ಕರ್ನಾಟಕ

karnataka

ETV Bharat / state

ಕೇಂದ್ರ ಪುರಸ್ಕೃತ ಯೋಜನೆಗಳು ಸದುಪಯೋಗವಾಗಲಿ: ಸಂಸದ ಗದ್ದಿಗೌಡರ ಸೂಚನೆ - ಬಾಗಲಕೋಟೆ ಪ್ರಸಕ್ತ ಸಾಲಿನ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆ ಸುದ್ದಿ

ಪ್ರಸಕ್ತ ಸಾಲಿನ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದ ಸಂಸದ ಪಿ. ಸಿ. ಗದ್ದಿಗೌಡರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳು ಫಲಾನುಭವಿಗಳಿಗೆ ಸದುಪಯೋಗವಾಗುವಂತೆ ಮಾಡಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸಕ್ತ ಸಾಲಿನ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆ

By

Published : Nov 17, 2019, 9:41 AM IST

ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಪ್ರಸಕ್ತ ಸಾಲಿನ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರದೇ ಇದ್ದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಯೋಜನೆಗಳ ಲಾಭ ಫಲಾನುಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಲು ತಿಳಿಸಿದರು.

ಸ್ವಚ್ಛ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 10764 ಗುರಿ ಇದ್ದು, ಈ ಪೈಕಿ 3631 ನಿರ್ಮಿಸಲಾಗಿದೆ. 7133 ಬಾಕಿ ಉಳಿದಿದೆ. 689.78 ಲಕ್ಷ ಅನುದಾನ ಪೈಕಿ 466.85 ಲಕ್ಷ ಖರ್ಚು ಮಾಡಲಾಗಿದೆ ಎಂದು ಜಿ.ಪಂ ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು. ನಿರ್ಮಿತವಾದ ಶೌಚಾಲಯ ಬಳಕೆಯಾಗಬೇಕು, ಸಮುದಾಯ ಶೌಚಾಲಯಗಳ ನಿರ್ವಹಣೆಯಾಗಬೇಕು ಹಾಗೂ ಶೌಚಾಲಯ ಬಳಕೆ ಮತ್ತು ಅದರ ಉಪಯೋಗದ ಕುರಿತು ಜಾಗೃತಿ ಮೂಡಿಸಬೇಕು ಎಂದು ಗದ್ದಿಗೌಡರ ತಿಳಿಸಿದರು.

ತಾ.ಪಂ. ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ಸಮುದಾಯ ಶೌಚಾಲಯದಲ್ಲಿ ಸರಿಯಾದ ನೀರು ವಿದ್ಯತ್ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಎಂದರು. ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸುವುದು, ಪ್ರತಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದು, ಗುಂಪು ಶೌಚಾಲಯ ಬಳಕೆಯಾಗುವಂತೆ ಮಾಡುವ ಸದಸ್ಯರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಘನ ತ್ಯಾಜ್ಯ ಸಂಗ್ರಹಕ್ಕೆ ಪ್ರತಿ ಗ್ರಾಮಕ್ಕೆ ತಲಾ 20 ಲಕ್ಷ ಅನುದಾನವಿದ್ದು, ಸೂಕ್ತ ಸ್ಥಳ ಗುರುತಿಸಿ ತ್ಯಾಜ್ಯ ಸಂಗ್ರಹಣೆ ಕ್ರಮಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಜನರಿಗೆ ಉದ್ಯೋಗ ಕಲ್ಪಿಸಬೇಕು. ಸ್ವಯಂ ಸೇವಾ ಸಂಸ್ಥೆಗಳಿಗೆ ಸುತ್ತು ನಿಧಿ ಹಾಗೂ ತರಬೇತಿ ನೀಡಿ, ಉದ್ಯೋಗ ಸಿಗುವಂತೆ ಮಾಡಬೇಕು. ವಿವಿಧ ಇಲಾಖೆಗಳ ಯೋಜನೆಗಳ ಮೂಲಕ ಸ್ವ-ಸಹಾಯ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಲು ಸೂಚಿಸಿದರು.

ಜನರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಪಡೆಯುವಂತಾಗಬೇಕು. ವಸತಿ ಸೌಲಭ್ಯವಿರದ ಕುಟುಂಬಗಳಿಗೆ ನೆರವಾಗಬೇಕು. 2016-17 ರಿಂದ 2019-20 ವರೆಗೆ 3958 ಗುರಿ ಪೈಕಿ 2441 ಆಯ್ಕೆ ಮಾಡಲಾಗಿದೆ. ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೌಸಿಂಗ್ ಸ್ಕಿಮ್‍ನಲ್ಲಿ 9226 ಮನೆಗಳ ಪೈಕಿ 3797 ಪೂರ್ಣಗೊಂಡಿದ್ದು, 2676 ಮನೆಗಳು ಇನ್ನು ಪ್ರಾರಂಭವೇ ಮಾಡದಿರುವದನ್ನು ತಿಳಿದು 2015 ರಿಂದ ಪ್ರಾರಂಭವಾಗಿದ್ದು ಶೀಘ್ರವೇ ಪೂರ್ಣಗೊಳಿಸಲು ಸಂಸದರು ತಾಕೀತು ಮಾಡಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿಗೆ 3097 ಹೆಕ್ಟೇರ್ ಪ್ರದೇಶಕ್ಕೆ ಅಳವಡಿಸಲಾಗಿ ಶೇ.41 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ ಯೋಜನೆಯಡಿ ಈಗಾಗಲೇ ಸಹಾಯಧನ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ವಿವಿಧ ಬೆಳೆಗಳಿಗೆ ವಿಮೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 28437 ರೈತರು ವಿಮೆಗೆ ನೊಂದಣಿ ಮಾಡಿಸಿದ್ದಾರೆ. ರಬಿಗೆ 19624 ರೈತರು ವಿಮೆಗೆ ಒಳಪಡಿಸಿರುತ್ತಾರೆ ಎಂದು ಜಂಟಿ ಕೃಷಿ ನಿದೇರ್ಶಕರು ಸಭೆಗೆ ತಿಳಿಸಿದರು.

ಆಹಾರ ಇಲಾಖೆಯ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 106486 ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 36625 ಎಎವೈ, 371451 ಬಿಪಿಎಲ್ ಹಾಗೂ 53869 ಎಪಿಎಲ್ ಸೇರಿ ಒಟ್ಟು 461945 ಪಡಿತರ ಚೀಟಿಗಳನ್ನು ನೀಡಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 408076 ಪಡಿತರ ಚೀಟಿಗಳಿಗೆ ಶೇ.100 ರಷ್ಟು ಆಧಾರ ಸೀಡಿಂಗ್ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಂತೆ ಆಕ್ಷೇಪಣೆ, ವಿವರಣೆ ಹಾಗೂ ಮಾಹಿತಿ ಪಡೆಯಲು ನಿಶುಲ್ಕ ದೂರವಾಣಿ 1967 ಗೆ ಕರೆ ನೀಡಿ ಮಾಹಿತಿ ಪಡೆಯಲು ಅವಕಾಶವಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು.

ನಂತರ ದೀನ ದಯಾಳ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ, ರೇಷ್ಮೆ, ಅರಣ್ಯ, ಗ್ರಾಮೀಣ ಕುಡಿಯುವ ನೀರು, ವಸತಿ ಯೋಜನೆ ಸೇರಿದಂತೆ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನೆ ಮಾಡಿದರು.

For All Latest Updates

TAGGED:

ABOUT THE AUTHOR

...view details