ಕರ್ನಾಟಕ

karnataka

ETV Bharat / state

ಕಸದಿಂದ ರಸ : ಮಕ್ಕಳ ಅನುಪಯುಕ್ತ ಆಟಿಕೆಗಳಿಂದ ಅರಳಿದ ಗಣಪ

ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳು ಮಕ್ಕಳ ಅನುಪಯುಕ್ತ ಆಟಿಕೆಗಳಿಂದ ಗಣೇಶನ ಕಲಾಕೃತಿಯನ್ನು ಮಾಡಿ ವಿಶಿಷ್ಟವಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.

By ETV Bharat Karnataka Team

Published : Sep 20, 2023, 9:07 PM IST

Etv ganapati-made-up-with-childrens-useless-toys-in-bagalkote
ಕಸದಿಂದ ರಸ : ಮಕ್ಕಳ ಅನುಪಯುಕ್ತ ಆಟಿಕೆಗಳಿಂದ ಅರಳಿದ ಗಣಪ

ಕಸದಿಂದ ರಸ : ಮಕ್ಕಳ ಅನುಪಯುಕ್ತ ಆಟಿಕೆಗಳಿಂದ ಅರಳಿದ ಗಣಪ

ಬಾಗಲಕೋಟೆ: ರಾಜ್ಯದ ವಿವಿಧೆಡೆ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಜಿಲ್ಲೆಯಲ್ಲೂ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಬಾಗಲಕೋಟೆಯ ಇಲಕಲ್​ ಪಟ್ಟಣದ ವಿಜಯ ಮಹಾಂತ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಅನುಪಯುಕ್ತ ವಸ್ತುಗಳಿಂದ ನಿರ್ಮಿಸಿದ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು.

ವಿದ್ಯಾಲಯದ ಸಂಸ್ಥಾಪಕರಾದ ಡಾ.ಬಸವರಾಜ ಗವಿಮಠ‌ ಅವರ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ಇಲ್ಲಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ಬಾರಿಯೂ ಒಂದಲ್ಲ ಒಂದು ವಿಭಿನ್ನ ರೀತಿಯ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಕುತೂಹಲ ಉಂಟು ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಈ ಬಾರಿ ಮಕ್ಕಳ ಹಳೆಯ ಆಟಿಕೆಗಳಿಂದ ಗಣೇಶನ ಕಲಾಕೃತಿಯನ್ನು ತಯಾರಿಸಿ ಹಬ್ಬವನ್ನು ಆಚರಿಸಿದ್ದಾರೆ. ಇದಕ್ಕೂ ಮುನ್ನ, ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಅನುಪಯುಕ್ತ ಆಟಿಕೆಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಈ ವಸ್ತುಗಳಿಂದ ಗಣಪತಿಯನ್ನು ಮಾಡಿದ್ದಾರೆ. ಈ ಗಣಪತಿ ಬಳಿಯೇ ಪುಟ್ಟದಾಗಿ ಇನ್ನೊಂದು ಗಣಪತಿಯನ್ನು ಸ್ಥಾಪಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರಾಚಾರ್ಯ ಡಾ. ಬಸವರಾಜ ಗವಿಮಠ ಮಾತನಾಡಿ, ಕಳೆದ 30 ವರ್ಷಗಳಿಂದ ನಿರುಪಯುಕ್ತ ವಸ್ತುಗಳಿಂದ ಗಣೇಶನನ್ನು ಮಾಡುತ್ತಾ ಬಂದಿದ್ದೇವೆ. ಜನರಲ್ಲಿ ಸಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡುತ್ತಿದ್ದೇವೆ. ಮಕ್ಕಳ ನಿರುಪಯುಕ್ತ ಆಟಿಕೆ ವಸ್ತುಗಳಿಂದ ಒಂದು ಸುಂದರ ಕಲಾಕೃತಿಯನ್ನು ಮಾಡಲಾಗಿದೆ. ಸಾವಿರಾರು ಆಟಿಕೆಗಳನ್ನು ಈ ಕಲಾಕೃತಿಗೆ ಬಳಸಲಾಗಿದೆ. ಈ ಆಟಿಕೆಗಳನ್ನು ಗಣೇಶ ಆಕೃತಿ ಬರುವಂತೆ ಅಂಟಿಸಲಾಗಿದೆ. ಹಲವು ಮಂದಿ ಇದನ್ನು ವೀಕ್ಷಿಸಲು ಆಗಮಿಸಿದ್ದಾರೆ. ಪ್ರತಿ ವರ್ಷವೂ ವಿಶಿಷ್ಟ ಗಣಪತಿಯನ್ನು ಮಾಡುತ್ತಾ ಬಂದಿರುವುದು ಈ ಶಾಲೆಯ ವಿಶೇಷತೆ ಎಂದು ಹೇಳಿದರು.

ಈ ವಿಶೇಷ ಗಣಪತಿಯನ್ನು ನೋಡಲು ವಿವಿಧೆಡೆಯಿಂದ ಜನರು ಆಗಮಿಸುತ್ತಾರೆ. ಅಲ್ಲದೆ ವಿಶಿಷ್ಟ ಗಣಪತಿ ಜನರ ಗಮನ ಸೆಳೆಯುತ್ತಿದೆ. ಈ ಹಿಂದೆ ಪೈಪ್​, ಸಿರಂಜ್, ಕಾಗದ, ಸ್ಟ್ರಾ, ತಂಪು ಪಾನೀಯ ಬಾಟಲ್​ಗಳಿಂದ ಗಣೇಶ ಮೂರ್ತಿ ನಿರ್ಮಾಣ ಮಾಡಿ ಹಬ್ಬವನ್ನು ಆಚರಿಸಿದ್ದರು. ಇಲಕಲ್ ಪಟ್ಟಣದ ಜೋಶಿ ಗಲ್ಲಿಯಲ್ಲಿರುವ ವಿಜಯ ಮಹಾಂತ ಚಿತ್ರಕಲಾ ಮಹಾವಿದ್ಯಾಲಯವು ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ.

ಇದನ್ನೂ ಓದಿ :ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ ನಿರ್ಮಾಣ; ತಂದೆಯ ನೆರವಿಗೆ ವಿದೇಶದಿಂದ ಬರುವ ಮಕ್ಕಳು

ABOUT THE AUTHOR

...view details