ಬಾಗಲಕೋಟೆ: ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಸರ್ಕಾರ ನೇಮಿಸಿದೆ. ಈ ಮೂಲಕ ಮುಳುಗಡೆ ನಗರ ಬಾಗಲಕೋಟೆಯ ಅಭಿವೃದ್ಧಿಗೆ ಆಶಾಭಾವನೆ ವ್ಯಕ್ತವಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾದ ನಂತರ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ಬಂದಿದ್ದು, ಮುಳುಗಡೆ ಪ್ರದೇಶಗಳ ಜನರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ, ಯುನಿಟ್ ಎರಡು ಹಾಗೂ ಮೂರರಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯವನ್ನು ಶೀಘ್ರ ಮಾಡಬೇಕಾಗಿದೆ. ಶಾಸಕರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ಇದ್ದರೂ, ಬಹಿರಂಗವಾಗಿ ಅಸಮಾಧಾನ ಪ್ರದರ್ಶನ ಮಾಡುವ ಶಕ್ತಿ ಯಾರಿಗೂ ಇಲ್ಲ.
ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಂತರ ಶಾಸಕರು ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ. ಕಚೇರಿಯಲ್ಲಿ ಪ್ರತಿನಿತ್ಯ ನಡೆಯುವ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುವಂತೆ ಚಾಟಿ ಬೀಸಬೇಕಾಗಿದೆ. ಜೊತೆಗೆ ಏಜೆಂಟ್ರ ಹಾವಳಿ, ನಿವೇಶನಗಳ ಎನ್ಓಸಿ, ಹೆಸರು ಬದಲಾವಣೆ, ಸಂತ್ರಸ್ತರಿಗೆ ನಿವೇಶನ ಹಂಚಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಕಾಗದ ಪತ್ರ ತಯಾರಿಸಲು ಲಂಚ ಇಲ್ಲದೇ ಸರಳವಾಗಿ ಕೆಲಸ ಕಾರ್ಯ ಆಗುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಶಾಸಕರು ಗಮನಹರಿಸಬೇಕಿದೆ.