ಬಾಗಲಕೋಟೆ: ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲ, ಶಾಲೆಯ ವಾತಾವರಣ ಸೇರಿದಂತೆ ಇಡೀ ಸಮಾಜವನ್ನೇ ಬದಲಾವಣೆ ಮಾಡಬಹುದು. ಇದಕ್ಕೆ ಸಾಕ್ಷಿ ಜಮಖಂಡಿ ತಾಲೂಕಿನ ಲಿಂಗನೂರ ಎಲ್.ಟಿ ಸರ್ಕಾರಿ ಶಾಲೆಯ ಶಿಕ್ಷಕರು.
ಶಾಲೆಗಳ ಆವರಣದಲ್ಲಿ ಹಲವು ಬಗೆಯ ಗಿಡಮರಗಳು ಹಾಗೂ ಕೈತೋಟ ಬೆಳೆಸುವುದನ್ನು ನೋಡಿದ್ದೇವೆ. ಆದರೆ, ಎಲ್.ಟಿ.ಶಾಲೆಯ ಎಸ್.ಎಸ್.ಹಲಗಲಿ ಎಂಬ ಶಿಕ್ಷಕ ತಮ್ಮ ಶಾಲೆಯಲ್ಲಿ ಬಾಳೆ ಹಣ್ಣುಗಳನ್ನು ಬೆಳೆದು ಮಕ್ಕಳಿಗೆ ಪ್ರತಿದಿನ ಒಂದು ಬಾಳೆ ಹಣ್ಣಿನಂತೆ ವಿತರಿಸುತ್ತಿದ್ದಾರೆ. ಈ ಮೂಲಕ ಕನ್ನಡ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಲಿಂಗನೂರು ಸರ್ಕಾರಿ ಶಾಲೆಯಲ್ಲಿನ ವಿನೂತನ ಕಾರ್ಯದ ಬಗ್ಗೆ ಶಿಕ್ಷಕರ ಮಾತು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಾ ಸರ್ಕಾರಿ ಶಾಲಾಭಿವೃದ್ದಿಗೆ ಇವರು ಶ್ರಮಿಸುತ್ತಿದ್ದಾರೆ. 1 ರಿಂದ 5ನೇ ತರಗತಿವರೆಗೆ ಸುಮಾರು 110 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 3 ಮಂದಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಆನ್ಲೈನ್ ಪಾಠದ ಜೊತೆಗೆ ಬಿಡುವಿನ ವೇಳೆಯಲ್ಲಿ ಪರಿಸರಪೂರಕ ಚಟುವಟಿಕೆಗಳನ್ನೂ ಮಾಡುತ್ತಿದ್ದಾರೆ. ಸ್ವಲ್ಪ ಜಾಗದಲ್ಲಿಯೇ ಬಹುಬಗೆಯ ತರಕಾರಿ, ಹಣ್ಣು, ಸೊಪ್ಪು ಬೆಳೆಯುತ್ತಿದ್ದು ಸುಂದರ ಕೈತೋಟ ನಿರ್ಮಾಣವಾಗಿದೆ.
ಶಾಲಾಬಿಡುವಿನ ವೇಳೆಯಲ್ಲಿ ಸಾಕಷ್ಟು ಜಾನುವಾರುಗಳು ಇಲ್ಲಿಗೆ ಮೇಯಲು ಬರುತ್ತವೆ. ಇದನ್ನು ತಡೆಯುವ ಸಲುವಾಗಿ ಮಕ್ಕಳು ಸರತಿಯಂತೆ ರಕ್ಷಣೆಗಾಗಿ ನಿಲ್ಲುತ್ತಾರೆ. ಶಿಕ್ಷಕರೇ ಬಾಳೆ ಗಿಡ ಹಾಗೂ ಇತರ ಸಸ್ಯಗಳಿಗೆ ಸಾವಯವ ಗೊಬ್ಬರ ತಯಾರು ಮಾಡಿ ಹಾಕುತ್ತಾರೆ.
ಶಾಲೆಯ ಮಕ್ಕಳು ಪರಿಸರ ಕಾಳಜಿ ಜೊತೆಗೆ ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದ್ದಾರೆ. ಒಂದನೇ ತರಗತಿಯ ಮಕ್ಕಳು ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಜ್ಞಾನ ಹೊಂದಿದ್ದಾರೆ. ಗಣಿತ ವಿಷಯದಲ್ಲಿ ಮಗ್ಗಿ, ಮೂಲ ಕ್ರಿಯೆಗಳು, ಹಾಡು, ಭಾಷಣ ಸೇರಿದಂತೆ ಹಲವಾರು ವಿಷಯಗಳಲ್ಲಿ ಜ್ಞಾನ ಹೊಂದಿದ್ದಾರೆ.
5 ನೇ ತರಗತಿಯ ಸಾಕಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದು, ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ನೀಡಿದ್ದಾರೆ. ಇದರ ಜೊತೆಗೆ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಗಣ್ಯರಿಂದ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡುವ ಕಾರ್ಯಕ್ರಮವೂ ಜರುಗುತ್ತದೆ.
ಶಾಲಾ ವಿದ್ಯಾರ್ಥಿಗಳ ಕಲಿಕೆಯು ನಿರಂತರವಾಗಿರಲು ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಶಿಕ್ಷಣ ನೀಡಿದ್ದಾರೆ. ರಜಾ-ಮಜಾ ಎಂಬ ಕೈಪಿಡಿಯನ್ನು ಶಿಕ್ಷಕರೇ ತಯಾರಿಸಿದ್ದು ಮಕ್ಕಳ ಮನೆಗಳಿಗೆ ತೆರಳಿ ವಿವರಿಸಿದ್ದಾರೆ. ಈ ಮುಖೇನ ಶಿಕ್ಷಣದ ಜೊತೆಗೆ ಮಕ್ಕಳಿಗೆ ಪರಿಸರ ಕಾಳಜಿ ಕುರಿತು ಶಿಕ್ಷಣ ನೀಡಲಾಗುತ್ತಿದೆ.
ಈ ಶಾಲೆಯಲ್ಲಿ ಪೈಪ್ ಕಾಂಪೋಸ್ಟ್ ಮೂಲಕ ಹಸಿ ತ್ಯಾಜ್ಯ ವಸ್ತುಗಳಿಂದ ಗೊಬ್ಬರ ತಯಾರಿಸಿ ಶಾಲೆಯ ಕೈ ತೋಟದ ಎಲ್ಲಾ ಗಿಡಗಳಿಗೂ ಸಾವಯವ ಗೊಬ್ಬರ ಉಪಯೋಗಿಸಿ ಹಣ್ಣು ಹಾಗೂ ತರಕಾರಿಗಳನ್ನು ಬೆಳೆಸುವುದು ವಿಶೇಷ. ಈ ಕಾರ್ಯಕ್ಕೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪಾಲಕರು ಮತ್ತು ಗ್ರಾಮ ಪಂಚಾಯತಿಯಿಂದ ಸಹಾಯ ಪಡೆದುಕೊಂಡಿದ್ದಾರೆ. ಶಾಲೆಯಲ್ಲಿ ಸಾವಯವ ಗೊಬ್ಬರ ತಯಾರಿ ಮಾಡಿಕೊಂಡು ಬೆಳೆಸಿದ ಹಣ್ಣುಗಳನ್ನು ಪಾಲಕರ ಮೂಲಕ ಮಕ್ಕಳಿಗೆ ನೀಡಲಾಗುತ್ತದೆ.
ಬಾಳೆ, ಪಪ್ಪಾಯಿ, ನುಗ್ಗೆಕಾಯಿ, ಸೇರಿದಂತೆ ಇತರ ಹಣ್ಣುಗಳನ್ನು ಅಕ್ಷರ ದಾಸೋಹದ ಅಡಿಯಲ್ಲಿ ಬಳಸಿಕೊಂಡು ಮಕ್ಕಳಿಗೆ ಒದಗಿಸಲಾಗುತ್ತಿದೆ. ಇದರಿಂದ ಗುಣಮಟ್ಟ ಶಿಕ್ಷಣ, ಒಳ್ಳೆಯ ಆಹಾರ ಸೇವನೆ ಮಾಡುವ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲೆಯು ಸೌಲಭ್ಯದ ವಿಚಾರದಲ್ಲಿ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ. ಹೀಗಾಗಿ, ಖಾಸಗಿ ಶಾಲೆಯ ಮಕ್ಕಳೂ ಇಲ್ಲಿಗೆ ಬರುವಂತಾಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕಿ ಶ್ರೀದೇವಿ ಮುಗಳಿ.
ಇದನ್ನೂ ಓದಿ:ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ಶಂಕು ಸ್ಥಾಪನೆ ನೆರವೇರಿಸಿದ ಬಿಎಸ್ವೈ