ಬಾಗಲಕೋಟೆ:ಮಳೆ, ಬೆಳೆ ಬಗ್ಗೆ ಭವಿಷ್ಯ ವಾಣಿ ಹೇಳುವ ವಿಶೇಷ ಪದ್ಧತಿಯನ್ನು ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಣಿ, ಪುಷ್ಯ, ಪುನನರ್ವಸು ಹಾಗೂ ಹಿಂಗಾರು ಮಳೆಗಳಲ್ಲಿ ಸ್ವಾತಿ, ಚಿತ್ತಿ ಮಳೆಗಳು ಅತಿ ಹೆಚ್ಚು ಸುರಿಯಲಿವೆ ಎಂಬುದು ಮುರನಾಳ ಮಳೆರಾಜೇಂದ್ರ ಮಠದ ವಾಣಿಯಾಗಿದೆ.
ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಡುಬಿನ ಕಾಳಗ (ಮಳೆ, ಬೆಳೆ ಸೂಚನೆ) ದಲ್ಲಿ ಸೂಚನೆ ದೊರೆತಿದೆ. ಪ್ರತಿವರ್ಷದಂತೆ ಮುರನಾಳ ಮಳೆರಾಜೇಂದ್ರ ಮಠದ ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗ(ಮಳೆ, ಬೆಳೆ ಸೂಚನೆ)ಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಕುತೂಹಲದಿಂದ ಕಾಯ್ದು ನಿಂತಿದ್ದರು. ಮಳೆ - ಬೆಳೆ ಕುರಿತಂತೆ ಮಠದ ವಾಣಿ ಕೇಳಿದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳನ್ನು ತಮ್ಮ ತಮ್ಮಲ್ಲಿಯೇ ಲೆಕ್ಕಹಾಕಿದರು.
ಈ ವರ್ಷದ ಮುಂಗಾರಿನಲ್ಲಿ ರೋಹಣಿ, ಪುಷ್ಯ ಪುನರ್ವಸು, ಆರಿದ್ರಾ, ಮೃಗಶಿರಾ ಮಳೆ ಉತ್ತಮ, ಹಿಂಗಾರಿನಲ್ಲಿ ಸ್ವಾತಿ,ಚಿತ್ತಿ, ಹುಬ್ಬಿ ಉತ್ತರಿ ಉತ್ತಮ, ಉತ್ತಮ ಮಳೆಗಳು ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆಯಿತು ಎಂದು ಮಠಾಧೀಶರಾದ ಶ್ರೀಜಗನ್ನಾಥ ಮಹಾಸ್ವಾಮಿ ನೆರೆದ ಭಕ್ತಾಧಿಗಳಿಗೆ ತಿಳಿಸಿದರು.
ಕಡುಬಿನ ಕಾಳಗದ ವೈಶಿಷ್ಟ್ಯ: ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು. ಗಂಗೆಯ ಪೂಜೆಗಾಗಿ ನಿರ್ಮಿಸಿರಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಯಲ್ಲಿ ಮಳೆರಾಜೇಂದ್ರಸ್ವಾಮಿ ಜಲಾಭಿಷೇಕ ಮಾಡಿ ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆ ತುಂಬುತ್ತಾರೆ.