ಕರ್ನಾಟಕ

karnataka

ETV Bharat / state

ಭೋವಿಗಳಿಗೆ ಜೀವಾನಂಶ ಘೋಷಿಸಿ: ಸರ್ಕಾರಕ್ಕೆ ಸಿದ್ದರಾಮೇಶ್ವರ ಶ್ರೀ ಮನವಿ

ಲಾಕ್​ಡೌನ್​ನಿಂದಾಗಿ ಭೋವಿ ಸಮಾಜದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮಾಜದಲ್ಲಿನ ಬಡವರನ್ನು ಗುರುತಿಸಿ ಜೀವನಾಂಶ ನೀಡುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿಎಂಗೆ ಮನವಿ ಸಲ್ಲಿಸಿದ್ದಾರೆ.

By

Published : May 13, 2020, 6:29 PM IST

Siddarameshwara Swamiji appeals to CM
ಸಿಎಂಗೆ, ಸಿದ್ದರಾಮೇಶ್ವರ ಸ್ವಾಮೀಜಿ ಮನವಿ

ಬಾಗಲಕೋಟೆ: ಭೋವಿ ಸಮುದಾಯದ ಬಡವರಿಗೆ ಜೀವನಾಂಶ ಘೋಷಣೆ ಮಾಡುವಂತೆ ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿ, ಕೊರೊನಾ ಭೀತಿಯಿಂದ ದೇಶದಲ್ಲಿ ಲಾಕ್‍ಡೌನ್‍ ಘೋಷಣೆ ಮಾಡಿದ್ದರಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಸಮಸ್ಯೆಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೆಲವರಿಗೆ ಜೀವನಾಂಶ ಘೋಷಿಸಿದೆ. ಅಲೆಮಾರಿಗಳಾಗಿ ವಲಸೆ ಜೀವನ ನಡೆಸುತ್ತಿರುವ ಬಡ ಭೋವಿ ಜನಾಂಗದ ಕುಟುಂಬಗಳಿಗೂ ಜೀವನಾಂಶ ಮಂಜೂರು ಮಾಡಿ ಎಂದು ಮನವಿ ಸಲ್ಲಿಸಿದರು.

ರಸ್ತೆ ಕಾಮಗಾರಿ, ಕಾಫಿ ಎಸ್ಟೇಟ್, ಕೇಬಲ್, ಚೆಕ್ ಡ್ಯಾಂ ನಿರ್ಮಾಣ, ರೈಲ್ವೆ ಕಾಮಗಾರಿ, ಕೆರೆ ಕಟ್ಟೆ ದುರಸ್ತಿ ಸೇರಿ ಹತ್ತು - ಹಲವು ಕೆಲಸ ನಿರ್ವಹಿಸುವ ಸಮುದಾಯದ ಬಂಧುಗಳು ವರ್ಷದಲ್ಲಿ ಒಂದು ತಿಂಗಳು ಸಹ ಊರಲ್ಲಿ ಇರುವುದಿಲ್ಲ. ಸದಾ ಒಂದೆಡೆಯಿಂದ ಮತ್ತೊಂದೆಡೆ ವಲಸೆ ಹೋಗುತ್ತಾರೆ. ಇಂತಹವರು ಇದೀಗ ತೀವ್ರವಾಗಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಸ್ವಾಮೀಜಿ ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ಕಲ್ಲಿನ ಕೆಲಸ ಮಾಡುವ ಕಾರ್ಮಿಕರು, ವಿಗ್ರಹ ಕೆತ್ತುವ ಶಿಲ್ಪಿಗಳು, ಕ್ರಷರ್‌ನಲ್ಲಿ ಕೆಲಸ ಮಾಡುವವರು ತೊಂದರೆ ಅನುಭವಿಸುತ್ತಿದ್ದಾರೆ. ನೋಂದಣಿ ರಹಿತ ಹಾಗೂ ₹ 25 ಸಾವಿರಕ್ಕಿಂತ ಕಡಿಮೆ ತಲಾ ಆದಾಯ ಇರುವ ಕುಟುಂಬಗಳಿಗೆ ನೆರವು ನೀಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಭೋವಿ ಸಮುದಾಯದ ಬಡವರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ, ಕಂದಾಯ ಸಚಿವ ಆರ್‌.ಅಶೋಕ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details