗಳ ಸಿಬ್ಬಂದಿ ಓಡಾಟಕ್ಕೆ ಅವಕಾಶವಿದೆ. ಸಂಸ್ಥೆಯ ಗುರುತಿನ ಚೀಟಿ ಬಳಸಿ ಸಂಚರಿಸಬಹುದಾಗಿದೆ.
ಕೃಷಿ ಚಟುವಟಿಕೆ ಮುಕ್ತ:ರಾಜ್ಯಾದ್ಯಂತ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ, ಕೃಷಿ ಸಂಬಂಧಿತ ಎಲ್ಲ ಚಟುವಟಿಕೆಗೂ ಅವಕಾಶ ಕಲ್ಪಿಸಲಾಗಿದೆ. ಕೃಷಿ ಕ್ಷೇತ್ರದ ಕೆಲಸ ಕಾರ್ಯಗಳು,ಕೃಷಿ ಉತ್ಪನ್ನಗಳ ಸಾಗಾಣಿಕೆ, ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಳೆದ ಬಾರಿಯಂತೆ ಕೃಷಿಕರಿಗೆ ಗ್ರೀನ್ ಪಾಸ್ ಕೊಡುವ ಚಿಂತನೆ ಕೂಡ ಕೃಷಿ ಇಲಾಖೆ ಮಾಡಿದೆ.
ಈಗಾಗಲೇ 14 ದಿನದ ಕಠಿಣ ಕರ್ಫ್ಯೂಗೆ ಸರ್ಕಾರ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೃಹ ಇಲಾಖೆಯಿಂದ ಮಾಡಿಕೊಂಡಿರುವ ಸಿದ್ದತೆ ವಿವರಿಸಿದ್ದಾರೆ.