ಬಾಗಲಕೋಟೆ: ತೈಲ ಬೆಲೆ ಏರಿಕೆ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆಯಲ್ಲಿ ತೈಲ ಬೆಲೆ ಏರಿಕೆಗೆ ಖಂಡನೆ: ಉಮಾಶ್ರೀ ನೇತೃತ್ವದಲ್ಲಿ ಪ್ರತಿಭಟನೆ - ಬಾಗಲಕೋಟೆ ಇತ್ತೀಚಿನ ಸುದ್ದಿ
ತೈಲ ಬೆಲೆ ಏರಿಕೆ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ರಬಕವಿ ಬನಹಟ್ಟಿ ಪಟ್ಟಣದಲ್ಲಿ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
![ಬಾಗಲಕೋಟೆಯಲ್ಲಿ ತೈಲ ಬೆಲೆ ಏರಿಕೆಗೆ ಖಂಡನೆ: ಉಮಾಶ್ರೀ ನೇತೃತ್ವದಲ್ಲಿ ಪ್ರತಿಭಟನೆ bagalakote](https://etvbharatimages.akamaized.net/etvbharat/prod-images/768-512-10558551-thumbnail-3x2-mng.jpg)
ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಸಂಚಾರ ಮಾಡಿ, ಬಸ್ ನಿಲ್ದಾಣದಿಂದ ಬನಹಟ್ಟಿಯ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಿಲಿಂಡರ್ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರ ಪರವಾಗಿ ಇಲ್ಲದೇ, ಶ್ರೀಮಂತ ಪರವಾಗಿದೆ. ತೈಲ ಬೆಲೆ ಏರಿಕೆಯಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಒಪ್ಪಿತ್ತಿನ ಊಟಕ್ಕೂ ಪರದಾಡುತ್ತಿರುವ ನೇಕಾರರು, ಮೊದಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಪಡುತ್ತಿದ್ದಾರೆ. ಇದೀಗ ತೈಲ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಸರ್ಕಾರದ ನೀತಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.