ಬಾಗಲಕೋಟೆ:ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.
ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಚಾಲುಕ್ಯ ಅರಸರ ಸಮಾಧಿಗಳು ಪತ್ತೆ!
ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಖ್ಯಾತ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಮುಂಬರುವ ಅಂತಾರಾಷ್ಟ್ರೀಯಮಟ್ಟದ “ಎಕ್ಸಪ್ಲೋರಿಂಗ್ ದಿ ಚಾಲುಕ್ಯನ್ ಲ್ಯಾಂಡ್, ಎ ಲಾರ್ಜೆಸ್ಟ್ ಟೆಂಪಲ್ ಮೂಮೆಂಟ್ ಆಫ್ ಇಂಡಿಯಾ” ಎಂಬ 2ನೇ ಪುಸ್ತಕದಲ್ಲಿ ದಾಖಲಿಸಲಿದ್ದು, ಬರುವ ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಅಥವಾ ಹಿಂದೂ ವಾಸ್ತುಶಿಲ್ಪದ ತೊಟ್ಟಿಲು” ಎಂದೇ ಪ್ರಸಿದ್ಧಿಯಾಗಿರುವ ಚಾಲುಕ್ಯರ ಆಡಳಿತದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವಾಸ್ತುಶಿಲ್ಪದ ಪರಂಪರೆಯನ್ನು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ದಕ್ಷಿಣ ಭಾರತದ ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಎಂದು ಪರಿಗಣಿಸಿದ್ದರು.
ಕೇವಲ 20 ಕಿ.ಮೀ. ಅಂತರಗಳಲ್ಲಿ ಇಷ್ಟೊಂದು ಪ್ರಮಾಣದ ವಿವಿಧ ಪದ್ಧತಿಯ ದೇವಾಲಯಗಳು ಇಡೀ ದೇಶದಲ್ಲಿ ಕಂಡು ಬರುವುದು ಈ ಚಾಲುಕ್ಯರ ನಾಡಿನಲ್ಲಿ ಮಾತ್ರ. ಹೀಗಾಗಿ ಇಡೀ ಭಾರತದಲ್ಲಿಯೇ ಇದೊಂದು ಅತಿ ದೊಡ್ಡ ದೇವಾಲಯ ನಿರ್ಮಾಣಗಳ ಆಂದೋಲನವಾಗಿ ರೂಪಗೊಂಡಿತು. ವಿಶ್ವಮಟ್ಟದಲ್ಲಿಯೇ ಹಿಂದೂ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪ ಎರಡರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ, 6ನೇ ಶತಮಾನದಿಂದ 8ನೇ ಶತಮಾನದವರೆಗೆ ನಡೆದ ಈ ದೇವಾಲಯಗಳ ನಿರ್ಮಾಣದ ಆಂದೋಲನ ಹೊಸ ಶಿಲ್ಪಕಲಾ ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು ಚಾಲುಕ್ಯರ ಶಿಲ್ಪಕಲೆ ಪರಂಪರೆಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತವೆ.