ಕರ್ನಾಟಕ

karnataka

By

Published : Jan 6, 2023, 6:01 PM IST

ETV Bharat / state

ಶರಣ ಮೇಳದ ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ ಆಯೋಜನೆ: ಡಾ.ಚನ್ನಬಸವಾನಂದ‌ ಸ್ವಾಮೀಜಿ

ಮಾತೆ ಮಹಾದೇವಿ ಮಾತಾಜೀ ಅವರ ಬಸವ ಧರ್ಮ ಪೀಠದಿಂದ ಪ್ರತಿ ವರ್ಷ ನಡೆಯುತ್ತಿದ್ದ ಶರಣ ಮೇಳ - ಈ ಶರಣ ಮೇಳದ ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ ಆಯೋಜನೆ - ಬಸವ ಧರ್ಮ ಪೀಠದಿಂದ ಡಾ.ಚನ್ನಬಸವಾನಂದ‌ ಸ್ವಾಮೀಜಿ ಅವರನ್ನು ಹೊರ ಹಾಕಿದ ಮೇಲೆ ಪರ್ಯಾಯ ಶರಣ ಮೇಳ ನಡೆಸಲು ತೀರ್ಮಾನ

Swabhimani Sharan Mela Utsav Committee President Dr. Channabasavananda Swamiji
ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷರು ಡಾ.ಚನ್ನಬಸವಾನಂದ‌ ಸ್ವಾಮೀಜಿ

ಬಸವ ಧರ್ಮ ಪೀಠದಿಂದ ಪ್ರತಿ ವರ್ಷ ನಡೆಯುತ್ತಿದ್ದ ಶರಣ ಮೇಳದ ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ ಆಯೋಜಿಸಲಾಗಿದೆ.

ಬಾಗಲಕೋಟೆ :ಮಾತೆ ಮಹಾದೇವಿ ಮಾತಾಜೀ ಅವರ ಬಸವ ಧರ್ಮ ಪೀಠದಿಂದ ಪ್ರತಿ ವರ್ಷ ನಡೆಯುತ್ತಿದ್ದ ಶರಣ ಮೇಳದ ಪರ್ಯಾಯವಾಗಿ ಮತ್ತೊಂದು ಶರಣ ಮೇಳ ಆಯೋಜನೆ ಮಾಡುವ ಮೂಲಕ ವಿವಾದ ಹುಟ್ಟು ಹಾಕಲಾಗಿದೆ. ಬಾಗಲಕೋಟೆ ನವನಗರದ ಪತ್ರಿಕಾ ಭವನದಲ್ಲಿ ಪರ್ಯಾಯ ಶರಣ ಮೇಳ ನಡೆಸುವ ಬಗ್ಗೆ ಡಾ.ಚನ್ನಬಸವಾನಂದ‌ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಸುಕ್ಷೇತ್ರ ಕೂಡಲ ಸಂಗಮದ ಬಸವ ಧರ್ಮ ಪೀಠದ ಸಂಸ್ಥಾಪಕರಾದ ಪ್ರಪ್ರಥಮ ಮಹಿಳಾ ಮಹಾ ಜಗುದ್ದುರು ಡಾ.ಮಾತೆ ಮಹಾದೇವಿ ಹಾಗೂ ಪ್ರಥಮ ಬಸವ ಧರ್ಮ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರು 1988 ರಲ್ಲಿ ಪ್ರಥಮ ಐತಿಹಾಸಿಕ ಶರಣ ಮೇಳವನ್ನು ಆರಂಭಿಸಿದರು. ಅದರಂತೆ 34 ವರ್ಷಗಳಿಂದ ಯಶಸ್ವಿಯಾಗಿ ಶರಣ ಮೇಳ ನಡೆದುಕೊಂಡು ಬರುತ್ತಿತ್ತು.

ಆದರೆ, ಈ ವರ್ಷ ಬಸವಧರ್ಮ ಪೀಠದಿಂದ ಡಾ.ಚನ್ನಬಸವಾನಂದ‌ ಸ್ವಾಮೀಜಿ ಅವರನ್ನು ಹೊರ ಹಾಕಿರುವ ಹಿನ್ನಲೆ ಇದಕ್ಕಾಗಿ ಶರಣ ಮೇಳಕ್ಕೆ ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ ಉತ್ಸವ ನಡೆಸಲಾಗುವುದು ಎಂದು ಹೇಳಿದರು. ಸಾವಿರಾರು ಕೋಟಿ ಆಸ್ತಿ ಇರುವ ಮಠದಲ್ಲಿ ಕಬಳಿಕೆ ಮಾಡುವ ಹುನ್ನಾರದಿಂದಾಗಿ ಪೀಠದಿಂದ ನನ್ನನ್ನು ಹೊರಗೆ ಹಾಕಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು. ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷನಾಗಿ, ಜನವರಿ 12 ರಿಂದ 14 ರವರೆಗೆ ಕೂಡಲಸಂಗಮ ಹೂವಿನಹಳ್ಳಿ ಗ್ರಾಮದ ಹತ್ತು ಏಕರೆ ಜಮೀನಿನಲ್ಲಿ ಸ್ವಾಭಿಮಾನಿ ಶರಣ ಮೇಳ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸ್ವಾಮೀಜಿ‌ ತಿಳಿಸಿದರು.

ಬಸವಧರ್ಮ ಪೀಠದಡಿಯಲ್ಲಿ ಐದು ಪೀಠಗಳನ್ನು ಸ್ಥಾಪನೆ ಮಾಡಲಾಗಿದ್ದು, ಕುಂಬಳಗೋಡ ಬಸವಗಂಗೋತ್ರಿ ಚನ್ನಬಸವ ಜ್ಞಾನ ಪೀಠಕ್ಕೆ‌ ನಾನೇ ಪೀಠಾಧ್ಯಕ್ಷನಾಗಿದ್ದೆ, ಸ್ಥಾಪನೆಗೆ ಮೂಲ ಕಾರಣವೇ ನಾನು, ಆದರೆ ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ಓಡಾಡಿ ಕೆಲಸ ಮಾಡಿದವರನ್ನೇ ಟ್ರಸ್ಟ್‌ನಿಂದ ತೆಗೆದಿದ್ದಾರೆ. ನಮ್ಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾಂಬಿಕೆ ಅವರಿಗೆ ಶಿಕ್ಷಣ ಇಲ್ಲ, ಆಡಳಿತದ ಜ್ಞಾನ ಕೂಡ ಇಲ್ಲ, ಅದಕ್ಕಾಗಿ ಬೇರೊಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಟ್ರಸ್ಟ್ ನಿಂದ ನಮ್ಮನ್ನು ಹೊರಗಿಟ್ಟು ಶರಣಮೇಳ, ಕಲ್ಯಾಣ ಪರ್ವ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕೆಲವರು ಆಸ್ತಿ ಲೂಟಿ ಮಾಡೋಕೆ ಬಂದಿದ್ದಾರೆ ಎಂದು ಕಿಡಿಕಾರಿದರು.

ಬಸವ ಧರ್ಮ ಪೀಠದ್ದು ಸುಮಾರು 1 ಸಾವಿರ ಕೋಟಿ ರೂಪಾಯಿ ಆಸ್ತಿಯಿದ್ದು, ಈ ಕುಮ್ಮಕ್ಕಿನ ಹಿಂದೆ ಕೆಲ ಮಠಾಧೀಶರು, ರಾಜಕಾರಣಿಗಳು ಇದ್ದಾರೆ. ಮಾತಾಜಿಗಳು ಇದ್ದಾಗ ರಾಷ್ಟ್ರೀಯ ಬಸವದಳ ಸಂಘಟನೆ ಒಡೆಯಬೇಕು ಅಂತಾ ಅಂದುಕೊಂಡವರೇ ಇದನ್ನೆಲ್ಲ ಮಾಡುತ್ತಿದ್ದಾರೆ. ಐದು ಭಾಷೆಗಳಲ್ಲಿ ಅನುಭವ ಇದ್ದು, ಕಳೆದ 35 ವರ್ಷಗಳಿಂದ ಬಸವ ಧರ್ಮ ಪೀಠ ಅಭಿವೃದ್ಧಿ ಗಾಗಿ ಸಾಕಷ್ಟು ಶ್ರಮಿಸಿದ್ದೇನೆ ಎಂದು ಡಾ.ಚನ್ನಬಸವಾನಂದ‌ ಸ್ವಾಮೀಜಿ ಇದೇ ವೇಳೆ ತಮ್ಮ ನಿರ್ಧಾರದ ಬಗ್ಗೆ ವಿವರಣೆ ನೀಡಿದರು.

ಈಗ ಬಸವ ಧರ್ಮ ಪೀಠಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೊರಗೆ ಹಾಕಿದ್ದಾರೆ. ಆದರೆ, ಈ ಬಗ್ಗೆ ಸಹ ನ್ಯಾಯಾಲಯದ ಮುಂದೆ ಹೋಗಿರುವುದಾಗಿ ಸ್ವಾಮೀಜಿ ತಿಳಿಸಿದರು. 12 ರಂದು ನಡೆಯುವ ಸ್ವಾಭಿಮಾನಿ 36 ನೇ ಶರಣ ಮೇಳವು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಡಾ.ಪ್ರಕಾಶ ಅಂಬೇಡ್ಕರ್ ಚಾಲನೆ ನೀಡಲಿದ್ದಾರೆ. ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರಿಗೆ ಹಾಗೂ ಕೆಲ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ನಾರಾಯಣ ಗುರು ತತ್ವ ಚಿಂತನೆಗೆ ವಿರುದ್ಧವಾದ ಪ್ರಣವಾನಂದರ ಪಾದಯಾತ್ರೆ ಬೆಂಬಲಿಸಬೇಡಿ: ಸ್ವಾಮಿ ಭದ್ರಾನಂದ

ABOUT THE AUTHOR

...view details