ಬಾಗಲಕೋಟೆ: ಬನಹಟ್ಟಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಬಸ್ ತಂಗುದಾಣ ಆವರಣದಲ್ಲಿ ಕಾಂಕ್ರಿಟ್ ಕಾಮಗಾರಿ ವಿಳಂಬ: ಪ್ರಯಾಣಿಕರು ಸುಸ್ತು
ಬಾಗಲಕೋಟೆಯ ಬನಹಟ್ಟಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ಕಾಮಗಾರಿ ವಿಳಂಬವಾಗುತ್ತಿದ್ದು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಕಾಮಗಾರಿಯ ವಿನಾಕಾರಣ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ದಿನಂಪ್ರತಿ ಸಂಚರಿಸುವ ನೂರಾರು ಸಾರಿಗೆ ಬಸ್ಗಳು ಹಾಗು ಸಾವಿರಾರು ಪ್ರಯಾಣಿಕರು ಹರಸಾಹಸ ಪಡುವಂತಾಗಿದೆ. ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ರಸ್ತೆಯ ಎರಡೂ ದಿಕ್ಕುಗಳಲ್ಲಿ ಸಂಚರಿಸುವ ಬಸ್ಸುಗಳೂ ಸೇರಿದಂತೆ ಇತರೆ ವಾಹನಗಳು ನಿಲುಗಡೆಯಾಗ್ತಿರೋದ್ರಿಂದ ಭಾರಿ ಟ್ರಾಫಿಕ್ ಉಂಟಾಗುತ್ತಿದೆ. ಹೀಗಾಗಿ ಇಡೀ ದಿನ ಜನರು ಸಂಚಾರಕ್ಕಾಗಿ ಪರದಾಡುವ ಪರಿಸ್ಥಿತಿ ಇಲ್ಲಿ ಸಾಮಾನ್ಯವಾಗಿದೆ.
ಈ ಬಗ್ಗೆ ಕೂಡಲೇ ಮೇಲಾಧಿಕಾರಿಗಳು ಗುತ್ತಿಗೆದಾರರಿಗೆ ಖಡಕ್ ತಾಕೀತು ಮಾಡುವ ಮೂಲಕ ತಕ್ಷಣವೇ ಕಾಮಗಾರಿ ಚುರುಕುಗೊಳಿಸಿ ಜನತೆಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಗುತ್ತಿಗೆದಾರ ಹಾಗು ಸಾರಿಗೆ ಸಂಸ್ಥೆ ವಿರುದ್ಧ ಪ್ರತಿಭಟನೆ ಮಾಡಲಾಗುವುದೆಂದು ಸ್ಥಳೀಯರು ಎಚ್ಚರಿಸಿದ್ದಾರೆ.