ಕರ್ನಾಟಕ

karnataka

ETV Bharat / state

ಸಿಎಲ್​​ಪಿ ಸಭೆಗೆ ಪರಮೇಶ್ವರ್​​ ಸೇರಿ ಹಲವರ ಗೈರು: ಮತ್ತೆ ಮುನಿಸಿಕೊಂಡರಾ ಮೂಲ ಕಾಂಗ್ರೆಸಿಗರು?

ಮೂಲ ಕಾಂಗ್ರೆಸಿಗರ ಮುನಿಸು ಮತ್ತೆ ತಾರಕಕ್ಕೇರಿದೆ ಎಂದೇ ಹೇಳಲಾಗುತ್ತಿದೆ. ಅದು ಇಂದಿನ ಸಿಎಲ್​ಪಿ ಸಭೆಯ ಮೂಲಕ ವ್ಯಕ್ತವಾಗಿದೆ. ಸಭೆಗೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ರಾಜಶೇಖರ್ ಪಾಟೀಲ್, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ರಾಮಲಿಂಗಾರೆಡ್ಡಿ ಗೈರಾಗಿದ್ದಾರೆ.

By

Published : Sep 18, 2019, 1:28 PM IST

congress

ಬೆಂಗಳೂರು: ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಪಡೆ ಬಲಗೊಳ್ಳುತ್ತಿದೆ. ಇನ್ನೊಂದೆಡೆ ಮೂಲ ಕಾಂಗ್ರೆಸಿಗರ ಮುನಿಸು ಮತ್ತೆ ತಾರಕಕ್ಕೇರಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ದಿಲ್ಲಿಗೆ ತೆರಳಿ ಸಾಕಷ್ಟು ಲಾಬಿ ನಡೆಸಿ ಪ್ರತಿಪಕ್ಷದ ನಾಯಕ ಸ್ಥಾನವನ್ನು ಬಹುತೇಕ ಗಿಟ್ಟಿಸಿಕೊಂಡು ವಾಪಸ್ಸಾಗಿರುವ ಸಿದ್ದರಾಮಯ್ಯ ಮೇಲೆ ಮೂಲ ಕಾಂಗ್ರೆಸಿಗರು ಮುನಿಸಿಕೊಂಡಿದ್ದಾರೆ. ಅದು ಇಂದಿನ ಸಿಎಲ್​ಪಿ ಸಭೆಯ ಮೂಲಕ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಹಾಗೂ ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭವಾಗಿದ್ದು, ಮೂಲ ಕಾಂಗ್ರೆಸಿಗರಾದ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ರಾಜಶೇಖರ್ ಪಾಟೀಲ್, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ರಾಮಲಿಂಗಾರೆಡ್ಡಿ ಗೈರಾಗಿದ್ದಾರೆ.

ಸಿಎಲ್​ಪಿ ಸಭೆ

ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಭೆಗೆ ಹಾಜರಾಗಿದ್ದಾರೆ. ಆದರೆ ಅನ್ಯಮನಸ್ಕರಾಗಿ ಕುಳಿತಿದ್ದಾರೆ.

ಮಾಜಿ ಡಿಸಿಎಂ ದೂರ ದೂರ

ಕಾಂಗ್ರೆಸ್ ಶಾಸಕಾಂಗ ಸಭೆಯಿಂದ ದೂರವೇ ಉಳಿದಿರುವ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಇಂದಿನ ಶಾಸಕಾಂಗ ಪಕ್ಷದ ಸಭೆಯ ಬಗ್ಗೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಪರಮೇಶ್ವರ್, ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇಂದು ಕರೆದಿರುವ ಶಾಸಕಾಂಗ ಸಭೆ ಹಿಂದೆ ಸಿದ್ದರಾಮಯ್ಯನವರ ರಾಜಕೀಯ ಲೆಕ್ಕಾಚಾರವಿದೆ. ತಾನೇ ಕಾಂಗ್ರೆಸ್​ನ ಪ್ರಶ್ನಾತೀತ ನಾಯಕ ಅಂತ ಬಿಂಬಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ವಿಚಾರದಲ್ಲಿ ತೀವ್ರ ಮುನಿಸು ಹೊಂದಿರುವ ಪರಮೇಶ್ವರ್ ಉದ್ದೇಶಪೂರ್ವಕವಾಗಿ ಇಂದು ದಿಲ್ಲಿಯಲ್ಲಿ ಕಾರ್ಯಕ್ರಮ ಇಟ್ಟುಕೊಂಡು ತೆರಳಿದ್ದಾರೆ ಎಂಬ ಮಾಹಿತಿಯೂ ಇದೆ.

ಕಳೆದ ವಾರ ನಡೆದ ಉಪ ಚುನಾವಣೆ ಸಭೆಗಳಿಂದಲೂ ಪರಮೇಶ್ವರ್​ ಅವರನ್ನು ದೂರ ಇಡಲಾಗಿತ್ತು. ಪರಮೇಶ್ವರ್​ಗೆ ಒಂದು ಕ್ಷೇತ್ರದ ವೀಕ್ಷಕರನ್ನಾಗಿ ಮಾತ್ರ ಜವಾಬ್ದಾರಿ ನೀಡಲಾಗಿದೆ. ಉಪ ಚುನಾವಣೆ ಸಿದ್ಧತೆಯಲ್ಲೂ ಸಿದ್ದರಾಮಯ್ಯ ಶಿಷ್ಯರು ಮಾತ್ರ ಒಳಗೊಳ್ಳುತ್ತಿದ್ದಾರೆ. ಈ ಎಲ್ಲ ವಿಚಾರಗಳಿಂದ ಪರಮೇಶ್ವರ್ ಅತೀವ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಭೇಟಿ

ಈ ಎಲ್ಲ ಬೆಳವಣಿಗೆಗಳಿಂದ ನೇರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಭೇಟಿ ಮಾಡಿರುವ ಪರಮೇಶ್ವರ್, ರಾಜ್ಯದ ಎಲ್ಲಾ ರಾಜಕೀಯ ಬೆಳವಣಿಗೆಗಳ ವಿಚಾರಗಳನ್ನು ತಿಳಿಸಿದ್ದೇನೆ ಎನ್ನೋ ಸ್ಪಷ್ಟ ಸಂದೇಶವನ್ನೂ ರವಾನೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಕೂಡ ದೆಹಲಿಯಲ್ಲಿ ಉಳಿದಿರುವ ಪರಮೇಶ್ವರ್, ಇಂದಿನ ಶಾಸಕಾಂಗ ಸಭೆಯಿಂದಲೂ ದೂರವೇ ಉಳಿಯಲು ನಿರ್ಧರಿಸಿದ್ದರು.ಒಟ್ಟಾರೆ ಮೂಲ ಕಾಂಗ್ರೆಸಿಗರ ವಲಸೆ, ಕಾಂಗ್ರೆಸಿಗರ ವೈಮನಸ್ಸು ಪಕ್ಷದಲ್ಲಿ ಮತ್ತೆ ಗರಿಗೆದರಿದ್ದು, ಯಾವ ಹಂತ ತಲುಪಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details