ಕರ್ನಾಟಕ

karnataka

By

Published : Jul 27, 2020, 9:17 PM IST

ETV Bharat / state

ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಶಾಸಕ ಚರಂತಿಮಠ: ಬಗೆಹರಿಯುವುದೇ ಮುಳುಗಡೆ ಸಂತ್ರಸ್ತರ ಬವಣೆ?

ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕ ಚರಂತಿಮಠ ಆಯ್ಕೆ ಅಗತ್ಯವಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಇವರಿಗೆ ಒಳ್ಳೆಯ ಸಂಬಂಧವಿದ್ದು ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಸಹಕಾರಿ ಆಗಲಿದೆ ಅನ್ನೋದು ಕೆಲವರ ಲೆಕ್ಕಾಚಾರ.

bagalokot
bagalokot

ಬಾಗಲಕೋಟೆ: ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಸರ್ಕಾರ ನೇಮಿಸಿದೆ. ಈ ಮೂಲಕ ಮುಳುಗಡೆ ನಗರ ಬಾಗಲಕೋಟೆಯ ಅಭಿವೃದ್ಧಿಗೆ ಆಶಾಭಾವನೆ ವ್ಯಕ್ತವಾಗಿದೆ.

ಪ್ರಾಧಿಕಾರದ ಅಧ್ಯಕ್ಷರಾದ ನಂತರ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ಬಂದಿದ್ದು, ಮುಳುಗಡೆ ಪ್ರದೇಶಗಳ ಜನರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ, ಯುನಿಟ್ ಎರಡು ಹಾಗೂ ಮೂರರಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯವನ್ನು ಶೀಘ್ರ ಮಾಡಬೇಕಾಗಿದೆ. ಶಾಸಕರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ಇದ್ದರೂ, ಬಹಿರಂಗವಾಗಿ ಅಸಮಾಧಾನ ಪ್ರದರ್ಶನ ಮಾಡುವ ಶಕ್ತಿ ಯಾರಿಗೂ ಇಲ್ಲ.

ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಂತರ ಶಾಸಕರು ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ. ಕಚೇರಿಯಲ್ಲಿ ಪ್ರತಿನಿತ್ಯ ನಡೆಯುವ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುವಂತೆ ಚಾಟಿ ಬೀಸಬೇಕಾಗಿದೆ. ಜೊತೆಗೆ ಏಜೆಂಟ್‌ರ ಹಾವಳಿ, ನಿವೇಶನಗಳ ಎನ್‌ಓಸಿ, ಹೆಸರು ಬದಲಾವಣೆ, ಸಂತ್ರಸ್ತರಿಗೆ ನಿವೇಶನ ಹಂಚಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಕಾಗದ ಪತ್ರ ತಯಾರಿಸಲು ಲಂಚ ಇಲ್ಲದೇ ಸರಳವಾಗಿ ಕೆಲಸ ಕಾರ್ಯ ಆಗುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಶಾಸಕರು ಗಮನಹರಿಸಬೇಕಿದೆ.

ಆಧುನಿಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಮಾಡುತ್ತಿರುವ ಯುನಿಟ್ 2ರ ಎಲ್ಲ ರಸ್ತೆಗಳು ಉತ್ತಮ ಗುಣಮಟ್ಟದ್ದಾಗಿವೆ. ಆದರೆ ನಿವೇಶನ ಇರುವ ಸಂತ್ರಸ್ತರಿಗೆ ಮನೆ ಕಟ್ಟುವುದಕ್ಕೆ ವಿದ್ಯುತ್ ಪೂರೈಕೆ, ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ಇದೆ. ಶಾಸಕರು ಈ ಬಗ್ಗೆಯೂ ಗಮನಹರಿಸಬೇಕಾಗಿದೆ.

ಆಲಮಟ್ಟಿ ಜಲಾಶಯದಲ್ಲಿ 524 ಮೀಟರ್ ನೀರು ಸಂಗ್ರಹವಾದ ಬಳಿಕ ಬಾಗಲಕೋಟೆಯ ಮತ್ತೆ ಕೆಲ ಪ್ರದೇಶಗಳು ಮುಳಗಡೆಯಾಗಲಿವೆ. ಈ ಸಂತ್ರಸ್ತರಿಗೆ ಯುನಿಟ್ 3ರಲ್ಲಿ ನಿವೇಶನ ಹಂಚಿಕೆ ಮಾಡುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಯುನಿಟ್ 3ರಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಸಂತ್ರಸ್ತರಿಗೆ ಪರಿಹಾರಧನ ನೀಡಿ, ನಿವೇಶನ ಹಂಚುವ ಕಾರ್ಯ ಮಾಡಬೇಕಾಗಿದೆ.

ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕ ಚರಂತಿಮಠ ಆಯ್ಕೆ ಅಗತ್ಯವಿತ್ತು. ಏಕೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಇವರಿಗೆ ಒಳ್ಳೆಯ ಸಂಬಂಧವಿದ್ದು ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಸಹಕಾರಿ ಆಗಲಿದೆ ಅನ್ನೋದು ಕೆಲವರ ಲೆಕ್ಕಾಚಾರ.

ABOUT THE AUTHOR

...view details