ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಿವಯೋಗಿ ಮಂದಿರದ ದೃಶ್ಯಗಳನ್ನ ಪ್ರಸಾರ ಮಾಡಿದ್ದು, ಒಂದೆಡೆ ಸ್ವಾಮೀಜಿಗಳಲ್ಲಿ ಸಂತಸ ಕಂಡು ಬಂದರೆ ಮತ್ತೊಂದೆಡೆ ಅದರ ಬಗ್ಗೆ ಪ್ರಸ್ತಾಪ ಮಾಡದಿರೋದಕ್ಕೆ ಕೊಂಚ ನಿರಾಸೆ ವ್ಯಕ್ತವಾಗಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪೂರ್ವನಿಯೋಜಿತವಾಗಿ ಶಿವಯೋಗಿ ಮಂದಿರದಲ್ಲಿನ ಮಠಾಧೀಶರು, ವಟುಗಳು ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ನೇಕಾರರನ್ನ ಹೊಂದಿರುವ ಜಿಲ್ಲೆಯ ನೇಕಾರರ ಮುಖಂಡರು ಪಾಲ್ಗೊಂಡಿದ್ದರು.
ಇತ್ತ ಮಠಾಧೀಶರು ಮತ್ತು ನೇಕಾರರು ಉಪಸ್ಥಿತರಿದ್ದ ವಿಡಿಯೋ ಮೋದಿ ಅವರ ಮನ್ ಕಿ ಬಾತ್ನಲ್ಲಿ ಆಗಾಗ ಕಾಣಿಸಿಕೊಂಡಿದ್ದು ಒಂದೆಡೆ ಸಂತಸ ತಂದಿತ್ತು. ಆದರೆ, ಮಠದ ಬಗ್ಗೆ ಮತ್ತು ನೇಕಾರರ ಬಗ್ಗೆ ಪೂರ್ವ ನಿಯೋಜಿತದಂತೆ ಮೋದಿ ಮಾತನಾಡದೇ ಇರೋದು ಎಲ್ಲೋ ಒಂದು ಕಡೆ ಕೊಂಚ ನಿರಾಸೆಯನ್ನ ತಂದಿತ್ತು.