ಬಾಗಲಕೋಟೆ:ವಿಘ್ನ ವಿನಾಶಕನ ಮೂರ್ತಿಗಳನ್ನು ಭಗ್ನಗೊಳಿಸಿ, ಬೇಕಾಬಿಟ್ಟಿ ಎಸೆದು ಅಪಮಾನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಗಣೇಶ ಮೂರ್ತಿಗಳನ್ನು ಭಗ್ನಗೊಳಿಸಿ ಅಪಮಾನ... ಭಕ್ತರ ಆಕ್ರೋಶ - ಬಾಗಲಕೋಟೆ ಗಣೇಶ ಮೂರ್ತಿ ಸುದ್ದಿ
ಗಣೇಶನ ಹಬ್ಬ ಮುಗಿಯುತ್ತಾ ಬರುತ್ತಿದ್ದಂತೆ, ಗಣೇಶನ ಮೂರ್ತಿಗಳ ನಿಮಜ್ಜನ ಸಮಸ್ಯೆ ಎಲ್ಲೆಡೆ ಶುರುವಾಗಿದೆ. ಬಾಗಲಕೋಟೆ ನಗರದಲ್ಲೂ ಗಣೇಶನ ಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆದು ಗಣೇಶನಿಗೆ ಅಪಮಾನ ಮಾಡಲಾಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನವನಗರದ 38ನೇ ಸೆಕ್ಟರ್ನಲ್ಲಿ ಘಟನೆ ನಡೆದಿದ್ದು, ಚರಂಡಿ ಪಕ್ಕದಲ್ಲಿ ಭಗ್ನಗೊಂಡ ಮೂರ್ತಿಗಳನ್ನು ಅನಾಮಿಕರು ಎಸೆದಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈ ಸುದ್ದಿ ತಿಳಿದ ಪೊಲೀಸರು ಹಾಗೂ ಬಾಗಲಕೋಟೆ ನಗರಸಭೆ ಸಿಬ್ಬಂದಿ, ಬೇಕಾಬಿಟ್ಟಿ ಎಸೆದಿದ್ದ ಭಗ್ನಗೊಂಡ ಮೂರ್ತಿಗಳನ್ನು ಟಂಟಂನಲ್ಲಿ ಹೊತ್ತೊಯ್ದು ಬಾಗಲಕೋಟೆ ನಗರದ ಸಮೀಪ ಇರುವ ಘಟಪ್ರಭಾ ನದಿಯಲ್ಲಿ ನಿಮಜ್ಜನ ಮಾಡಿದ್ದಾರೆ. ಅಲ್ಲದೆ ಮೂರ್ತಿ ಭಗ್ನಗೊಳಿಸಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಣೇಶ ಹಬ್ಬ ಮುಗಿಯುವ ಹೊತ್ತಲ್ಲೇ ಈ ರೀತಿಯ ಅವಾಂತರ ಆಗಿದ್ದು, ಭಕ್ತರಿಗೆ ನೋವುಂಟು ಮಾಡಿದೆ. ಗಣೇಶನಿಗೆ ಅಪಮಾನ ಮಾಡಿದ್ದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.