ಹೊಸಕೋಟೆ (ಬೆಂಗಳೂರು ಗ್ರಾಮಾಂತರ):ಪ್ರೀತಿಸಿ ಯುವತಿಯನ್ನು ವಿವಾಹವಾಗಿದ್ದ ಸಿಆರ್ಪಿಎಫ್ ಕಾನ್ಸ್ಟೇಬಲ್ ಇದೀಗ ಕೈ ಕೊಟ್ಟು ಪರಾರಿಯಾಗಿದ್ದಾನೆ. ವಂಚನೆಗೊಳಗಾಗಿರುವ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್ ಮತ್ತು ಯುವತಿ ಒಂದೇ ಗ್ರಾಮದವರಾಗಿದ್ದರು. ಇವರಿಬ್ಬರಿಗೆ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರಮೋದ್ ಯಲಹಂಕದ CRPF ಕ್ಯಾಂಪ್ನಲ್ಲಿ ಯುವತಿಯನ್ನು ವಿವಾಹವಾಗಿದ್ದ. ಆದ್ರೆ ವಿವಾಹವಾದ ನಂತರ ಇದೀಗ ಯುವತಿಯನ್ನ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ವಂಚಿಸಿ ನಾಪತ್ತೆಯಾಗಿರುವ ಪತಿಗಾಗಿ ಕಳೆದ ರಾತ್ರಿ ನಂದಗುಡಿ ಠಾಣೆ ಎದುರು ಪತ್ನಿ ಮತ್ತು ಪೋಷಕರು ಧರಣಿ ನಡೆಸಿದ್ದಾರೆ. ಇನ್ನು ಮದುವೆ ಬಳಿಕ ಪತ್ನಿ ಬಿಟ್ಟು ಬೇರೆ ಯುವತಿ ಜತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ ಎಂದು ಯುವತಿ ಆರೋಪಸಿದ್ದು, ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದ್ದಾಳೆ. ನ್ಯಾಯಕ್ಕಾಗಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಯುವತಿ ಆರೋಪಿಸಿದ್ದಾಳೆ.