ದೇವನಹಳ್ಳಿ: ಬೆಂಗಳೂರು ಮಹಾನಗರಕ್ಕೆ ಅಂಟಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಬೆಳೆಯುತ್ತಿದ್ದು, ನಾಯಿ ಕೊಡೆಗಳಂತೆ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ ಬಹುತೇಕ ಬಡಾವಣೆಗಳು ಭೂ ಪರಿವರ್ತನೆಯಾಗದೆ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಬಡಾವಣೆ ನಿರ್ಮಾಣಕ್ಕೆ ಮುಂದಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1040 ಅಕ್ರಮ ಬಡಾವಣೆ ಪತ್ತೆಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿಎನ್ ರವೀಂದ್ರರವರ ಆದೇಶದಂತೆ ಅನಧಿಕೃತ ಬಡಾವಣೆಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಭೂ ಪರಿವರ್ತನೆ ಆಗದೆ ಹಾಗೂ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೆ ಇರುವ 1040 ಅಕ್ರಮ ಬಡಾವಣೆಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು. ದೇವನಹಳ್ಳಿ ತಾಲೂಕಿನಲ್ಲಿ 416.30 ಎಕರೆ ಒಳಗೊಂಡ 350 ಅಕ್ರಮ ಬಡಾವಣೆಗಳನ್ನು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 172.19 ಎಕರೆಯ 123 ಬಡಾವಣೆಗಳು ಹೊಸಕೋಟೆ ತಾಲೂಕಿನ 266.25 ಎಕರೆಯ 186 ಲೇಔಟ್ಗಳು ಮತ್ತು ನೆಲಮಂಗಲ ತಾಲೂಕಿನ 479.23 ಎಕರೆಯ 381 ಅನಧಿಕೃತ ಬಡಾವಣೆಗಳೆಂದು ಗುರುತಿಸಲಾಗಿದೆ.
ಜಿಲ್ಲಾಡಳಿತ ಗುರುತಿಸಿರುವ ಅನಧಿಕೃತ ಬಡಾವಣೆಗಳ ಪೈಕಿ 83.19 ಎಕರೆ ಪ್ರದೇಶದಲ್ಲಿನ 55 ಬಡಾವಣೆಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇವುಗಳಲ್ಲಿ ದೇವನಹಳ್ಳಿ ತಾಲೂಕಿನಲ್ಲಿ 5.02 ಎಕರೆಯ 3, ದೊಡ್ಡಬಳ್ಳಾಪುರದಲ್ಲಿ 29.13 ಎಕರೆಯ 7, ಹೊಸಕೋಟೆ ತಾಲೂಕಿನ 23.24 ಎಕರೆಯ 15 ಮತ್ತು ನೆಲಮಂಗಲ ತಾಲೂಕಿನ 25.20 ವಿಸ್ತೀರ್ಣದಲ್ಲಿನ 30 ಬಡಾವಣೆಗಳನ್ನು ತೆರವುಗೊಳಿಸಲಾಗಿದೆ. ಕೇವಲ ಬಡಾವಣೆ ತೆರವುಗೊಳಿಸಿ ಭೂಮಿಯನ್ನು ವಶಕ್ಕೆ ಪಡೆದುಕೊಂಡಿರುವುದು ಮಾತ್ರವಲ್ಲದೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಇಲ್ಲಿಯವರೆಗೂ 55 ಬಡಾವಣೆಗಳನಷ್ಟೇ ತೆರವುಗೊಳಿಸಿದ್ದು, ಉಳಿದ 1259.10 ಎಕರೆಯ 985 ಬಡಾವಣೆಗಳ ತೆರವು ಕಾರ್ಯಾಚರಣೆಗೆ ಸಿದ್ಧತೆಗಳು ಆರಂಭವಾಗಿದೆ.