ಬಾಗಲಕೋಟೆ: ಕೋವಿಡ್-19ನಿಂದ ಜನರು ಭಯಭೀತರಾಗಿದ್ದು, ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ರೈತರಿಗೂ ಅನುಕೂಲ ಆಗಬೇಕು. ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿದವರಿಗೂ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಆರ್.ಬಿ.ತಿಮ್ಮಾಪೂರ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡಿ ಜನಸಾಮಾನ್ಯರಿಗೆ ವಿತರಣೆ ಮಾಡುತ್ತಿದ್ದಾರೆ.
ಮುಧೋಳ ಮತಕ್ಷೇತ್ರದ ವಿವಿಧ ರೈತರಿಂದ ಖರೀದಿ ಮಾಡಿ, ತರಕಾರಿ ಸಿಗದೆ ನಗರದಲ್ಲಿ ಅಲೆದಾಡುವ ಜನತೆಗೆ ವಿತರಣೆ ಮಾಡಿದರು. ಕಳೆದ ತಿಂಗಳ 22ರಿಂದ ದೇಶವೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆ ಸಾರ್ವಜನಿಕರು ಹೊರಗೆ ಬರದೆ ಮನೆಯಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ. ಮತ್ತೆ ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಆರೋಗ್ಯ ದೃಷ್ಟಿಯಿಂದ ಲಾಕ್ಡೌನ್ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಒಳ್ಳೆಯದು ಎಂದು ತಿಮ್ಮಾಪೂರ ಹೇಳಿದರು.