ಕರ್ನಾಟಕ

karnataka

By

Published : May 4, 2023, 3:37 PM IST

Updated : May 4, 2023, 4:01 PM IST

ETV Bharat / state

ಪ್ರತಿಷ್ಠೆಯ ಕಣವಾದ ಹೊಸಕೋಟೆ ವಿಧಾನಸಭಾ ಕ್ಷೇತ್ರ: ಎಂಟಿಬಿ ನಾಗರಾಜ್ - ಶರತ್ ಬಚ್ಚೇಗೌಡ ನಡುವೆ ಜಿದ್ದಾಜಿದ್ದಿ

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ನೇರ ಹಣಾಹಣಿ ಇದ್ದು ಉಭಯ ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದ್ದ ಈ ಕ್ಷೇತ್ರ, ಇದೀಗ ರಾಜಕೀಯವಾಗಿ ಮತ್ತೆ ಜನರ ಮುಂದೆ ಬಂದಿದೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್, ಕಾಂಗ್ರೆಸ್​ನಿಂದ ಶರತ್​ ಬಚ್ಚೇಗೌಡ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 17 ಅಭ್ಯರ್ಥಿಗಳಿದ್ದಾರೆ.

Hoskote Assembly Constituency Profile
Hoskote Assembly Constituency Profile

ಹೊಸಕೋಟೆ ವಿಧಾನಸಭಾ ಕ್ಷೇತ್ರ

ಬೆಂಗಳೂರು:ಹೊಸಕೋಟೆ ವಿಧಾನಸಭಾ ಕ್ಷೇತ್ರ ಇದೀಗ ರೋಚಕ ಕದನವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕಾರಣದ ಜಿದ್ದಾಜಿದ್ದಿ ಕಣಗಳಲ್ಲಿ ಹೊಸಕೋಟೆ ಕೂಡ ಒಂದಾಗಿದೆ. ಇಲ್ಲಿ ರಾಜಕೀಯ ಪಕ್ಷಗಳ ಆಟ ಯಾವುದೇ ಕಾರಣಕ್ಕೂ ಈವರೆಗೆ ನಡೆಯದಿರುವುದು ಕ್ಷೇತ್ರದ ಮತ್ತೊಂದು ಮುಖ್ಯವಾದ ವಿಷಯ. ಇಲ್ಲಿ ಏನಿದ್ದರೂ ನೇರವಾಗಿ ಎರಡು ಕುಟುಂಬಗಳ ನಡುವಿನ ರಾಜಕೀಯವೇ ಅಧಿಕ. 1962ರಿಂದ 1999ರ ವರೆಗೆ ಈ ಕ್ಷೇತ್ರದಲ್ಲಿ ಬಚ್ಚೇಗೌಡ ಮತ್ತು ಚಿಕ್ಕೇಗೌಡ ಕುಟುಂಬಗಳು ಬಹುತೇಕ ಅಧಿಕಾರ ಚಲಾಯಿಸಿಕೊಂಡು ಬಂದಿವೆ. 2004ರಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಂಟಿಬಿ ನಾಗರಾಜ್ ಆಗಮನದಿಂದ ಇಲ್ಲಿನ ರಾಜಕೀಯದ ಚಿತ್ರಣವೇ ಬದಲಾಗಿ ಹೋಗುತ್ತದೆ.

ಶರತ್ ಬಚ್ಚೇಗೌಡ (ಎಡ) ಮತ್ತು ಎಂಟಿಬಿ ನಾಗರಾಜ್ (ಬಲ)

ಇದನ್ನೂ ಓದಿ:1,510 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂ.ಟಿ.ಬಿ.ನಾಗರಾಜ್; 3 ವರ್ಷದಲ್ಲಿ ₹286 ಕೋಟಿ ಹೆಚ್ಚಳ

ಈವರೆಗೆ ಬಹುತೇಕ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಇನ್ನೊಂದು ವಿಶೇಷ. 2004ರ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಕಾಂಗ್ರೆಸ್​ ಅಭ್ಯರ್ಥಿ ಎಂಟಿಬಿ ನಾಗರಾಜ್ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿ ವಿಧಾನಸಭೆ ಪ್ರವೇಶ ಮಾಡಿದರು. ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದ ಬಿ.ಎನ್. ಬಚ್ಚೇಗೌಡ ಎರಡನೇ ಸ್ಥಾನಕ್ಕೆ ಕುಸಿದಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬಿ.ಎನ್. ಬಚ್ಚೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ಅವರು ಬಿಜೆಪಿಯ ಬಿ.ಎನ್. ಬಚ್ಚೇಗೌಡ ವಿರುದ್ಧ 7 ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೆ ವಿಧಾನಸಭೆ ಪ್ರವೇಶ ಮಾಡಿದರು. 2018ರ ವೇಳೆಗೆ ಬಿ.ಎನ್. ಬಚ್ಚೇಗೌಡ ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದರಿಂದ ತಂದೆಯ ಬದಲಾಗಿ ಪುತ್ರ ಶರತ್ ಬಚ್ಚೇಗೌಡ 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗಿಳಿದರು. ಬಿಜೆಪಿಯಿಂದ ಮೊದಲ ಭಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಶರತ್ ಬಚ್ಚೇಗೌಡ, ಕಾಂಗ್ರೆಸ್​ನ ಎಂಟಿಬಿ ನಾಗರಾಜ್ ವಿರುದ್ಧ 7,597 ಮತಗಳ ಅಂತರದಿಂದ ಎರಡನೇ ಸ್ಥಾನಕ್ಕೆ ಕುಸಿದರು.

ರಾಜಕೀಯ ಪಕ್ಷಗಳ ಗೆಲುವಿನ ಮಾಹಿತಿ

2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಎಂಟಿಬಿ ನಾಗರಾಜ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಪರೇಷನ್ ಕಮಲಕ್ಕೆ ಒಳಗಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ನಡೆಸಿದ ಎಂಟಿಬಿ 70,185 ಮತಗಳನ್ನು ಪಡೆದು ಪರಾಭವಗೊಂಡರು. ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡಗೊಂಡ ಕಾರಣ ಶರತ್ ಬಚ್ಚೇಗೌಡ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು. ಒಟ್ಟು 81,671 ಮತಗಳನ್ನು ಪಡೆದ ಶರತ್ ಬಚ್ಚೇಗೌಡ, 11,486 ಮತಗಳ ಅಂತರದಿಂದ ಜಯ ಗಳಿಸಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧಕ್ಕೂ ಪ್ರವೇಶ ಮಾಡಿದರು. ಬಳಿಕ ಎಂಟಿಬಿ ಪರಿಷತ್ ಸದಸ್ಯರಾಗಿ ಸಚಿವರಾದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತಗಳು:ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,25,567 ಮತದಾರರಿದ್ದಾರೆ. ಅದರಲ್ಲಿ 1,12,339 ಪುರುಷ ಮತಗಳು, 1,13,211 ಮಹಿಳಾ ಮತಗಳು 17 ತೃತೀಯ ಲಿಂಗಿ ಮತದಾರರಿದ್ದಾರೆ. ಒಕ್ಕಲಿಗರೇ ಇಲ್ಲಿ ನಿರ್ಣಾಯಕ. ಅವರ ಜೊತೆ ಎಸ್ಸಿ-ಎಸ್ಟಿ, ಲಿಂಗಾಯುತರು ಮತ್ತು ವೀರಶೈವ, ಮುಸ್ಲಿಂ, ಕುರುಬ, ಗೊಲ್ಲ, ತಿಗಳ, ಬಲಿಜಿಗ, ಕಮ್ಮ ನಾಯ್ಡು, ಬ್ರಾಹ್ಮಣ, ಜೈನ್, ಮಡಿವಾಳ, ಭಜಂತ್ರಿ, ಗಾಣಿಗ, ವಿಶ್ವಕರ್ಮ, ದೇವಾಂಗ, ಉಪ್ಪಾರ, ಕುಂಬಾರ, ತೊಗಟ ಸಮುದಾಯದವರು ಇದ್ದಾರೆ.

ಸ್ಥಾನವಾರು ವಿಧಾನಸಭಾ ಚುನಾವಣೆ

ಅಭಿವೃದ್ಧಿ ವಿಚಾರ ಸೇರಿದಂತೆ ಕೆಲವು ಕಾರಣಗಳಿಂದ ಹೊಸಕೋಟೆ ರಾಜಕೀಯವನ್ನು ಈ ಮೊದಲು ಮಿನಿ ಬಿಹಾರ ಅಂತಾನೇ ಹೇಳಲಾಗುತ್ತಿತ್ತು. ಸದ್ಯ ತಾಲೂಕಿನಲ್ಲಿ ಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ್ ತಾಲೂಕಿಗೆ 1 ಸಾವಿರ ಕೋಟಿ ಅನುದಾನ ತಂದಿದ್ದಾರೆ. ಈ ಮೂಲಕ ಪ್ರತಿಯೊಂದು ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸಿದ್ದಾರೆ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಎಂಟಿಬಿ ಮುಂದಿದ್ದು ಜನ ಅಭಿವೃದ್ಧಿ ಪರಿಗಣಿಸಿದರೆ ಅವರ ಗೆಲುವು ಸುಲಭವಾಗಲಿದೆ.

ಪುರುಷ ಮತ್ತು ಮಹಿಳಾ ಮತದಾರರ ಮಾಹಿತಿ

ಶರತ್ ಬಚ್ಚೇಗೌಡ ಒಬ್ಬ ವಿದ್ಯಾವಂತ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡಿದ ಯುವ ರಾಜಕಾರಣಿ. ಎಂಟಿಬಿ ನಾಗರಾಜ್​ಗೆ ಪ್ರಬಲ ಸ್ಪರ್ಧಿ. ಇವರು ಕೂಡ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇವರಿಬ್ಬರನ್ನೂ ಸೇರಿ ಕಣದಲ್ಲಿ ಒಟ್ಟು 17 ಅಭ್ಯರ್ಥಿಗಳಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಎದ್ದು ಕಾಣುತ್ತಿರುವುದು ಮಾತ್ರ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ. ಕಣದಲ್ಲಿ ಎಂಟಿಬಿ ಹೆಸರಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಮತ್ತು ಶರತ್ ಬಚ್ಚೇಗೌಡರ ಹೆಸರಿನಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿರುವುದು ಗೊಂದಲ ತರಿಸಬಹುದು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶರತ್ ಬಚ್ಚೇಗೌಡರ ಗುರುತು ಕುಕ್ಕರ್ ಆಗಿತ್ತು. ಈ ಬಾರಿಯು ಪಕ್ಷೇತರ ಅಭ್ಯರ್ಥಿಯಾಗಿರುವ ಮತ್ತೊಬ್ಬ ಶರತ್ ಬಚ್ಚೇಗೌಡರ ಗುರುತು ಸಹ ಕುಕ್ಕರ್ ಆಗಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಪಕ್ಷ ಇಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಕೂಡ ಅಚ್ಚರಿ ತರಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ನೇರ ಹಣಾಹಣಿ ಏರ್ಪಡುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಎಲ್ಲಿನ ರಾಜಕೀಯ ವಿಶ್ಲೇಷಕರು.

ವಿಜೇತ ಅಭ್ಯರ್ಥಿಗಳ ಆಸ್ತಿ ಘೋಷಣೆ ಹಾಗೂ ಕ್ರಿಮಿನಲ್​ ವಿವರ

ಇದನ್ನೂ ಓದಿ:ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್​​ ವಿರುದ್ಧ ಬಿಎಸ್​ ಯಡಿಯೂರಪ್ಪ ಕಿಡಿ

Last Updated : May 4, 2023, 4:01 PM IST

ABOUT THE AUTHOR

...view details