ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಹಿರೆಮಾಗಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಊರಿಗೆ ನುಗ್ಗಿದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು - ಬಾಗಲಕೋಟೆ ಜಿಲ್ಲೆಯಲ್ಲಿ ಮೊಸಳೆ ಕಾಟ
ಬಾಗಲಕೋಟೆ ಜಿಲ್ಲೆಯ ಕೃಷ್ಣಾ,ಮಲಪ್ರಭಾ, ಘಟಪ್ರಭಾ ನದಿ ತೀರದ ಹಲವಾರು ಗ್ರಾಮಗಳಿಗೆ ಮೊಸಳೆ ಕಾಟ ಶುರುವಾಗಿದೆ. ಪ್ರವಾಹದ ನೀರು ಕಡಿಮೆಯಾಗುತ್ತಿದಂತೆ ಹಿನ್ನೀರಲ್ಲಿ ಮೊಸಳೆಗಳ ಕಾಟ ಹೆಚ್ಚಾಗುತ್ತಿದೆ.

ಈ ಗ್ರಾಮ ಮಲಪ್ರಭಾ ನದಿ ದಂಡೆಯಲ್ಲಿ ಇರುವುದರಿಂದ ಕಳೆದ 3 ತಿಂಗಳಿಂದ ಪ್ರವಾಹಕ್ಕೆ ಸಿಕ್ಕು ಇಲ್ಲಿಯ ಮಂದಿ ನಲುಗಿದ್ದರು. ಈಗ ಬೃಹದಾಕಾರದ ಮೊಸಳೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ 8 ಅಡಿ ಉದ್ದ ಹಾಗೂ ಒಂದು ಕ್ವಿಂಟಲ್ಗೂ ಹೆಚ್ಚು ತೂಕದ ಮೊಸಳೆ ಕಾಣಿಸಿಕೊಂಡಿದೆ.ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಮುಂದಾಗುವ ಅನಾಹುತವನ್ನು ಗ್ರಾಮಸ್ಥರೇ ತಪ್ಪಿಸಿದ್ದಾರೆ.
ಇನ್ನೂ ಎರಡು ಮೊಸಳೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಅವುಗಳು ಯಾವಾಗ ಗ್ರಾಮಕ್ಕೆ ಬರುತ್ತವೋ ಎಂಬ ಭಯದಲ್ಲಿ ಜನರು ಜೀವನ ಸಾಗಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಪ್ರವಾಹಪೀಡಿತ ನದಿತೀರದ ಗ್ರಾಮಸ್ಥರಿಗೆ ಈಗಾಗಲೇ ಮೊಸಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಕೆಲವೆಡೆ ನಾಮಫಲಕಗಳನ್ನು ಅಳವಡಿಸಲಾಗಿದೆ. ನದಿತೀದಲ್ಲಿ ಒಬ್ಬರೆ ಓಡಾಡದಂತೆ ಸೂಚನೆ ನೀಡಲಾಗಿದೆ ಎಂದರು.