ಕರ್ನಾಟಕ

karnataka

By ETV Bharat Karnataka Team

Published : Oct 27, 2023, 9:38 PM IST

ETV Bharat / state

ಒಂದು ಲಕ್ಷ ಜನರಿಗೆ 100 ಮೆಡಿಕಲ್ ಸೀಟ್ ಇರಬೇಕೆಂಬ ಮಾನದಂಡ ವಿರೋಧಿಸಿ ಪ್ರಧಾನಿಗೆ ಪತ್ರ: ಸಚಿವ ಶರಣಪ್ರಕಾಶ ಪಾಟೀಲ್

ರಾಮನಗರ, ಕನಕಪುರದಲ್ಲೂ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು. ಈಗಾಗಲೇ ರಾಮನಗರದಲ್ಲಿ ಕೆಲಸ ನಡೆಯುತ್ತಿದೆ. ಕನಕಪುರದಲ್ಲೂ ಮೆಡಿಕಲ್ ಕಾಲೇಜ್ ಸ್ಥಾಪನೆ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಲಾಗುವುದು- ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

Minister Dr Sharanu Prakash Patil participated in the function
ಮೈಸೂರು ಮೆಡಿಕಲ್ ಕಾಲೇಜಿನ ಸಮಾರಂಭದಲ್ಲಿ ಸಚಿವ ಡಾ ಶರಣು ಪ್ರಕಾಶ್ ಪಾಟೀಲ್ ಭಾಗವಹಿಸಿದ್ದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿಕೆ

ಮೈಸೂರು:ಒಂದು ಲಕ್ಷ ಜನರಿಗೆ ನೂರು ಮೆಡಿಕಲ್ ಸೀಟ್ ಇರಬೇಕೆಂಬ ಕೇಂದ್ರದ ಮಾನದಂಡವನ್ನು ವಿರೋಧಿಸುತ್ತೇವೆ. ಇದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ. ಇದನ್ನು ವಿರೋಧಿಸಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಬಳಿಕ ಮಾಧ್ಯಮಗಳೊದಿಗೆ ಅವರು ಮಾತನಾಡಿದರು.

ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ಕಡೆಗಣಿಸುತ್ತಿದೆ. ಈಗಾಗಲೇ ಇವರು ಹೇಳಿರುವ ಮಾನದಂಡಕ್ಕಿಂತ ಹೆಚ್ಚು ಮೆಡಿಕಲ್ ಸೀಟ್​​ಗಳಿದ್ದು, ಮುಂದೆ ಬೇರೆ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಬೇಕಿದೆ. ಇದರೊಂದಿಗೆ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ ಕೇಳುತ್ತಿದ್ದಾರೆ. ಇದರಿಂದ ಕೇಂದ್ರದ ಮಾನದಂಡ ಪಾಲಿಸುವುದು ಕಷ್ಟ ಎಂದರು.

ಪ್ರತಿ ಜಿಲ್ಲೆಗೊಂದರಂತೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು. ಈಗಾಗಲೇ ರಾಜ್ಯದಲ್ಲಿ 23 ಮೆಡಿಕಲ್ ಕಾಲೇಜುಗಳಿವೆ. ಉಳಿದ ಜಿಲ್ಲೆಗಳಲ್ಲಿಯೂ ಹಣಕಾಸಿನ ಲಭ್ಯತೆ ನೋಡಿಕೊಂಡು ಹೊಸ ಮೆಡಿಕಲ್ ಕಾಲೇಜು ತೆರೆಯಲಾಗುವುದು ಎಂದು ಹೇಳಿದರು.

ಮೆಡಿಕಲ್ ಸೀಟುಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತುತ 150 ಸೀಟು ಲಭ್ಯವಿದೆ. ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು 200ಕ್ಕೆ ಹೆಚ್ಚಳ ಮಾಡಲಾಗುವುದು. ಮೆಡಿಕಲ್ ಸೀಟುಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಪ್ರತಿವರ್ಷ 12 ಸಾವಿರ ಸೀಟುಗಳನ್ನು ನೀಡುತ್ತಿದ್ದೇವೆ. ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು ಸಾಕಷ್ಟು ಸೀಟುಗಳು ಲಭ್ಯವಿದೆ ಎಂದರು.

3 ತಿಂಗಳಲ್ಲಿ 200 ಹುದ್ದೆಗಳ ಭರ್ತಿ: ಮೈಸೂರು ಮೆಡಿಕಲ್ ಕಾಲೇಜು ಜ್ಞಾಪಕಾರ್ಥಕವಾಗಿ ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು 5 ಎಕರೆ ಜಾಗ ಗುರುತಿಸಲಾಗಿದ್ದು ಪ್ರಕ್ರಿಯೆ ಆರಂಭವಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸಲಾಗುವುದು. 150-200 ಹುದ್ದೆಗಳ ಭರ್ತಿಗೆ ಬೇಡಿಕೆ ಇದ್ದು, 3 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಕಟ್ಟಡ ನವೀಕರಣವಾಗುತ್ತಿದೆ. ಇದರಿಂದ ವೈದ್ಯಕೀಯ ಸಲಕರಣೆಗಳು ಬರಲು ತಡವಾಗಿದೆ. ಆಸ್ಪತ್ರೆಯಲ್ಲಿ ಹಸುಗೂಸು ಕಳ್ಳತನ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಇದನ್ನೂಓದಿ:ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದಿರುವುದಕ್ಕೆ ಬೇಸರವಿಲ್ಲ: ಸದಾನಂದ ಗೌಡ

ABOUT THE AUTHOR

...view details