ಕರ್ನಾಟಕ

karnataka

By

Published : Nov 9, 2022, 3:49 PM IST

ETV Bharat / state

ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ.. ವಿಧಿಬದ್ಧವಾಗಿ ನಡೆದ ಪವಿತ್ರ ಮೃತ್ತಿಕೆ ಸ್ವೀಕಾರ

ಕೆಂಪೇಗೌಡರ ಹೆಸರು ಇಡೀ ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಬೇಕೆಂಬ ಉದ್ದೇಶದಿಂದ 15 ದಿನಗಳ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಎಂದು ಸಚಿವ ಅಶ್ವತ್ಥ್​ ನಾರಾಯಣ್ ಅವರು ತಿಳಿಸಿದ್ದಾರೆ.

ಪವಿತ್ರ ಮೃತ್ತಿಕೆಗೆ ಪೂಜೆ
ಪವಿತ್ರ ಮೃತ್ತಿಕೆಗೆ ಪೂಜೆ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕಂಚಿನ ಕೆಂಪೇಗೌಡರ ಪ್ರತಿಮೆ ನವೆಂಬರ್ 11ರಂದು ಲೋಕಾರ್ಪಣೆಯಾಗಲಿದೆ.

ಪ್ರತಿಮೆಯ ಉದ್ಘಾಟನೆಯ ಭಾಗವಾಗಿ ಕಳೆದ 15 ದಿನಗಳ ಕಾಲ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹಣೆ ಅಭಿಯಾನವು ಇಂದು ಸಂಪನ್ನಗೊಂಡಿತು. ಇದರ ಅಂಗವಾಗಿ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ 22 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ ಸಂಗ್ರಹಿಸಿ ತರಲಾಗಿದ್ದ ಪವಿತ್ರ ಮೃತ್ತಿಕೆಯನ್ನು ಸ್ವೀಕರಿಸಿ, ಪ್ರತಿಮೆಯ ನಾಲ್ಕು ಗೋಪುರಗಳ ಪೈಕಿ ಒಂದಕ್ಕೆ ಸಾಂಕೇತಿಕವಾಗಿ ಸಮರ್ಪಿಸಲಾಯಿತು.

11 ಗಂಟೆಗೆ ಸರಿಯಾಗಿ ಸುಮುಹೂರ್ತದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳಿಂದಲೂ ಪವಿತ್ರ ಮೃತ್ತಿಕೆಯೊಂದಿಗೆ ಆಗಮಿಸಿದ್ದ ವಿಶೇಷ ರಥಗಳನ್ನು ವಿಧಿಬದ್ಧವಾಗಿ ಬರಮಾಡಿಕೊಳ್ಳಲಾಯಿತು. ನಂತರ, ಪವಿತ್ರ ಮೃತ್ತಿಕೆಗೆ ಪೂಜೆ ಸಲ್ಲಿಸಿ, ಮುಂದಿನ ವಿಧಿಗಳನ್ನು ಮಂತ್ರಸಹಿತವಾಗಿ ನೆರವೇರಿಸಲಾಯಿತು. ಸಚಿವರು ಮತ್ತು ಸಂಸದರು ಈ ಕೈಂಕರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ: ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥ್​ ನಾರಾಯಣ್​ ಅವರು, ಕೆಂಪೇಗೌಡರ ಹೆಸರು ಇಡೀ ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಬೇಕೆಂಬ ಉದ್ದೇಶದಿಂದ 15 ದಿನಗಳ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿದ್ಧಪಡಿಸಿದ್ದ 21 ವಿಶೇಷ ರಥಗಳು ನಾಡಿನ 22 ಸಾವಿರ ಸ್ಥಳಗಳಿಗೆ ಹೋಗಿಬಂದಿವೆ ಎಂದರು.

ಸೋಷಿಯಲ್‌ ಮೀಡಿಯಾದಲ್ಲಿ ಅಭಿಯಾನ: ಅಲ್ಲದೆ, ಈ ಅವಧಿಯಲ್ಲಿ ರಥಗಳು 3.61 ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಿದ್ದು, 20 ಸಾವಿರ ಕಿ.ಮೀಗೂ ಹೆಚ್ಚು ದೂರವನ್ನು ಕ್ರಮಿಸಿವೆ. ಜತೆಗೆ, ಈ ಅಭಿಯಾನದ ಭಾಗವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಕೈಗೊಂಡ ಪ್ರಚಾರದ ಮೂಲಕ 64 ಲಕ್ಷ ಜನರನ್ನು ತಲುಪಲಾಗಿದೆ ಎಂದು ಅವರು ವಿವರಿಸಿದರು.

ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌: ಪ್ರಪಂಚದ ಯಾವ ನಗರದಲ್ಲೂ ಅಲ್ಲಿಯ ಸಂಸ್ಥಾಪಕರು ಇಷ್ಟು ಎತ್ತರದ ಪ್ರತಿಮೆ ಇಲ್ಲ. ಈ ಮೂಲಕ ಕೆಂಪೇಗೌಡರ ಪ್ರತಿಮೆಯು ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದೆ. ಪ್ರತಿಮೆ ಮತ್ತು 23 ಎಕರೆ ಥೀಮ್‌ ಪಾರ್ಕ್‌ಗೆ ಒಟ್ಟು 84 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಅವರು ನುಡಿದರು.

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ್​ನಾರಾಯಣ್​, ಸದಸ್ಯ ಮತ್ತು ಸಚಿವರಾದ ಆರ್. ಅಶೋಕ್​, ಎಂ.ಟಿ.ಬಿ ನಾಗರಾಜ್, ಸಂಸದರಾದ ಡಿ. ವಿ ಸದಾನಂದಗೌಡ ಮತ್ತು ಬಿ ಎನ್ ಬಚ್ಚೇಗೌಡ, ರಾಜ್ಯಸಭೆ ಸದಸ್ಯ ಜಗ್ಗೇಶ್, ಶಾಸಕ ಎಸ್ ಆರ್ ವಿಶ್ವನಾಥ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾ ಉಪಸ್ಥಿತರಿದ್ದರು.

ಓದಿ:ಕೆಂಪೇಗೌಡ ಪ್ರತಿಮೆ, ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟನೆಗೆ ಮೋದಿ ಆಗಮನ: ಸಿದ್ದತೆಗೆ ಸಿಎಂ ಸೂಚನೆ

ABOUT THE AUTHOR

...view details