ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಸ್ಸೋಂ ರಾಜಧಾನಿ ಗುವಾಹಟಿಗೆ ಪ್ರಯಾಣ ಬೆಳೆಸುವ ವೇಳೆ ಕಾಲಿನಲ್ಲಿ ಚಾಕು, ಬ್ಲೇಡ್ ಮತ್ತು ನೈಲ್ ಕಟರ್ ಕಟ್ಟಿಕೊಂಡು ಬಂದಿದ್ದ ಗರ್ಭಿಣಿಯನ್ನು ಕೆಐಎಎಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಏಪ್ರಿಲ್ 8ರ ಬೆಳಗ್ಗೆ 5:20ಕ್ಕೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಗೌಹಾಟಿಗೆ ಗರ್ಭಿಣಿ ಉಮಾದೇವಿ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದಳು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಪ್ರಯಾಣಿಕರನ್ನ ತಪಾಸಣೆ ಮಾಡುವ ಸಮಯದಲ್ಲಿ ಉಮಾದೇವಿ ನಡೆ ಅನುಮಾನಾಸ್ಪದವಾಗಿತ್ತು. ಅವರನ್ನು CISF ಸಿಬ್ಬಂದಿ ತಪಾಸಣೆ ನಡೆಸಿದಾಗ ಕಾಲಿನಲ್ಲಿ ಚೂಪಾದ ಚಾಕು, ಬ್ಲೇಡ್, ನೈಲ್ ಕಟರ್ ಮತ್ತು ಒಂದು ಪೇಪರ್ ಕಟರ್ ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.