ಕರ್ನಾಟಕ

karnataka

ಹಕ್ಕಿಜ್ವರ ಭೀತಿ.. ಜಾಗೃತಿ ಮೂಡಿಸುತ್ತಿರುವ ಪಶು ಪಾಲನಾ ಇಲಾಖೆ..

ಕೋಳಿಗಳ ಗಂಟಲು ದ್ರವ, ಹಿಕ್ಕೆ, ರಕ್ತ ಮಾದರಿ ಹಾಗೂ ನೀರಿನ ತಾಣಗಳಿಂದ ನೀರನ್ನು ಸಂಗ್ರಹಿಸಿ ಕೋಳಿ ಶೀತ ಜ್ವರ ಪತ್ತೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಹೆಬ್ಬಾಳ, ಬೆಂಗಳೂರು ಸಂಸ್ಥೆಗೆ ಸಲ್ಲಿಸಲಾಗಿದ್ದು, ಈವರೆಗೂ ಯಾವುದೇ ಹಕ್ಕಿ ಜ್ವರದ ಪ್ರಕರಣ ದೃಢಪಟ್ಟಿರುವುದಿಲ್ಲ..

By

Published : Jan 20, 2021, 7:01 PM IST

Published : Jan 20, 2021, 7:01 PM IST

Chicken
ಕೋಳಿ ಸಾಕಾಣಿಕ ಕೇಂದ್ರ

ದೇವನಹಳ್ಳಿ :ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿದ ಹಿನ್ನೆಲೆ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಹಕ್ಕಿಜ್ವರದಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಪಶು ಪಾಲನಾ ಇಲಾಖೆ, ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದು ಜನರಲ್ಲಿ ಜಾಗೃತಿ ಸಹ ಮೂಡಿಸಲಾಗುತ್ತಿದೆ.

ಕೋಳಿ ಸಾಕಾಣಿಕ ಕೇಂದ್ರ

ರಾಜ್ಯದಲ್ಲಿ ಒಟ್ಟು 594 ಲಕ್ಷ ಕೋಳಿ ಸಾಕಾಣಿಕೆ ಮಾಡಲಾಗುತ್ತಿದ್ದು, ವಾರ್ಷಿಕ ವಹಿವಾಟು ರೂ.2950 ಕೋಟಿ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 252 ವಾಣಿಜ್ಯ ಮಾಂಸದ ಕೋಳಿ ಸಾಕಾಣಿಕಾ ಕೇಂದ್ರಗಳು ಇದ್ದು, ಒಟ್ಟು 23,52,350 ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.

34 ವಾಣಿಜ್ಯ ಮೊಟ್ಟೆ ಕೋಳಿ ಸಾಕಾಣಿಕಾ ಕೇಂದ್ರಗಳಿದ್ದು, 7,33,100 ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. 99 ದೇಸಿ ಕೋಳಿ ಸಾಕಾಣಿಕಾ ಕೇಂದ್ರಗಳಿದ್ದು, 53,109 ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ 31,38,559 ಸಂಖ್ಯೆಯ ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.

ಹೊಸಕೋಟೆ ತಾಲೂಕಿನ ಅಮಾನಿಕೆರೆಯು ವಲಸೆ ಹಕ್ಕಿಗಳ ತಾಣವಾಗಿದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಕೋಳಿ ಶೀತ ಜ್ವರದ ಪ್ರಕರಣ ವರದಿಯಾಗಿರುವುದಿಲ್ಲ. ಜಿಲ್ಲೆಯ 4 ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರತಿನಿತ್ಯ ಅವರ ತಾಲೂಕುಗಳಲ್ಲಿ ಕೋಳಿಗಳ ಅಸಹಜ ಸಾವಿನ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸುತ್ತಿದ್ದು, ಅಂತಹ ಯಾವುದೇ ಪ್ರಕರಣ ಈವರೆಗೆ ವರದಿಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಪಶುಪಾಲನಾ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಕೋಳಿ ಸಾಕಾಣಿಕಾ ಕೇಂದ್ರಗಳಿಗೆ ಹಾಗೂ ಕೋಳಿ ಮಾಂಸ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಜೈವಿಕ ಸುರಕ್ಷತೆ ಕ್ರಮಗಳ ಬಗ್ಗೆ, ಕೋಳಿಗಳ ಆರೋಗ್ಯದ ಬಗ್ಗೆ ಪರಿಶೀಲಿಸಿ ಆ ಕೇಂದ್ರಗಳ ಮಾಲೀಕರಿಗೆ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆ ಕುರಿತು ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿದ್ದಾರೆ.

ಕೋಳಿಗಳ ಗಂಟಲು ದ್ರವ, ಹಿಕ್ಕೆ, ರಕ್ತ ಮಾದರಿ ಹಾಗೂ ನೀರಿನ ತಾಣಗಳಿಂದ ನೀರನ್ನು ಸಂಗ್ರಹಿಸಿ ಕೋಳಿ ಶೀತ ಜ್ವರ ಪತ್ತೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಹೆಬ್ಬಾಳ, ಬೆಂಗಳೂರು ಸಂಸ್ಥೆಗೆ ಸಲ್ಲಿಸಲಾಗಿದ್ದು, ಈವರೆಗೂ ಯಾವುದೇ ಹಕ್ಕಿ ಜ್ವರದ ಪ್ರಕರಣ ದೃಢಪಟ್ಟಿರುವುದಿಲ್ಲ.

ಕೋಳಿ ಶೀತಜ್ವರ ರೋಗೋದ್ರೇಕ ಕಂಡು ಬಂದಲ್ಲಿ ಅದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಒಟ್ಟು 48 ಕ್ಷಿಪ್ರ ಕಾರ್ಯಾಚರಣಾ ತಂಡಗಳನ್ನು (ಆರ್‌ಆರ್‌ಟಿ) ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ. ಒಟ್ಟು 240 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಕಂಡು ಬಂದಿರುವ ಕೋಳಿ ಶೀತ ಜ್ವರ ರಾಜ್ಯದಲ್ಲಿ ಈವರೆಗೂ ವರದಿಯಾಗಿರುವುದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹಕ್ಕಿ ಜ್ವರ ಪ್ರವೇಶಿಸದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂ. ಉಷ್ಣಾಂಶದಲ್ಲಿ ಬೇಯಿಸಿದಾಗ 3 ಸೆಕೆಂಡುಗಳಲ್ಲಿ ವೈರಾಣು ನಿಷ್ಕ್ರಿಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಆತಂಕ ಪಡದೆ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು ಎಂದು ಪಶು ವೈದ್ಯಾಧಿಕಾರಿಗಳು ಜನರಿಗೆ ಅರಿವು ಮೂಡಿಸಿದ್ದಾರೆ.

ABOUT THE AUTHOR

...view details