ಕರ್ನಾಟಕ

karnataka

By ETV Bharat Karnataka Team

Published : Oct 29, 2023, 11:47 AM IST

ETV Bharat / state

ಸ್ಮಶಾನದಲ್ಲಿ ಸಮಾಧಿ ಮೇಲೆ ಕುಳಿತು ಕಳ್ಳೇಪುರಿ ತಿನ್ನುತ್ತಾ, ರಂಗಗೀತೆ: ಹುಲಿಕಲ್ ನಟರಾಜ್‌ ನೇತೃತ್ವದಲ್ಲಿ ಮೌಢ್ಯಕ್ಕೆ ಸೆಡ್ಡು

ಚಿಂತಕ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಮೌಢ್ಯತೆ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಮೌಢ್ಯತೆಗೆ ಸೆಡ್ಡು ಹೊಡೆದ ದೊರೆಕಾವಲು ಗ್ರಾಮಸ್ಥರು
ಮೌಢ್ಯತೆಗೆ ಸೆಡ್ಡು ಹೊಡೆದ ದೊರೆಕಾವಲು ಗ್ರಾಮಸ್ಥರು

ಚಂದ್ರಗ್ರಹಣ: ಮೌಢ್ಯತೆಯ ಕುರಿತು ಜನಜಾಗೃತಿ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಚಂದ್ರಗ್ರಹಣ ಸಮಯದಲ್ಲಿ ಸ್ಮಶಾನದಲ್ಲಿರುವ ಸಮಾಧಿಗಳ ಮೇಲೆ ಕುಳಿತು ಕಳ್ಳೇಪುರಿ ತಿನ್ನುತ್ತಾ, ರಂಗಗೀತೆಗಳನ್ನು ಹಾಡುವ ಮೂಲಕ ಜನರು ಮೌಢ್ಯತೆಗೆ ಸೆಡ್ಡು ಹೊಡೆದ ಘಟನೆ ದೇವನಹಳ್ಳಿಯ ದೊರೆಕಾವಲು ಗ್ರಾಮದಲ್ಲಿ ನಡೆದಿದೆ. ಪವಾಡ ಭಂಜಕ ಖ್ಯಾತಿಯ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಗ್ರಾಮದ ಸ್ಮಶಾನದಲ್ಲಿ ಸೇರಿದ ಜನರು, ಗ್ರಹಣ ಸಂದರ್ಭದಲ್ಲಿ ಪ್ರಕೃತಿಯಲ್ಲಿ ನಡೆಯುವ ಕೌತುಕ ಕಣ್ತುಂಬಿಕೊಂಡರು.

ಚಲನೆಯ ಕಾರಣದಿಂದ ನೆರಳುಬೆಳಕಿನ ಆಟದಲ್ಲಿ ಗ್ರಹಣಗಳು ಸಂಭವಿಸುತ್ತವೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ. ನಾವು ಪೂಜೆ, ಪುನಸ್ಕಾರ, ದಾನ ಮಾಡಿದರೆ ಗ್ರಹಣಗಳನ್ನು ನಿಲ್ಲಿಸಲು ಸಾಧ್ಯವೇ? ಹುಲಿಕಲ್​ ನಟರಾಜ್ ಹೇಳಿದರು.​ ಇದೇ ವೇಳೆ, ಶವಯಾತ್ರೆಯ ಸಂದರ್ಭದಲ್ಲಿ ಕಳ್ಳೇಪುರಿ ಎಸೆಯುವುದು ಶವ ಯಾವ ಕಡೆ ಹೋಗಿದೆ ಎಂದು ಗೊತ್ತಿಲ್ಲದ ಜನರಿಗೆ ತಿಳಿಸಲು ಎಂದು ಸ್ಪಷ್ಟಪಡಿಸಿದರು.

ಈ ವರ್ಷದ ಕೊನೆಯ ಚಂದ್ರಗ್ರಹಣ ಶನಿವಾರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭಗೊಂಡು 2.24ಕ್ಕೆ ಅಂತ್ಯಗೊಂಡಿತು. ಮಲೆನಾಡಿನಲ್ಲೂ ಗ್ರಹಣ ಗೋಚರಿಸಿದೆ. ಗ್ರಹಣದ ವೇಳೆ ಮೋಡಗಳು ಚಲಿಸುತ್ತಿದ್ದುದರಿಂದ ವೀಕ್ಷಣೆಗೆ ಸ್ವಲ್ಪಮಟ್ಟಿಗೆ ಅಡ್ಡಿ ಉಂಟಾಗಿತ್ತು. ಚಂದ್ರನ ಮೇಲ್ಮೈ ಮೇಲೆ ಭೂಮಿಯ ನೆರಳು ಬಿದ್ದಾಗ ಗ್ರಹಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯ, ಭೂಮಿ ಹಾಗೂ ಚಂದ್ರ ಒಂದೇ ರೇಖೆಯಲ್ಲಿ ಇರುತ್ತದೆ.

ಶನಿವಾರ ಸಂಜೆಯಿಂದಲೇ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಗ್ರಹಣ ಮುಗಿದ ಬಳಿಕ ಬೆಳಿಗ್ಗೆ ದೇವಾಲಯಗಳನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ. ರಾಜ್ಯದ ಪ್ರಸಿದ್ದ ದೇವಾಲಯ ಸಿಗಂದೂರಿನ ಚೌಡೇಶ್ವರಿ ದೇವಾಲಯದಲ್ಲಿ ಎಂದಿನಂತೆ ಬೆಳಗಿನ ಜಾವ 4 ಗಂಟೆಗೆ ಪೂಜೆ ಪ್ರಾರಂಭವಾಗಿದೆ. ಹೋಮ, ಹವನಗಳು ನಡೆದವು. ಭಕ್ತರಿಗೆ ಚೌಡೇಶ್ವರಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರ: ದೇವಾಲಯಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ

ABOUT THE AUTHOR

...view details