ಬಾಗಲಕೋಟೆ: ನಗರದ ವಾರ್ಡ ನಂ.7 ಹಾಗೂ 14ರಲ್ಲಿ ಏಳು ಕೋವಿಡ್ ಸೋಂಕು ಪ್ರಕರಣಗಳು ಕಂಡು ಬಂದ ಹಿನ್ನೆಲೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅಗತ್ಯ ವಸ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್, ನಗರಸಭೆ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಸವೇಶ್ವರ ವೃತ್ತದಲ್ಲಿಂದು ತೀವ್ರ ತಪಾಸಣೆ ನಡೆಸಿದರು. ಸಾರ್ವಜನಿಕರು ಮನೆ ಬಿಟ್ಟು ಹೊರ ಬರದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪರಿಶೀಲಿಸಲಾಯಿತು.
ಅಗತ್ಯ ಪಡಿತರ ಆಹಾರ ಧಾನ್ಯಗಳ ಕಿಟ್, ಸಿಲಿಂಡರ್, ಔಷಧಿ ಹಾಗೂ ದಿನಸಿ ಸರಬರಾಜು ಮಾಡುವ ಪ್ರಕ್ರಿಯೆ ಮೇಲೆ ನಿಗಾ ವಹಿಸಲಾಯಿತು. 200 ರೂ. ಹಾಗೂ 100 ರೂ.ಗಳ ಕಾಯಿಪಲ್ಲೆ ಕಿಟ್ ಹೊತ್ತ ಎಪಿಎಂಸಿ ವಾಹನದ ಮೂಲಕ ಮನೆ ಮನೆಗೆ ಕಾಯಿಪಲ್ಲೆಗಳನ್ನು ಮಾರಾಟ ಮಾಡಲಾಯಿತು. 200 ರೂ.ಗಳ ಕಿಟ್ನಲ್ಲಿ 2 ಕೆಜಿ ಈರುಳ್ಳಿ, 1 ಕೆಜಿ ಟೊಮ್ಯಾಟೋ, 1 ಕೆಜಿ ಬಟಾಟೆ, 1ಕೆಜಿ ಬದನೆ, ಮೆಣಸಿನಕಾಯಿ ಹಾಗೂ 2 ಕಟ್ಟು ಕೊತ್ತಂಬರಿ, ಕರಿಬೇವು ಒಳಗೊಂಡಿದೆ.
ಅಲ್ಲದೇ ಸಿಲಿಂಡರ್ಗಳನ್ನು ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರು ಒಯ್ಯುತ್ತಿರುವುದನ್ನು ಕಂಡ ತಕ್ಷಣವೇ ಸಿಲಿಂಡರ್ ಸರಬರಾಜು ಮಾಡುವವರ ಬಳಿ ಮಾತನಾಡಿ ಕಡ್ಡಾಯವಾಗಿ ವಾಹನಗಳಲ್ಲೇ ಎಚ್ಚರಿಕೆಯಿಂದ ವಿತರಿಸುವಂತೆ ಸೂಚಿಸಲಾಯಿತು. ಮೆಡಿಸಿನ್ ವಿತರಣೆಗೆ ಆರೋಗ್ಯ ಸಿಬ್ಬಂದಿ ಬಸವೇಶ್ವರ ವೃತ್ತದಲ್ಲಿ ಉಪಸ್ಥಿತರಿದ್ದು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಬಿ.ಜಿ.ಹುಬ್ಬಳ್ಳಿ (9449843186, 6361367737) ತಿಳಿಸಿದಲ್ಲಿ ಆರೋಗ್ಯ ಸಿಬ್ಬಂದಿ ಮೆಡಿಸಿನ್ ತಂದು ಕೊಡಲಿದ್ದಾರೆ ಎಂದು ತಿಳಿಸಲಾಗಿದೆ.